ಚಿಕ್ಕಮಗಳೂರು: ಮಳೆ ಕಡಿಮೆಯಾದರೂ, ಮನೆ-ಗುಡ್ಡ ಕುಸಿತ ನಿಂತಿಲ್ಲ
ಚಿಕ್ಕಮಗಳೂರು, ಆ.13: ಕಾಫಿನಾಡಿನಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಅಲ್ಲಿನ ಜನರು ಕಂಗಾಲಾಗಿದ್ದಾರೆ. ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ಅನಾಹುತಗಳು ಮಾತ್ರ ಕಡಿಮೆಯಾಗಿಲ್ಲ. ನಿನ್ನೆಯಿಂದ ಜಿಲ್ಲಾದ್ಯಂತ ಶೇಕಡಾ 80ರಷ್ಟು ಮಳೆ ಕಡಿಮೆ ಆಗಿದೆ. ಆದರೂ ಕೂಡ ಜಿಲ್ಲೆಯಲ್ಲಿ ಅನಾಹುತಗಳು ಹೆಚ್ಚಾಗುತ್ತಲೇ ಇದ್ದು, ಅಲ್ಲಿನ ಜನರಲ್ಲಿ ಆತಂಕ ಸೃಷ್ಟಿಸಿದೆ.
ಆದರೆ ಬೆಟ್ಟ-ಗುಡ್ಡ ಕುಸಿಯುವುದು, ರಸ್ತೆ ಬಿರುಕು ಬಿಡುವುದು, ತೋಟಗಳ ಮಣ್ಣು ಜರಿಯುವುದು ಮಾತ್ರ ನಿಂತಿಲ್ಲ. ಕಳೆದೊಂದು ವಾರದಿಂದ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ವರುಣದೇವ ತಕ್ಕಮಟ್ಟಿಗೆ ಶಾಂತನಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಬಳಿ ಸುಮಾರು 20 ಮೀಟರ್ ಕಾಂಕ್ರೀಟ್ ರಸ್ತೆ ಕುಸಿದಿದೆ. ಕಲ್ಲತ್ತಿಗರಿಯಿಂದ ಕೆಮ್ಮಣ್ಣುಗುಂಡಿ ಸಂಪರ್ಕ ಕಲ್ಪಿಸುವ ಮಾರ್ಗದ ಸಿಮೆಂಟ್ ರಸ್ತೆ ಬಿರುಕು ಬಿಟ್ಟಿದ್ದು, ಸುಮಾರು 2 ಅಡಿಯಷ್ಟು ಕುಸಿದಿದೆ. ಇದರಿಂದ ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ.
ಈ ಮಾರ್ಗದಲ್ಲಿ ಸಂಚರಿಸಲು ಪ್ರವಾಸಿಗರು ಭಯಪಡುತ್ತಿದ್ದಾರೆ. ಇನ್ನು ಕೆಲ ಪ್ರವಾಸಿಗರು ಆತಂಕಗೊಂಡು ಅಲ್ಲಿಂದ ಮುಂದೆ ಹೋಗದೇ ವಾಪಸ್ಸಾಗಿದ್ದಾರೆ. ಒಂದು ವೇಳೆ ಬಾಯ್ತೆರೆದಿರುವ ಈ ಮಾರ್ಗ ಮತ್ತೆ ಕುಸಿದರೆ ಕೆಮ್ಮಣ್ಣುಗುಂಡಿ ಹಾಗೂ ಹೆಬ್ಬೆ ಜಲಪಾತಕ್ಕೆ ಹೋಗುವ ಪರ್ಯಾಯ ಮಾರ್ಗವೂ ಇಲ್ಲದಂತಾಗುತ್ತದೆ. ಇದರಿಂದ ಸ್ಥಳಿಯರು ಹಾಗೂ ಪ್ರವಾಸಿಗರಿಗೆ ತೀವ್ರ ತೊಂದರೆಯಾಗುತ್ತಲೇ ಇದೆ. ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು 20 ಅಡಿ ರಸ್ತೆ ಕುಸಿದಿರುವ ಜಾಗಕ್ಕೆ 10 ಅಡಿ ಅಗಲದ ರೇಡ್ ಟೇಪ್ ಕಟ್ಟಿದ್ದಾರೆ. ಕೇವಲ 10 ಅಡಿ ಜಾಗದಲ್ಲೇ ವಾಹನಗಳು ಸಂಚರಿಸಲು ಅನುವು ಮಾಡಿಕೊಟ್ಟಿದ್ದಾರೆ.
