ಪ್ರಥಮ ಜಾನಪದ ಸಮ್ಮೇಳನಕ್ಕೆ ಸಜ್ಜಾಗಿದೆ ಚಿಕ್ಕಮಗಳೂರು
ಚಿಕ್ಕಮಗಳೂರು, ನವೆಂಬರ್ 15: ಕನ್ನಡ ಜಾನಪದ ಪರಿಷತ್ ವತಿಯಿಂದ ನಡೆಸಲಾಗುವ ಚಿಕ್ಕಮಗಳೂರು ಜಿಲ್ಲಾ ಘಟಕದ ಪ್ರಥಮ ಜಾನಪದ ಸಮ್ಮೇಳನವು ನಾಳೆ ಚೌಳಹಿರಿಯೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ.
ನವೆಂಬರ್ 16, ಶನಿವಾರದಂದು ನಡೆಯಲಿರುವ ಈ ಸಮ್ಮೇಳನದ ಅಧ್ಯಕ್ಷತೆಯನ್ನು ಮಾಳೇನಹಳ್ಳಿ ಬಸಪ್ಪ ಅವರು ವಹಿಸಿಕೊಳ್ಳಲಿದ್ದಾರೆ. ಬೆಳಿಗ್ಗೆ 8.30ಕ್ಕೆ ಜಾನಪದ ಕಲಾತಂಡ ಮತ್ತು ಪೂರ್ಣಕುಂಭದೊಂದಿಗೆ ಕಾರ್ಯಕ್ರಮದ ಮೆರವಣಿಗೆ ನಡೆಯಲಿದೆ. ಚೌಳಹಿರಿಯೂರು ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿರುವ ಶ್ರೀಮತಿ ವನಮಾಲ ದೇವರಾಜ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಾಷ್ಟ್ರ ಧ್ವಜಾರೋಹಣ, ಪರಿಷತ್ತು ಧ್ವಜಾರೋಹಣ ಮತ್ತು ನಾಡ ಧ್ವಜಾರೋಹಣ ಕಾರ್ಯಕ್ರಮವೂ ನಡೆಯಲಿದೆ.
ಎಲೆಮರೆಕಾಯಿಯಂತಿರುವ ಜಾನಪದ ಕಲಾವಿದರನ್ನು ಗುರಿತಿಸಿ, ಆ ಮೂಲಕ ಕಲೆಯನ್ನು ಉಳಿಸಿ, ಬೆಳೆಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದ್ದು, ಕಲಾವಿದರಿಗೆ, ವಿದ್ವಾಂಸರಿಗೆ ಜಾನಪದ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಹಲವು ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಕೊಪ್ಪ ತಾಲೂಕಿನ ಖ್ಯಾತ ಬಡಗುತಿಟ್ಟು ಮದ್ದಳೆಗಾರ ಭಾಗವತರ ಮನೆ ವೆಂಕಟೇಶ್, ಚಟ್ನಳ್ಳಿ ಮಹೇಶ್, ಬೆಳವಾಡಿ ಮಂಜುನಾಥ್ ಅವರನ್ನು ಗೌರವಿಸಲಾಗುತ್ತದೆ. ಅಜ್ಜಂಪುರ, ಚಿಕ್ಕಮಗಳೂರು, ನರಸಿಂಹರಾಜಪುರ, ಕೊಪ್ಪ, ಶೃಂಗೇರಿ, ತರೀಕೆರೆ, ಮೂಡಿಗೆರೆ, ಕಡೂರು ಭಾಗದಲ್ಲಿರುವ ಪ್ರಮುಖ ಜಾನಪದ ಕಲಾವಿದರನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತದೆ.