ಕೊರೊನಾ ವೈರಸ್ ಸೋಂಕಿಗೆ ಕಾಫಿನಾಡಲ್ಲಿ ಮೊದಲ ಬಲಿ
ಚಿಕ್ಕಮಗಳೂರು, ಜೂನ್ 18: ಕೊರೊನಾ ವೈರಸ್ ಸೋಂಕು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಬಲಿ ಪಡೆದುಕೊಂಡಿದೆ. ಅಜ್ಜಂಪುರ ಮೂಲದ 72 ವರ್ಷದ ಮಹಿಳೆ ಗುರುವಾರ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
72 ವರ್ಷದ ಮಹಿಳೆಯಲ್ಲಿ ಕೊರೊನಾ ವೈರಸ್ ಸೋಂಕು ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಬುಧವಾರ ಸಂಜೆ, ಚಿಕ್ಕಮಗಳೂರು ನಗರದ ಕೋವಿಡ್-19 ಚಿಕಿತ್ಸಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಗುರುವಾರ ಮಧ್ಯಾಹ್ನದ ವೇಳೆ ವೃದ್ಧೆ ಕೋವಿಡ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುವ ಮೂಲಕ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಮೊದಲ ಬಲಿಯಾಗಿದೆ.
ನಾಲ್ಕನೇ ಬಾರಿಯೂ ನೆಗೆಟಿವ್ ಬಂತು ಕಡೂರು ವಿದ್ಯಾರ್ಥಿ ಸೋಂಕಿನ ವರದಿ
ಅಜ್ಜಂಪುರ ತಾಲ್ಲೂಕು ಡಣಯಕಾಪುರ ಗ್ರಾಮದ ವೃದ್ಧೆ ಮೂತ್ರಪಿಂಡ ಸಮಸ್ಯೆಯಿಂದ ಸೋಮವಾರ ಅಜ್ಜಂಪುರ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರವಿದ್ದ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಟೆಸ್ಟ್ ಮಾಡಲಾಗಿತ್ತು. ಕೊರೊನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಕೋವಿಡ್ ಚಿಕಿತ್ಸಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವಪ್ಪಿದ್ದಾರೆ.
ವೃದ್ಧ ಮಹಿಳೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಗಳ ಮನೆಗೆ ಕಳೆದ ಕೆಲವು ದಿನಗಳ ಹಿಂದೆ ಹೋಗಿ ಬಂದಿರುವುದಾಗಿ ತಿಳಿದು ಬಂದಿದೆ. ರೋಗಿ ಸಂಖ್ಯೆ-7573 ಸೋಂಕಿತರ ಸಂಪರ್ಕದಿಂದ ವೃದ್ಧೆ ಮಹಿಳೆಗೆ ಸೋಂಕು ತಗುಲಿದೆ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟಿಸಿದೆ.
ಚಿಕ್ಕಮಗಳೂರಿನಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ನಲ್ಲೇ ದೋಷವಿದೆಯಾ?
ವೃದ್ಧೆ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅಜ್ಜಿಗೆ ಚಿಕಿತ್ಸೆ ನೀಡಿರುವ ಇಬ್ಬರು ವೈದ್ಯರು, ನರ್ಸ್ ಹಾಗೂ ನಾಲ್ಕು ಜನ ವಾರ್ಡ್ ನಲ್ಲಿದ್ದ ಕೆಲಸಗಾರರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.