ಚಿಕ್ಕಮಗಳೂರು; ಮದುವೆಯಲ್ಲಿ ತಾಂಬೂಲದ ಬದಲು ಮಾಸ್ಕ್ ವಿತರಣೆ
ಚಿಕ್ಕಮಗಳೂರು, ಮೇ 27: ಮದುವೆ ಮನೆಯಲ್ಲಿ ಊಟದ ಬಳಿಕ ತಾಂಬೂಲ ಕೊಡುವ ಬದಲು ಮಾಸ್ಕ್ ಹಂಚಿಕೆ ಮಾಡಿ ಜನಸಾಮಾನ್ಯರಿಗೆ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಮೂಲಕ ವಿಭಿನ್ನವಾಗಿ ಮದುವೆ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಮೂಡಿಗೆರೆ ರಸ್ತೆಯ ಕಬ್ಬಿಣ ಸೇತುವೆ ಸಮೀಪದ ಕೆಳಗೂರು ಗ್ರಾಮದಲ್ಲಿ ಯೊಗೀಶ್ ಆಚಾರ್ ಅವರ ಮಗಳು ಆಶಾ ಅವರ ಮದುವೆ ತೀರ್ಥಹಳ್ಳಿ ಮೂಲದ ರಮೇಶ್ ಎಂಬ ಯುವಕನ ಜೊತೆ ನಿಗದಿಯಾಗಿತ್ತು.
ಕೋವಿಡ್-19 ನಡುವೆ ಮದುವೆ: ಸಿಕ್ಕಾಪಟ್ಟೆ ವೈರಲ್ ಆದ ವೆಡ್ಡಿಂಗ್ ಪ್ಯಾಕೇಜ್ ಇದು!
ನಿಗದಿಯಂತೆ ಇಂದು ಸರ್ಕಾರದ ಆದೇಶದ ಪ್ರಕಾರ ಸರಳವಾಗಿ ಮದುವೆ ನಡೆದಿದೆ. ಮದುವೆಯಲ್ಲಿ ಹುಡುಗ ಹಾಗೂ ಹುಡುಗಿಯ ತೀರಾ ಆಪ್ತರು ಸೇರಿದಂತೆ 40-50 ಜನರು ಭಾಗಿಯಾಗಿ ನೂತನ ವಧುವರರಿಗೆ ಶುಭ ಹಾರೈಸಿದ್ದಾರೆ. ಈ ವೇಳೆ, ಹುಡುಗ-ಹುಡುಗಿ, ಅರ್ಚಕರು, ಮದುವೆಯಲ್ಲಿ ಪಾಲ್ಗೊಂಡವರೆಲ್ಲಾ ಮಾಸ್ಕ್ ಹಾಕಿ ಸಾಮಾಜಿಕ ಅಂತರದ ಮೂಲಕ ಮದುವೆ ಕಾರ್ಯ ಮುಗಿಸಿದ್ದಾರೆ.
ಊಟದ ಬಳಿಕ ಮದುವೆಗಳಲ್ಲಿ ಅರಿಶಿನ-ಕುಂಕುಮ, ಕಾಯಿ ಸೇರಿದ ತಾಂಬೂಲ ನೀಡುವುದು ಸಂಪ್ರದಾಯ. ಆದರೆ ಈ ಮದುವೆಯಲ್ಲಿ ತಾಂಬೂಲದ ಜೊತೆ ಮದುವೆಗೆ ಬಂದ ಎಲ್ಲರಿಗೂ ಮಾಸ್ಕ್ ಹಂಚಲಾಗಿದೆ. ಈ ಕಾರ್ಯಕ್ಕೆ ಮದುವೆಗೆ ಆಗಮಿಸಿದ್ದ ಬಂಧುಮಿತ್ರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.