ಬಂಡಾಯವೆದ್ದು ಕಾಂಗ್ರೆಸ್ಸೆ ವಿಭಜನೆಯಾದ್ರೂ ಆಶ್ಚರ್ಯವಿಲ್ಲ ಎಂದ ಸಿ.ಟಿ.ರವಿ
ಚಿಕ್ಕಮಗಳೂರು, ನವೆಂಬರ್ 11: "ಮಾಜಿ ಸಿಎಂ ಸಿದ್ದರಾಮಯ್ಯ ಮನೆಯಲ್ಲೇ ಬಂಡಾಯವೆದ್ದು ಕಾಂಗ್ರೆಸ್ ವಿಭಜನೆಯಾದ್ರೂ ಆಶ್ಚರ್ಯ ಪಡಬೇಡಿ, ಕಾಂಗ್ರೆಸ್ ಶಾಸಕರು ಬಿಜೆಪಿಯತ್ತ ಮುಖ ಮಾಡ್ತಿದ್ದಾರೆ" ಎಂದು ಸಚಿವ ಸಿ.ಟಿ.ರವಿ ಹೊಸ ಬಾಂಬ್ ಸಿಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಮಾತಿನ ಮೂಲಕ ಸಿದ್ದರಾಮಯ್ಯನವರಿಗೆ ಹತ್ತಾರು ಬಾರಿ ತಿವಿದಿದ್ದಾರೆ. "ಸಿದ್ದರಾಮಯ್ಯ ಭವಿಷ್ಯ ಎಷ್ಟು ಬಾರಿ ಸತ್ಯವಾಗಿದೆ, ಮಕಾಡೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆ ಸಿದ್ದರಾಮಯ್ಯಗೆ ಅನ್ವಯವಾಗುತ್ತೆ" ಎಂದಿದ್ದಾರೆ.
ಉಪಚುನಾವಣೆ ಅಭ್ಯರ್ಥಿ ಘೋಷಣೆ ಬಗ್ಗೆ ಕಾಂಗ್ರೆಸ್ ಗೆ ಕುಟುಕಿದ ಸಿ.ಟಿ.ರವಿ
"ಮೋದಿ ಅಪ್ಪನ ಆಣೆ ಪ್ರಧಾನಿಯಾಗಲ್ಲ ಎಂದು ಅವರಪ್ಪನನ್ನೂ ಸಿದ್ದರಾಮಯ್ಯ ತಂದಿದ್ದರು. ಕಣ್ಣಮುಂದೆಯೇ ಎರಡೆರಡು ಬಾರಿ ಮೋದಿ ಪ್ರಧಾನಿಯಾಗೋದನ್ನು ನೋಡಬೇಕಾಯ್ತು" ಎಂದು ಕಾಲೆಳೆದಿದ್ದಾರೆ. "2019ರಲ್ಲಿ ಬಿಜೆಪಿಯನ್ನು ಸಿಂಗಲ್ ನಂಬರ್ ಇಳಿಸ್ತೀವಿ ಅಂದಿದ್ದರು, ಕೊನೆಗೆ ಯಾರು ಇಳಿದ್ರು?" ಎಂದು ಅಣಕ ಮಾಡಿದರು.
"ಬಯಲುಸೀಮೆ ನಾಟದಲ್ಲಿ ಅಬ್ಬರಿಸುವಂತಷ್ಟೆ ಅವರು, ನಾಟಕ ಮಾಡಿದವರೆಲ್ಲಾ ನಿಜ ಜೀವನದಲ್ಲೂ ಅದೇ ರೀತಿ ಇರ್ತಾರಂತಿಲ್ಲ. ನಾನೇ ಸಿಎಂ ಎಂದು ಆಗ ಎದೆತಟ್ಟಿಕೊಂಡು ಹೇಳ್ತಿದ್ದರು, ಈಗೇನಾಯ್ತು, ಚಾಮುಂಡೇಶ್ವರಿಯಲ್ಲಿ ಸೋಲಬೇಕಾಯ್ತು. ಪ್ರಜಾಭುತ್ವದಲ್ಲಿ ತೀರ್ಮಾನ ಮಾಡೋದು ನಾನು-ಸಿದ್ದರಾಮಯ್ಯ ಅಲ್ಲ, ಜನ ಎಲ್ಲಾ ಇವರ ಕೈಯಲ್ಲಿ ಇದ್ದಿದ್ದರೆ ಅಪ್ಪನ ಆಸ್ತಿ ಮಗನಿಗೆ ಬರೆದಂತೆ ನನ್ನ ಬಳಿಕ ನನ್ನ ಮಗನೇ ಮುಖ್ಯಮಂತ್ರಿ ಎಂದು ಬರೆದಿಡ್ತಿದ್ರು ಸಿದ್ದರಾಮಯ್ಯ" ಎಂದು ವ್ಯಂಗ್ಯವಾಡಿದ್ದಾರೆ.