ಮಳೆ ಆರ್ಭಟಕ್ಕೆ ಬೆಳೆಗಳು ಸರ್ವನಾಶ
ಕಳೆದ 8-10 ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬೆಳೆಗಳು ಜಲಾವೃತವಾಗಿವೆ. ಜಮೀನಿನಲ್ಲಿ ಬೆಳೆಗಳನ್ನು ಕಳೆದುಕೊಂಡ ರೈತರು ಸಾಲ ತೀರಿಸುವುದು ಹೇಗೆಂದು ಚಿಂತೆ ಗೀಡಾಗಿದ್ದಾರೆ. ಹೀಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಹೇರೂರು ಗ್ರಾಮದಲ್ಲಿ ಮನನೊಂದು 38 ವರ್ಷದ ಗಣೇಶ್ ಎನ್ನುವ ಹೆಸರಿನ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಗಣೇಶ್ ತಮಗಿರುವ ನಾಲ್ಕು ಎಕರೆ ಜಮೀನನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಯಪುರದ ಕರ್ನಾಟಕ ಬ್ಯಾಂಕ್ನಲ್ಲಿ 2 ಲಕ್ಷ ಸಾಲ, ಪಿಎಸಿಎಸ್ನಲ್ಲಿ 45 ಸಾವಿರ ಹಾಗೂ ಕೈ ಸಾಲ ಮಾಡಿದ್ದರು.
ಸಾಲಬಾಧೆಯಿಂದ ರೈತ ಆತ್ಮಹತ್ಯೆ
ಕಳೆದ 8-10 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಾಫಿ, ಅಡಿಕೆ ಹಾಗೂ ಮೆಣಸು ಬೆಳೆಗಳು ಸಂಪೂರ್ಣ ನೀರುಪಾಲಾಗಿದ್ದವು. ಸಾಲ ತೀರಿಸುವುದು ಹೇಗೆಂದು ಚಿಂತನೆಗೆ ಒಳಗಾಗಿದ್ದ ಗಣೇಶ್ ಕಾಫಿಗೆ ಸಿಂಪಡಿಸುವ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯಲ್ಲಿ ಮೈಲುತುತ್ತು ಸೇವಿಸಿ ವಾಂತಿ ಮಾಡುತ್ತಿದ್ದ ಗಣೇಶ್ನನ್ನು ಅವರ ತಾಯಿ ಕಂಡು ಪತಿಗೆ ವಿಷಯವನ್ನು ಮುಟ್ಟಿಸಿದ್ದರು. ಅವರು ಕೂಡಲೇ ಗಣೇಶ್ನನ್ನು ಕೊಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ಕೊಪ್ಪದಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಗಣೇಶ್ ಸಾವನಪ್ಪಿದ್ದಾರೆ. ಮೃತ ಗಣೇಶ್ ತಂದೆ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸಾಲದಿಂದ ಸದಾ ಚಿಂತಿಸುತ್ತಿದ್ದ ನನ್ನ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ದೂರು ನೀಡಿದ್ದಾರೆ. ಕಳೆದ ವರ್ಷ ಮೃತ ಗಣೇಶ್ ಪತ್ನಿ ಕೂಡ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇದೀಗ ತಂದೆಯು ಸಾವನಪ್ಪಿದ್ದರಿಂದ 9 ವರ್ಷದ ಮಗ ಹಾಗೂ 5 ವರ್ಷದ ಮಗಳು ಇಬ್ಬರೂ ಅನಾಥರಾಗಿದ್ದಾರೆ.
ಸರಣಿಯಲ್ಲಿ ಕುಸಿಯುತ್ತಿರುವ ಮನೆಗಳು
ಮಲೆನಾಡಲ್ಲಿ ಸುರಿದ ಮಳೆಯಿಂದ ಮೂಡಿಗೆರೆ ತಾಲೂಕಿನ ಕಡಿದಾಳು ಗ್ರಾಮದಲ್ಲಿ ಶಾಲೆ ಗೋಡೆ ಕುಸಿತವಾಗಿದೆ. 26 ಮಕ್ಕಳು ವ್ಯಾಸಾಂಗ ಮಾಡುತ್ತಿರುವ ಪ್ರಾಥಮಿಕ ಶಾಲೆಯ ಗೋಡೆ ಕುಸಿದಿತ್ತು. ಶಾಲೆಗೆ ರಜೆ ಇದ್ದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.
