ದಯಾ ಮರಣಕ್ಕೆ ಪತ್ರ ಬರೆದ ಚಿಕ್ಕಮಗಳೂರು ವೃದ್ಧರ ಕಣ್ಣೀರ ಕಥೆ
ಚಿಕ್ಕಮಗಳೂರು, ಜನವರಿ 21: "ಒಂದು ಎಕರೆಗೆ ಒಂದು ಲಕ್ಷದಂತೆ 5 ಎಕರೆಗೆ ಐದು ಲಕ್ಷ ಕೊಡಿ. ನಿಮ್ಮ ತೋಟದ ಕಡೆ ಮುಖ ಮಾಡೂ ಮಲಗುವುದಿಲ್ಲ. ನಿಮ್ಮ ಅಕ್ಕಪಕ್ಕದ ತೋಟದವರನ್ನು ಹಾಗೆ ಬಿಟ್ಟಿರೋದು. ಇಲ್ಲ ಅಂದ್ರೆ ಪ್ರಧಾನಿ, ರಾಷ್ಟ್ರಪತಿ, ಸಿಎಂ ಯಾರಿಗೆ ಬೇಕಾದ್ರು ಪತ್ರ ಬರೀರಿ, ಅವರೇನು ಇಲ್ಲಿ ಬರ್ತಾರಾ. ನಮ್ ರಿಪೋರ್ಟ್ ಫೈನಲ್. ಎಲ್ ಏನ್ ಮಾಡಬೇಕು ಅದನ್ನು ಮಾಡಿ ಕೈ ಬಿಡ್ತೀವಿ. ಅದೇಗ್ ಜಮೀನು ಉಳಿಮೆ ಮಾಡ್ತೀರಾ, ನೋಡ್ತೀವಿ" ಅರಣ್ಯಾಧಿಕಾರಿಗಳ ಧಮ್ಕಿಯ ಡೈಲಾಗ್ ಇದು.
ದಯಾಮರಣಕ್ಕೆ ಅನುಮತಿ ನೀಡುವಂತೆ ಚಿಕ್ಕಮಗಳೂರಿನ ವೃದ್ಧರು ಪ್ರಧಾನಿಗೆ ಪತ್ರವನ್ನು ಬರೆದಿದ್ದಾರೆ. ಅರಣ್ಯಾಧಿಕಾರಿಗಳು ವೃದ್ಧರಿಗೆ ಧಮ್ಕಿ ಹಾಕುತ್ತಿದ್ದಾರೆ. 5 ಲಕ್ಷ ಹಣವನ್ನು ಕೊಡಲಾಗದೇ ಅಧಿಕಾರಿಗಳಿಂದ ಮೂರು ಬಾರಿ ಫಸಲನ್ನು ಕಳೆದುಕೊಂಡ ವೃದ್ಧ ದಂಪತಿಗಳು ಕಣ್ಣೀರು ಹಾಕುತ್ತಿದ್ದಾರೆ.
ಮಲೆನಾಡನ್ನು ಆಪೋಶನ ತೆಗೆದುಕೊಳ್ಳಲು ಹೊರಟ ರಾಜ್ಯ ಸರ್ಕಾರ!
ಇವರ ಹೆಸರು ರಾಮೇಗೌಡ ಮತ್ತು ಶಾರದಮ್ಮ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ದುರ್ಗಾ ಗ್ರಾಮದವರು. 40 ವರ್ಷಗಳಿಂದ 15 ಎಕರೆ ಕಂದಾಯ ಭೂಮಿಯನ್ನು ಒತ್ತುವರಿ ಮಾಡಿ ಕಾಫಿ, ಮೆಣಸನ್ನು ಬೆಳೆದಿದ್ದರು. ಅರಣ್ಯ ಅಧಿಕಾರಿಗಳು ಇದು ಅರಣ್ಯ ಭೂಮಿ ಎಂದು 10 ಎಕರೆ ತೋಟವನ್ನು ವಶಪಡಿಸಿಕೊಂಡು 30 ವರ್ಷದ ಫಸಲು ಬಂದಿದ್ದ ತೋಟವನ್ನು ಕಡಿದು ಪ್ಲಾಂಟೇಷನ್ ಮಾಡಿದ್ದಾರೆ.
