ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ, ಓರ್ವ ಸಾವು..!
ಚಿಕ್ಕಮಗಳೂರು, ಮೇ.10: ಮಲೆನಾಡಿನಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಮುಂದುವರೆದಿದೆ. ಕಾಡಾನೆ ದಾಳಿಯಿಂದ ಚಿಕ್ಕಮಗಳೂರು ಜಿಲ್ಲೆ ಸಕಲೇಶಪುರ ತಾಲೂಕಿನ ಗಾಳಿಗುಡ್ಡ ಗ್ರಾಮದ ರವಿ (48) ಎಂಬುವರು ಬಲಿಯಾಗಿದ್ದಾರೆ.
ಇಂದು ಬೆಳಗ್ಗೆ ಬಾಳ್ಳುಪೇಟೆಯ ಗೌರಿಗದ್ದೆ ಗ್ರಾಮದ ಬಿ.ಡಿ ವಿಶ್ವನಾಥ್ ಎಂಬುವರ ಕಾಫಿತೋಟಕ್ಕೆ 20ಕ್ಕೂ ಹೆಚ್ಚು ಕಾರ್ಮಿಕರು ಹೋಗಿದ್ದರು. ಈ ವೇಳೆ ಕಾಫಿ ಗಿಡಗಳ ಮಧ್ಯೆ ಇದ್ದ ಕಾಡಾನೆಗಳು, ಏಕಾಏಕಿ ದಾಳಿ ನಡೆಸಿವೆ. ಕಾಡಾನೆಗಳ ದಾಳಿಯಿಂದ ಪಾರಾಗಲು ರವಿಕುಮಾರ್ ಪ್ರಯತ್ನ ಮಾಡಿದರೂ ಸಾಧ್ಯವಾಗದೆ ಕಾಡಾನೆ ದಾಳಿಗೆ ತುತ್ತಾಗಿದ್ದಾರೆ.
ಮೃತ ರವಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಸ್ಥಳಕ್ಕೆ ಜಿಲ್ಲಾ ಅರಣ್ಯಾಧಿಕಾರಿ ಬಸವರಾಜ್ ಸೇರಿದಂತೆ, ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳುವ ಕಾರ್ಯ ಮಾಡಿದದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಇಷ್ಟೆಲ್ಲಾ ದುರ್ಘಟನೆಗಳು ಪದೇ ಪದೆ ನಡೆಯುತ್ತಿದ್ದರೂ ಅರಣ್ಯ ಸಚಿವರಾಗಲೀ ಸರ್ಕಾರದ ಪ್ರತಿನಿಧಿಗಳಾಗಲೀ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸತ್ತಾಗ ಸ್ಥಳಕ್ಕೆ ಬಂದು 7, 5 ಲಕ್ಷದ ಚೆಕ್ ನೀಡಿ ಕೈ ತೊಳೆದುಕೊಳ್ಳುತ್ತಾರೆ ಎಂದರು ಕಿಡಿಕಾರಿದರು.
ಮೊನ್ನೆ ಮೊನ್ನೆ ನಡೆದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಕಾಫಿ ಬೆಳೆಗಾರರ ಹಲವು ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟಾಗ ಶಾಶ್ವತ ಪರಿಹಾರ ದೊರಕಿಸಿ ಕೊಡುತ್ತೇವೆ ಅಂತ ಕಂದಾಯ ಸಚಿವ ಆರ್ ಅಶೋಕ್ ಕೂಡ ಭರವಸೆ ನೀಡಿದರು. ಆದರೆ ಭರವಸೆ ನೀಡಿದ ವಾರದಲ್ಲಿಯೇ ಈಗ ಆನೆದಾಳಿಗೆ ಮತ್ತೊಂದು ಜೀವ ಬಲಿಯಾಗಿದೆ. ಸರ್ಕಾರ ಈ ಬೇಜವಾಬ್ದಾರಿಯಿಂದ ಆನೆ ದಾಳಿಗೆ ಇನ್ನೆಷ್ಟು ಬಲಿಯಾಗಬೇಕು ಎಂದು ಸರ್ಕಾರಕ್ಕೆ ಹಿಡಿಶಾಪ ಹಾಕಿದರು.
ಆನೆದಾಳಿಯಿಂದ ಅದೃಷ್ಟವಶಾತ್ ಪಾರಾದ ನಾಲ್ವರು ಕಾರ್ಮಿಕರು..!
ಆನೆ ದಾಳಿಗೆ ತುತ್ತಾದ ರವಿ ಜೊತೆಗೆ ಇನ್ನೂ ನಾಲ್ವರು ಕಾಫಿತೋಟದಲ್ಲಿ ಕೆಲಸ ಮಾಡುತ್ತಿರುವಾಗ ಏಕಾಏಕಿ ಆನೆ ದಾಳಿ ನಡೆದಿದೆ. ದುರದೃಷ್ಟವಶಾತ್ ರವಿ ಆನೆ ದಾಳಿಗೆ ಸಿಕ್ಕಿದ್ದು, ಇನ್ನುಳಿದ ನಾಲ್ವರು ದಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ವಲ್ಪ ಯಾಮಾರಿದ್ರೂ ಇನ್ನೂ ಎಷ್ಟು ಜನ ಕಾರ್ಮಿಕರ ಜೀವ ಹೋಗುತ್ತಿತ್ತೋ ಗೊತ್ತಿಲ್ಲ. ಸದ್ಯ ಮೃತ ರವಿಯೇ ತನ್ನ ಕುಟುಂಬಕ್ಕೆ ಆಧಾರವಾಗಿದ್ದ. ದಿನೇ ದಿನೇ ಕಾಡಾನೆ ಹಾವಳಿ ಹೆಚ್ಚುತ್ತಿದ್ದು, ಜೀವನ ನಡೆಸೋದೆ ಕಷ್ಟವಾಗಿದೆ. ಕೂಲಿ ಮಾಡದೇ ಇದ್ದರೆ ನಮ್ಮ ಜೀವನ ನಡೆಸಲು ಸಾಧ್ಯವಿಲ್ಲ. ಸರ್ಕಾರ ಕೂಡಲೇ ನಮಗೆ ಪರ್ಯಾಯ ಕೆಲಸ ಕೊಡಲಿ ಇಲ್ಲ ಕಾಡಾನೆ ಕಾಟ ಶಾಶ್ವತ ಪರಿಹಾರ ಒದಗಿಸಲಿ ಎಂದರು.