ಶೋಭಾ ಕರಂದ್ಲಾಜೆ ಮೇಲೆ ಹಲ್ಲೆ ಆರೋಪ; 30 ಮಂದಿ ಮೇಲೆ ಎಫ್ ಐಆರ್ ದಾಖಲು
ಚಿಕ್ಕಮಗಳೂರು, ಜನವರಿ 9: ಸಂಸದೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರಿನಲ್ಲಿ ಸಭೆಗೆ ಆಗಮಿಸಿದ್ದ ಸಂದರ್ಭ ಅವರ ಮೇಲೆ ಮನವಿ ನೀಡುವ ನೆಪದಲ್ಲಿ ಹಲ್ಲೆಯಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 30 ಕಾಂಗ್ರೆಸ್ಸಿಗರ ಮೇಲೆ ಎಫ್ ಐಆರ್ ದಾಖಲಾಗಿದೆ.
ಜನವರಿ 7ರಂದು ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಆ ಸಂದರ್ಭ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಪತ್ರ ಸಲ್ಲಿಸಲು ಮುಂದಾಗಿದ್ದರು. ಈ ಸಂದರ್ಭ ಮಹಿಳಾ ಕಾಂಗ್ರೆಸ್ ನಾಯಕಿಯೊಬ್ಬರಿಗೆ ಸಂಸದೆ ಶೋಭಾ ಕರಂದ್ಲಾಜೆ ಹಲ್ಲೆ ಯತ್ನ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಆ ನಂತರ ಮನವಿ ನೆಪದಲ್ಲಿ ಶೋಭಾ ಕರಂದ್ಲಾಜೆ ಅವರ ಮೇಲೆ ಹಲ್ಲೆಯಾಗಿದೆ, ಕಾಂಗ್ರೆಸಿಗರನ್ನು ಬಂಧಿಸಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ದೂರು ನೀಡಿದ್ದರು.
ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮಂತ್, ಮಾಜಿ ಎಂ.ಎಲ್.ಸಿ ಗಾಯತ್ರಿ ಶಾಂತೇಗೌಡ, ಎಐಸಿಸ್ ಕಾರ್ಯದರ್ಶಿ ಬಿ.ಎಂ ಸಂದೀಪ್ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ 30 ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೂರು ದಾಖಲಾಗಿದೆ.