ಎಂಪಿಎಂ ಪೇಪರ್ ಮಿಲ್ಸ್, ನೀಲಗಿರಿ, ಅರಣ್ಯ, ಭೂ ಮಾಫಿಯಾ ಇತ್ಯಾದಿ
ಅವರಿವರ ಕೈ-ಕಾಲು ಹಿಡಿದು ಬದುಕಿಗಾಗಿ ಐದು ಎಕರೆ ಉಳಿಸಿಕೊಂಡು ಫಾರಂ 57ನಲ್ಲಿ ಅರ್ಜಿ ಹಾಕಿ ದಂಪತಿಗಳು ಬದುಕುತ್ತಿದ್ದಾರೆ. ಆದರೆ, ಆಲ್ದೂರು ಅರಣ್ಯ ಅಧಿಕಾರಿಗಳು ಮೂರು ಬಾರಿ ಎರಡ್ಮೂರು ವರ್ಷದ ಕಾಫಿಗಿಡ ಹಾಗೂ ಮೆಣಸು ಬಳ್ಳಿಯನ್ನು ಕಡಿದಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಿರುಕುಳ: ಕುಟುಂಬದಿಂದ ಆತ್ಮಹತ್ಯೆ ಬೆದರಿಕೆ
ಲಂಚ ಕೇಳುತ್ತಿರುವ ಅಧಿಕಾರಿಗಳು
ಎಕರೆಗೆ ಒಂದರಂತೆ ಐದು ಎಕರೆಗೆ 5 ಲಕ್ಷ ಕೊಡಿ ಈ ಕಡೆ ತಲೆ ಹಾಕಲ್ಲ ಅಂತ ಅರಣ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಕೊಡಲಾಗದೆ ಈ ವೃದ್ಧ ದಂಪತಿ ದಯಾಮರಣಕ್ಕೆ ಅನುಮತಿ ಕೋರಿ ಪ್ರಧಾನಿ, ರಾಷ್ಟ್ರಪತಿ, ಸಿಎಂ ಸೇರಿ ಎಲ್ಲರಿಗೂ ಪತ್ರ ಬರೆದಿದ್ದಾರೆ. ಪ್ರಧಾನಿ ಕಚೇರಿಯಿಂದ ಚೀಫ್ ಸೆಕ್ರಟರಿ, ಎಸ್ಪಿಗೆ ಪತ್ರ ಬಂದಿದ್ದು ವರದಿ ನೀಡುವಂತೆ ಸೂಚಿಸಿದ್ದಾರೆ. ಆದರೆ, ಅರಣ್ಯಾಧಿಕಾರಿಗಳ ದೌರ್ಜನ್ಯ ಇನ್ನೂ ನಿಂತಿಲ್ಲ. ಇದರಿಂದಾಗಿ ವೃದ್ಧ ದಂಪತಿಗಳು ಕಂಗಾಲಾಗಿದ್ದಾರೆ.
ಬೆದರಿಕೆ ಹಾಕುತ್ತಿದ್ದಾರೆ
ತೋಟಕ್ಕೆ ಕಾಲಿಟ್ಟರೆ ಗಂಧದ ಕಳ್ಳತನ, ಪ್ರಾಣಿ ಬೇಟೆ ಕೇಸ್ ಹಾಕಿ ಒಳಗೆ ಹಾಕುತ್ತೇವೆ ಎಂದು ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಇವರ ತೋಟದ ಪಕ್ಕದಲ್ಲೇ 25 ಎಕರೆ, 10 ಎಕರೆ ಒತ್ತುವರಿ ಮಾಡಿ ತೋಟ ಮಾಡಿರುವವರ ಬಳಿ ಅಧಿಕಾರಿಗಳು ಹೋಗುತ್ತಿಲ್ಲ. ಆಲ್ದೂರು ಸಮೀಪದ ಚಿಕ್ಕಮಾಗರವಳ್ಳಿ ಗ್ರಾಮದ ಸರ್ವೇ ನಂಬರ್ 166ರಲ್ಲಿ ಸುಮಾರು 800 ಎಕರೆಯಷ್ಟು ಗೋಮಾಳವಿದ್ದು ಹತ್ತಾರು ಜನ ನೂರಾರು ಎಕರೆ ಒತ್ತುವರಿ ಮಾಡಿದ್ದಾರೆ. ಯಾರ ಬಳಿಯೂ ಹೋಗದ ಅಧಿಕಾರಿಗಳು ವೃದ್ಧರನ್ನು ಹಣಕ್ಕಾಗಿ ಪೀಡಿಸುತ್ತಿದ್ದಾರೆ.
