ಅರಣ್ಯ ಇಲಾಖೆಯಿಂದ ಕಿರುಕುಳ: ತರೀಕೆರೆ ರೈತ ಆತ್ಮಹತ್ಯೆಗೆ ಯತ್ನ
ಚಿಕ್ಕಮಗಳೂರು, ಜೂನ್ 30: ಅರಣ್ಯ ಹಾಗೂ ಕಂದಾಯ ಅಧಿಕಾರಿಗಳು ನಮಗೆ ಉಳುಮೆ ಮಾಡಲು ಬಿಡುತ್ತಿಲ್ಲ ಎಂದು ರೈತನೋರ್ವ ಅರಣ್ಯ ಇಲಾಖೆ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ನಡೆದಿದೆ.
ಲಕ್ಕವಳ್ಳಿ ಸಮೀಪದ ಕುಂದೂರು ಗ್ರಾಮದ 50 ವರ್ಷದ ಮಾಗುಂಡ ಆತ್ಮಹತ್ಯೆಗೆ ಯತ್ನಿಸಿದಾತ. ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ, 1998 ರಲ್ಲಿ ಫಾರಂ 53 ರಲ್ಲಿ ಅರ್ಜಿ ಹಾಕಿದ್ದೇವೆ. ಆದರೆ ಉಳುಮೆ ಮಾಡಲು ಬಿಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ, ವಿಷ ಸೇವಿಸಿ ಬಿದ್ದು ನರಳಾಡಿದ್ದಾರೆ.
ಚಿಕ್ಕಮಗಳೂರು: ಲಕ್ಷಾಂತರ ರೂ. ಬೆಲೆಬಾಳುವ ಶ್ರೀಗಂಧ ಮರಗಳ ಕಳ್ಳತನ
ಕೂಡಲೇ ಅಧಿಕಾರಿಗಳು ಹಾಗೂ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ರೈತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. 30 ವರ್ಷಗಳಿಂದ ನಾವು ಇಲ್ಲೇ ಉಳುಮೆ ಮಾಡಿ ಬದುಕುತ್ತಿದ್ದೇವೆ. ಇಲ್ಲಿ ಸುಮಾರು 18 ಎಕರೆ ಜಮೀನಿದ್ದು, ಎಲ್ಲರೂ ಒಂದೂವರೆ, ಎರಡು ಎಕರೆ ಜಮೀನು ಉಳ್ಳವರಾಗಿದ್ದೇವೆ ಎಂದು ಆತ್ಮಹತ್ಯೆಗೆ ಯತ್ನಿಸಿದ ಮಾಗುಂಡ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಆದರೆ, ಅಧಿಕಾರಿಗಳು ನಮಗೆ ಉಳುಮೆ ಮಾಡಲು ಬಿಡುತ್ತಿಲ್ಲ. ಜಮೀನನ್ನು ಕಬಳಿಸಲು ಅಧಿಕಾರಿಗಳ ಮೇಲೆ ಸ್ಥಳೀಯ ರಾಜಕೀಯ ಮುಖಂಡ ಒತ್ತಡವಿದೆ ಎಂದು ಆರೋಪಿಸಿರುವ ಮಾಗುಂಡ ಕುಟುಂಬಸ್ಥರು, ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕಾಫಿ ನಾಡಿನಲ್ಲಿ ಕಬ್ಬೆಕ್ಕುಗಳ ಸರಣಿ ಸಾವು ತಂದ ಆತಂಕ
ಸ್ಥಳೀಯವಾಗಿ ಸುತ್ತಮುತ್ತ ನೂರಾರು ಜನ, ಸಾವಿರಾರು ಎಕರೆ ಒತ್ತುವರಿ ಮಾಡಿದ್ದಾರೆ. ಕೆಲವರು ಫಾರಂ 53 ರಡಿ ಅರ್ಜಿ ಹಾಕಿದ್ದಾರೆ. ಆದರೆ, ಅಧಿಕಾರಿಗಳು ನಮಗೆ ಮಾತ್ರ ಹಿಂಸೆ ಕೊಡುತ್ತಿದ್ದಾರೆ. ಬೇರೆ ಯಾರಿಗೂ ಏನನ್ನೂ ಕೇಳುತ್ತಿಲ್ಲ. ನಮಗೆ ಮಾತ್ರ ಈ ರೀತಿ ಮಾಡುತ್ತಿದ್ದಾರೆಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.