ಮಲೆನಾಡಿಗರಲ್ಲಿ ಮತ್ತೆ ಭೀತಿ ಹುಟ್ಟಿಸಿದ ಮಂಗನ ಕಾಯಿಲೆ; ವೈರಸ್ ಪತ್ತೆ
ಚಿಕ್ಕಮಗಳೂರು, ಜನವರಿ 24: ಕಾಫಿ ನಾಡಿನಲ್ಲಿ ಮಂಗನ ಕಾಯಿಲೆ ಭೀತಿ ಮತ್ತೆ ಆವರಿಸಿದೆ. ಜಿಲ್ಲೆಯಲ್ಲಿ ಕಾಯಿಲೆಯ ಕೆಎಫ್ ಡಿ ವೈರಸ್ ಪತ್ತೆಯಾಗಿದ್ದು, ಮಲೆನಾಡಿಗರಲ್ಲಿ ಮಂಗನ ಕಾಯಿಲೆಯ ಆತಂಕ ತುಂಬಿದೆ.
ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಶಾಂತಿಗ್ರಾಮದಲ್ಲಿ ವೈರಸ್ ಪತ್ತೆಯಾಗಿದ್ದು, ಉಣ್ಣೆಯಲ್ಲಿ ವೈರಸ್ ಇರುವುದು ಕಂಡುಬಂದಿದೆ.
ಗ್ರಾಮದ 20 ಮಂದಿಗೆ ಕಚ್ಚಿದ ಒಂಟಿ ಮಂಗ, ಆತಂಕ
ಇಲ್ಲಿನ ಪ್ರಾಣಿಗಳ ಉಣ್ಣೆಯಲ್ಲಿ ಪಾಸಿಟಿವ್ ಅಂಶ ಇದೆ ಎಂಬುದು ಶಿವಮೊಗ್ಗ ಪ್ರಯೋಗಾಲಯದಿಂದ ದೃಢಪಟ್ಟಿದೆ. ಜನವರಿ 9ರಂದು ಈ ವೈರಸ್ ಪತ್ತೆಯಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 35 ಮಂಗಗಳು ಸಾವನ್ನಪ್ಪಿದವು. 18 ಮಂಗಗಳ ಅಂಗಾಂಗ ಪರೀಕ್ಷೆ ನಡೆಸಲಾಗಿತ್ತು. ಒಂದು ಮಂಗದ ದೇಹದಲ್ಲಿ ಪಾಸಿಟಿವ್ ವೈರಸ್ ಪತ್ತೆಯಾಗಿತ್ತು.
ಕಳೆದ ವರ್ಷ ಕೊಪ್ಪದ ಜಯಪುರದ ಹಾಡುಗಾರು ಗ್ರಾಮದಲ್ಲಿ ಒಬ್ಬರಲ್ಲಿ ಈ ಅಂಶ ಪತ್ತೆಯಾಗಿತ್ತು. ಹೀಗಾಗಿ ಇದೀಗ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ತರಿಕೇರೆ, ಮೂಡಿಗೆರೆ, ಕೊಪ್ಪ ತಾಲೂಕಿನ ಶಾಂತಿಗ್ರಾಮದ ಹಲವು ಗ್ರಾಮದಲ್ಲಿ ಜನರಿಗೆ ಚುಚ್ಚುಮದ್ದು ನೀಡಲಾಗಿದೆ. ಜಿಲ್ಲಾ ವಿಚಕ್ಷಣ ಅಧಿಕಾರಿ ಡಾ.ಮಂಜುನಾಥ ನೇತೃತ್ವದ ತಂಡದಿಂದ ಮಂಗನ ಕಾಯಿಲೆ ಬಗ್ಗೆ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.