ಅಧಿಕಾರಿಗಳ ವಿರುದ್ಧ ಆಕ್ರೋಶ
"ಇದು ಡೀಮ್ಡ್ ಫಾರೆಸ್ಟ್ ಅಂತ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ. ಡೀಮ್ಡ್ ಫಾರೆಸ್ಟ್ ಕುರಿತು ಸರ್ಕಾರವಿನ್ನೂ ಆದೇಶವನ್ನೇ ಹೊರಡಿಸಿಲ್ಲ. ಈಗಲೇ ಅಧಿಕಾರಿಗಳು ಹಣಕೊಟ್ಟವರಿಗೆ ಬಿಟ್ಟು ಕೊಡದವರ ಮೇಲೆ ಅರಣ್ಯದ ಹೆಸರಲ್ಲಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳು ಎಲ್ಲರ ಜಮೀನು ಬಿಡಿಸಲಿ ನಾವೂ ಬಿಡುತ್ತೇವೆ. ಆದರೆ, ಯಾರ ಬಳಿಯೂ ಹೋಗಲ್ಲ. ನಮ್ಮ ಬಳಿ ಬಂದು ಜಮೀನು ಬಿಡಿ ಇಲ್ಲ, ಹಣ ಕೊಡಿ ಅಂತಾರೆ" ಎಂದು ರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು. ಓರ್ವ ವರ್ಷದ ಹಿಂದೆ ಸಾವನ್ನಪ್ಪಿದ್ದಾನೆ. ಮತ್ತೋರ್ವ ತನ್ನ ದಾರಿ ತಾನು ನೋಡಿಕೊಂಡಿದ್ದಾನೆ.
Recommended Video
ಕಾಫಿ, ಮೆಣಸು ಗಿಡ ಕಡಿಯುತ್ತಾರೆ
ಅರಣ್ಯ ಅಧಿಕಾರಿಗಳು ಹಣಕ್ಕಾಗಿ ಪ್ರಕೃತಿ ಹೆಸರಲ್ಲಿ ಅನಾಚಾರ ಮಾಡುತ್ತಿದ್ದಾರೆ. ರಾಮೇಗೌಡರ ಪಕ್ಕದ ತೋಟದ ಜಮೀನಿನಲ್ಲಿ ಕಾಫಿ, ಮೆಣಸು ನಳನಳಿಸುತ್ತಿದೆ. ಅದು ಕೂಡ ಕಂದಾಯ ಭೂಮಿ. ಇವರದ್ದು ಸಹ ಕಂದಾಯ ಭೂಮಿಯೇ. ಮನಸ್ಸಿಗೆ ಬಂದಾಗ ಹೋಗಿ ಗಿಡ ಕಡಿಯೋ ಅಧಿಕಾರಿಗಳಿಂದ ರಕ್ಷಣೆ ನೀಡುವಂತೆ ಪ್ರಧಾನಿ ಕಚೇರಿಗೂ ಪತ್ರವನ್ನು ಬರೆದಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಸರ್ಕಾರದ ಅಂತಿಮ ನಿರ್ಧಾರ ಹೊರಬೀಳುವ ತನಕ ವೃದ್ಧರಿಗೆ ನೆರವಿಗೆ ಬರಬೇಕು ಎಂದು ಆಗ್ರಹಿಸಲಾಗುತ್ತಿದೆ.