ತೇಜಸ್ವಿ ಈ ಕೃತಿಯಿಂದ ಕನ್ನಡ ಸಾಹಿತ್ಯಕ್ಕೆ ಸಂಚಲನ: ಡಾ. ಸಂಪತ್
ಕೊಟ್ಟಿಗೆಹಾರ, ಜುಲೈ 8: ಕೊಟ್ಟಿಗೆಹಾರದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ಇತ್ತೀಚಿನ ತೇಜಸ್ವಿ ಓದು ಮತ್ತು ಮನೆಮನೆಗೆ ತೇಜಸ್ವಿ ಕಾರ್ಯಕ್ರಮದಲ್ಲಿ ಲೇಖಕ, ಕನ್ನಡ ಉಪನ್ಯಾಸಕ ಡಾ. ಸಂಪತ್ ಬೆಟ್ಟಗೆರೆ ಪಾಲ್ಗೊಂಡಿದ್ದರು.
ಕನ್ನಡ ಸಾಹಿತ್ಯಕ್ಕೆ ಸಂಚಲನ ಉಂಟು ಮಾಡಿದ ಕೃತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ''ವ್ಯಕ್ತಿ ವಿಶಿಷ್ಟ ಸಿದ್ಧಾಂತ'' ಎಂದು ಲೇಖಕ, ಕನ್ನಡ ಉಪನ್ಯಾಸಕ ಡಾ. ಸಂಪತ್ ಬೆಟ್ಟಗೆರೆ ಹೇಳಿದರು.
ತೇಜಸ್ವಿ ಓದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೈಎಸ್ವಿ ದತ್ತ
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆದ ತೇಜಸ್ವಿ ಓದು ಮೊಗೆದಷ್ಟು ಬೆರಗು ತೆರೆದಷ್ಟು ಅರಿವು ಸಾಮಾಜಿಕ ಜಾಲತಾಣಗಳ ನೇರಪ್ರಸಾರದ ಕಾರ್ಯಕ್ರಮದಲ್ಲಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ವ್ಯಕ್ತಿ ವಿಶಿಷ್ಟ ಸಿದ್ಧಾಂತ ಮತ್ತು ಯಮಳ ಪ್ರಶ್ನೆ ಕೃತಿಯ ಬಗ್ಗೆ ಅವರು ಮಾತನಾಡಿದರು.
''ವ್ಯಕ್ತಿ ವಿಶಿಷ್ಟ ಸಿದ್ಧಾಂತ ಕೃತಿಯ ನಾಲ್ಕು ಅಧ್ಯಾಯಗಳಲ್ಲಿ ತನ್ನನ್ನು ಹೇಗೆ ರೂಪಿಸಿಕೊಳ್ಳಬೇಕು, ತನ್ನ ಸಾಹಿತ್ಯದ ಚಟುವಟಿಕೆಗಳು ಹೇಗೆ ಇರಬೇಕು ಎನ್ನುವುದನ್ನು ತೇಜಸ್ವಿಯವರು ವಿವರಿಸಿದ್ದಾರೆ. ಒಂದು ವಿಚಾರದ ಕೃತಿಯಾಗಿ ವ್ಯಕ್ತಿ ವಿಶಿಷ್ಟ ಸಿದ್ಧಾಂತ ಒಂದು ಕಲಾಕೃತಿಯ ದೃಷ್ಟಿಯಲ್ಲಿ ಯಮಳ ಪ್ರಶ್ನೆ ಒಂದಕೊಂದು ಪೂರಕವಾಗಿದೆ,'' ಎಂದರು.
''ವ್ಯಕ್ತಿ ವಿಶಿಷ್ಟ ಸಿದ್ಧಾಂತ ಕೃತಿಯನ್ನು ಬರಹದ ಮೂಲಕವಾಗಲಿ ಮಾತಿನ ಮೂಲಕವಾಗಲಿ ಹೆಚ್ಚು ಚರ್ಚೆಗೆ ಒಳಪಡಿಸಿಲ್ಲ. ವ್ಯಕ್ತಿ ವಿಶಿಷ್ಟ ಸಿದ್ಧಾಂತ ಕೃತಿಯನ್ನು ಚರ್ಚೆ ಮಾಡುವುದಕ್ಕಿಂತಲೂ ಮುಖ್ಯವಾಗಿ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಒಬ್ಬ ಓದುಗ ಈ ಕೃತಿಯನ್ನು ಚನ್ನಾಗಿ ಓದಿ ಅರ್ಥ ಮಾಡಿಕೊಂಡು ಆ ಮೂಲಕ ತನ್ನ ಸಾಹಿತ್ಯವನ್ನು ಸೃಜಿಸಿರಬಹುದು ಎನ್ನುವುದು ಕೂಡ ಮುಖ್ಯವಾಗುತ್ತದೆ,'' ಎಂದರು.
Recommended Video
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಮೇಶ್, ತಾಂತ್ರಿಕ ವಿಭಾಗದ ನವದೀಪ್, ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಕಾರ್ಯಕ್ರಮದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಸ್ಯಾಮ್ಯುಯೆಲ್ ಹ್ಯಾರಿಸ್ ಉಪಸ್ಥಿತರಿದ್ದರು.