ಚಿಕ್ಕಮಗಳೂರಿಗೂ ಕಾಲಿಟ್ಟಿತು ಕೊರೊನಾ; ವೈದ್ಯ, ಗರ್ಭಿಣಿ ಸೇರಿ ಐವರಿಗೆ ಸೋಂಕು
ಚಿಕ್ಕಮಗಳೂರು, ಮೇ 19: ಗ್ರೀನ್ ಝೋನ್ ಆಗಿದ್ದ ಚಿಕ್ಕಮಗಳೂರಿಗೂ ಕೊರೊನಾ ಕಾಲಿಟ್ಟಿದೆ. 55 ದಿನಗಳ ಬಳಿಕ ಕಾಫಿ ನಾಡಿನ ಐವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಚಿಕ್ಕಮಗಳೂರಿನ ಕೆಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.
42 ವರ್ಷದ ಸರ್ಕಾರಿ ವೈದ್ಯ, 27 ವರ್ಷದ ಗರ್ಭಿಣಿ, 7, 10 ವರ್ಷದ ಬಾಲಕರು, 17 ವರ್ಷದ ಯುವತಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ನಿನ್ನೆಯಷ್ಟೆ ತರೀಕೆರೆಯ ಇಬ್ಬರಲ್ಲಿ ಕೊರೊನಾ ಶಂಕೆ ವ್ಯಕ್ತವಾಗಿದ್ದು, ಇಬ್ಬರ ವರದಿಯೂ ನೆಗೆಟಿವ್ ಬಂದಿತ್ತು. ಹೀಗೆಂದು ನಿರಾಳವಾಗಿದ್ದ ಚಿಕ್ಕಮಗಳೂರಿನಲ್ಲಿ ಕಾಣಿಸಿಕೊಂಡಿರುವ ಈ ಐದು ಪ್ರಕರಣಗಳು ಭೀತಿ ಮೂಡಿಸಿವೆ.
ತರೀಕೆರೆಯ ಇಬ್ಬರಿಗೆ ಕೊರೊನಾ ನೆಗೆಟಿವ್; ಮರೆಯಾಯಿತು ಆತಂಕ
ಮೂಡಿಗೆರೆ ವೈದ್ಯ, ತರೀಕೆರೆಯ ಗರ್ಭಿಣಿಯಲ್ಲಿ ಸೋಂಕು ದೃಢ
ಮೂಡಿಗೆರೆ ತಾಲ್ಲೂಕಿನ ಪ್ರಾಥಮಿಕ ಕೇಂದ್ರದಲ್ಲಿ ಕೊರೊನಾ ಸೋಂಕಿತ ಈ ವೈದ್ಯ ಕಾರ್ಯ ನಿರ್ವಹಿಸುತ್ತಿದ್ದುದಾಗಿ ತಿಳಿದುಬಂದಿದೆ. ತರೀಕೆರೆ ಮೂಲದ ಗರ್ಭಿಣಿಯು ಮುಂಬೈನಿಂದ ಹಿಂದಿರುಗಿದವರಾಗಿದ್ದು, ಇವರ ಗಂಟಲು ದ್ರವವನ್ನು ಮೇ 16ರಂದು ಹಾಸನದ ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು. ಇದೀಗ ಈ ಇಬ್ಬರಲ್ಲೂ ಕೊರೊನಾ ಇರುವುದು ದೃಢಪಟ್ಟಿದೆ. ಇವರೊಂದಿಗೆ 7, 10 ವರ್ಷದ ಬಾಲಕರು, 17 ವರ್ಷದ ಯುವತಿಯಲ್ಲಿ ಕೊರೊನಾ ಕಂಡುಬಂದಿದೆ.
ಬೆಚ್ಚಿಬೀಳಿಸಿದ ವೈದ್ಯನ ಟ್ರಾವೆಲ್ ಹಿಸ್ಟರಿ
ಕೊರೊನಾ ಸೋಂಕಿತ ವೈದ್ಯನ ಟ್ರಾವೆಲ್ ಹಿಸ್ಟರಿ ಅಧಿಕಾರಿಗಳನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಈ ವೈದ್ಯ ದಿನಕ್ಕೆ 80ರಿಂದ 100 ಜನರಿಗೆ ಚಿಕಿತ್ಸೆ ಕೊಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮದುವೆ ಸಮಾರಂಭಗಳಲ್ಲೂ ಭಾಗವಹಿಸಿದ್ದು, ಈ ಅವಧಿಯಲ್ಲಿ ನೂರಕ್ಕೂ ಹೆಚ್ಚು ಸ್ನೇಹಿತರ ಸಂಪರ್ಕಕ್ಕೆ ಬಂದಿದ್ದರು ಎನ್ನುವ ವಿಷಯವೇ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಹಲವು ಜನರ ಸಂಪರ್ಕಕ್ಕೆ ಬಂದಿದ್ದ ವೈದ್ಯ
ಈ ವೈದ್ಯ ಕಳೆದ 20 ದಿನದಲ್ಲಿ ಬೆಂಗಳೂರು, ಕೊಡಗಿಗೆ ಹೋಗಿ ಬಂದಿದ್ದರು ಎಂಬ ಮಾಹಿತಿ ಲಭಿಸಿದೆ. ಕಳೆದ 15 ದಿನದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿದ್ದಾರೆ ಎಂಬ ಸಂಗತಿ ದಿಗಿಲು ಹುಟ್ಟಿಸಿದೆ. ಅಲ್ಲದೇ ಮೂಡಿಗೆರೆ ಪಟ್ಟಣದ ಹಲವರೊಂದಿಗೆ ನೇರ ಸಂಪರ್ಕದಲ್ಲಿದ್ದು, ಈ ವೈದ್ಯನ ಜೊತೆ ಕೆಲಸ ಮಾಡುತ್ತಿದ್ದ ನರ್ಸ್ ಗಳು, ಆಶಾ ಕಾರ್ಯಕರ್ತೆಯರಿಗೂ ನಡುಕ ಶುರುವಾಗಿದೆ. ವೈದ್ಯನ ಅಕ್ಕಪಕ್ಕದ ಮನೆಯವರು, ಆಪ್ತವಲಯದಲ್ಲಿ ಭೀತಿ ಉಂಟಾಗಿದೆ.
ಮೂಡಿಗೆರೆಗೆ ದೌಡಾಯಿಸಿದ ಅಧಿಕಾರಿಗಳು
ವೈದ್ಯನಲ್ಲಿ ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಜಿಲ್ಲಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳು ಮೂಡಿಗೆರೆಗೆ ದೌಡಾಯಿಸಿದ್ದಾರೆ. ಈಗಾಗಲೇ ಅನೇಕರನ್ನು ಆರೋಗ್ಯ ಇಲಾಖೆ ಪರೀಕ್ಷೆಗೆ ಒಳಪಡಿಸಿದೆ. ಮೂಡಿಗೆರೆಯಲ್ಲಿ ಕಂಟೈನ್ಮೆಂಟ್ ಝೋನ್ ನಿರ್ಮಾಣ ಮಾಡಲಾಗಿದೆ. ಪ್ರತಿಯೊಬ್ಬರೂ ಜಿಲ್ಲಾಡಳಿತಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಮನವಿ ಮಾಡಿಕೊಂಡಿದ್ದಾರೆ. ಇಷ್ಟು ದಿನಕ್ಕಿಂತ ಇನ್ನು ಮುಂದೆ ಎಚ್ಚರಿಕೆ ವಹಿಸಲು ಸಲಹೆ ನೀಡಿದ್ದಾರೆ.