ಇನ್ನು ಮಳೆಯ ಆರ್ಭಟಕ್ಕೆ ಮೂಡಿಗೆರೆ ತಾಲೂಕಿನ ದಿಣ್ಣೆಕೆರೆಯಲ್ಲಿ ಒಂದು ಮನೆ ನೆಲಸಮವಾಗಿದೆ. ಗ್ರಾಮದ ದಿನೇಶ್ ಎಂಬುವರಿಗೆ ಸೇರಿದ ಮನೆ ಸಂಪೂರ್ಣ ನಾಶವಾಗಿದ್ದು, ಕುಟುಂಬದವರು ಕಣ್ಣೀರಲ್ಲೇ ಕೈತೊಳೆಯುವಂತೆ ಆಗಿದೆ. ಮನೆಯ ಅವಶೇಷಗಳ ಅಡಿ ಆಹಾರ ಸಾಮಗ್ರಿ ಹುಡುಕುವ ಮನಕಲಕುವ ದೃಶ್ಯವೊಂದು ಸೆರೆಯಾಗಿದೆ. ಕೂಡಿಟ್ಟ ಹಣ ಹಾಗೂ ಆಹಾರ ಸಾಮಗ್ರಿಗಾಗಿ ಹುಡುಕಾಟ ಮಾಡುವ ದೃಶ್ಯವಂತೂ ಎಂಥವರನ್ನಾದರೂ ಮನಕಲಕಿಸಿಬಿಡುತ್ತದೆ.
ಮಳೆ ನಿಂತರೂ ಅವಾಂತರಗಳು ನಿಲ್ಲುತ್ತಿಲ್ಲ!
ಇನ್ನು ಕಳಸ ತಾಲೂಕಿನ ಕೆಳಗೂಡು ಗ್ರಾಮದಲ್ಲಿ ಹರೀಶ್ ಎಂಬುವರ ಮನೆಯ ಮೇಲ್ಚಾವಣಿ, ಗೋಡೆ ಕುಸಿತವಾಗಿದೆ. ತರೀಕೆರೆ ತಾಲೂಕಿನಲ್ಲೂ ಮತ್ತೆ ಮೂರು ಮನೆಗಳ ಗೋಡೆ ಕುಸಿತವಾಗಿದ್ದು, ಬಾವಿಕೆರೆ ಗ್ರಾಮದ ಬಸಪ್ಪ ಹಾಗೂ ಗಂಗಣ್ಣ ಎಂಬವರಿಗೆ ಸೇರಿದ ಮನೆಗಳಿಗೆ ಅಪಾರ ಹಾನಿ ಉಂಟಾಗಿದೆ. ಬಿ.ರಾಮನಹಳ್ಳಿ ಗ್ರಾಮದ ದುರ್ಗಮ್ಮ ಎಂಬುವರ ಮನೆ ಗೋಡೆಯೂ ಸಂಪೂರ್ಣ ಹಾನಿ ಆಗಿದೆ. ಹೀಗೆ ಮನೆಗಳನ್ನು ಕಳೆದುಕೊಂಡ ಜನರು ಪ್ರತಿನಿತ್ಯ ಕಣ್ಣೀರಿಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ನಿಮ್ಹಾನ್ಸ್,
ರೋಟರಿ
ಸಂಸ್ಥೆ
ಹಾಗೂ
ಮೆಡಿಕೊ
ಪ್ಯಾಸ್ಟೊರಾಲ್
ಅಸೋಸಿಯೇಷನ್
ನೆರವಿನಿಂದ
ಬೆಂಗಳೂರಿನಲ್ಲಿ
ಆತ್ಮಹತ್ಯೆ
ತಡೆಗಟ್ಟಲು,
ಮಾನಸಿಕ
ಖಿನ್ನತೆಯಿಂದ
ಬಳಲುವವರಿಗಾಗಿ
SAHAI
ಸಹಾಯವಾಣಿ
ಇಂತಿದೆ:
080
-
25497777