ದತ್ತಮಾಲಾ ಶೋಭಾ ಯಾತ್ರೆಯಲ್ಲಿ ರವಿ, ಬಿಎಸ್ ವೈ ವಿರುದ್ಧ ಸಿಟ್ಟು
ಚಿಕ್ಕಮಗಳೂರು, ಅಕ್ಟೋಬರ್ 13: ಈ ಬಾರಿಯ ದತ್ತಮಾಲಾ ಅಭಿಯಾನದ ಶೋಭಾ ಯಾತ್ರೆಯಲ್ಲಿ ಪ್ರತಿ ವರ್ಷದ ಕಳೆ ಇರಲಿಲ್ಲ. ಭಾನುವಾರದಂದು ಡೊಳ್ಳು, ವಾದ್ಯಗಳ ನಿನಾದವಿರಲಿಲ್ಲ. ಜೈಕಾರ, ಓಂಕಾರದ ಸದ್ದು ಮೊದಲೇ ಇರಲಿಲ್ಲ.
ಏಕೆಂದರೆ, ಅಲ್ಲಿದ್ದ ದತ್ತ ಭಕ್ತರೆಲ್ಲರೂ ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದರು. ಸಚಿವ ಸಿ. ಟಿ. ರವಿ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕೆಂಡಾಮಂಡಲರಾಗಿದ್ದರು. ವಿಜೃಂಭಣೆಯಿಂದ ಶೋಭಿಸಿ, ಕಂಗೊಳಿಸಬೇಕಿದ್ದ ಶೋಭಾಯಾತ್ರೆ ಮೌನ ಮೆರವಣಿಗೆಯಾಗಿ ಬದಲಾಗಿತ್ತು.
ಜಾತಿ ಗಣತಿಯನ್ನು ಕಸ ಡಬ್ಬಿಗೆ ಹಾಕಿದ್ದರು: ಸಿ.ಟಿ.ರವಿ
ಒಂದೆಡೆ ತಾಳ ಹಾಕಿ ಪ್ರತಿಭಟಿಸುತ್ತಿರುವ ದತ್ತ ಭಕ್ತರು. ಮತ್ತೊಂದೆಡೆ ಬಾಯಿಗೆ ಬಟ್ಟೆ ಕಟ್ಟಿ ಮೌನವಾಗಿ ಸಾಗುತ್ತಿರುವ ಮಾಲಾಧಾರಿಗಳು. ವ್ರತನಿರತರ ಹೆಜ್ಜೆ ಮೇಲೆ ಪೊಲೀಸರ ಹದ್ದಿನ ಕಣ್ಣು. ದತ್ತಪಾದುಕೆ ದರ್ಶನ ಮಾಡಿಕೊಂಡು ಹೊರಬರುತ್ತಿರುವ ಭಕ್ತವೃಂದ. ಇದು ಚಿಕ್ಕಮಗಳೂರಲ್ಲಿ ಶ್ರೀರಾಮಸೇನೆ ವತಿಯಿಂದ ನಡೆದ ದತ್ತಮಾಲಾ ಅಭಿಯಾನದ ದೃಶ್ಯಗಳಾಗಿದ್ದವು.
ಹೌದು, ಈ ಬಾರಿ ದತ್ತಮಾಲ ಅಭಿಯಾನದ ಶೋಭಾಯಾತ್ರೆ ಪ್ರತಿ ವರ್ಷದಂತೆ ಇರಲಿಲ್ಲ. ಅದಕ್ಕೆ ಕಾರಣವಾಗಿದ್ದು ಕಾರವಾರದಿಂದ ಬಂದಿದ್ದ ದತ್ತಾತ್ರೇಯ ಕಲ್ಲಿನ ಮೂರ್ತಿ. ಆ ಮೂರ್ತಿಯೊಂದಿಗೆ ಶೋಭಾಯಾತ್ರೆ ಮಾಡುತ್ತೇವೆ ಅಂತ ಮಾಲಾಧಾರಿಗಳು. ಆದರೆ ಮೂರ್ತಿಯೊಂದಿಗೆ ಶೋಭಾಯಾತ್ರೆ ಮಾಡಿದರೆ ವಿವಾದ ಸೃಷ್ಠಿಯಾಗುತ್ತದೆ ಎಂಬ ವಾದ ಪೊಲೀಸರದಾಗಿತ್ತು.
ರಕ್ತ ಚೆಲ್ಲಿಯಾದರೂ ದತ್ತಪೀಠವನ್ನು ಹಿಂದೂಗಳದ್ದಾಗಿಸಿಕೊಳ್ಳುತ್ತೇವೆ:ಪ್ರಮೋದ್ ಮುತಾಲಿಕ್
ಜಿಲ್ಲಾಡಳಿತವು ದತ್ತ ಮೂರ್ತಿಯೊಂದಿಗಿನ ಶೋಭಾಯಾತ್ರೆಗೆ ಬಿಲ್ಕುಲ್ ಒಪ್ಪಲಿಲ್ಲ. ಕೊನೆಗೆ ಪೊಲೀಸರು ಅಡ್ಡಿಪಡಿಸಿದಾಗ ಮಾಲಾಧಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲೇ ಕುಳಿತು ತಾಳ ಹಾಕುತ್ತಾ ಪ್ರತಿಭಟಿಸಿದರು. ಇದಕ್ಕೂ ಪೊಲೀಸರು ಜಗ್ಗದಿದ್ದಾಗ ಶೋಭಾಯಾತ್ರೆಯನ್ನ ರದ್ದುಗೊಳಿಸಿ, ಬಾಯಿಗೆ ಬೀಗ ಹಾಕಿ, ಸರ್ಕಾರ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೆ ನಗರದಲ್ಲಿ ಮೌನ ಪ್ರತಿಭಟನೆ ಮಾಡಿ ಹೊರಟ ದತ್ತ ಭಕ್ತರು, ಮಧ್ಯಾಹ್ನದ ವೇಳೆಗೆ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ದತ್ತಪೀಠ ತಲುಪಿದರು. ದತ್ತ ಪೀಠದ ನೂರು ಮೀಟರ್ ದೂರದಲ್ಲಿರುವ ಶೆಡ್ ನಲ್ಲಿ ಹೋಮ- ಹವನ ನಡೆಸಿದ ಐದು ಸಾವಿರಕ್ಕೂ ಹೆಚ್ಚು ಭಕ್ತರು ದತ್ತ ಪಾದುಕೆ ದರ್ಶನ ಪಡೆದರು.
ಕಾಳಿಮಠದ ಋಷಿಕೇಶ ಸ್ವಾಮೀಜಿ, ಕಾಶ್ಮೀರಿ ಪಂಡಿತ್ ರಾಹುಲ್ ಕೌರ್ ಸೇರಿದಂತೆ ಅನೇಕರು ಶ್ರೀರಾಮಸೇನೆಯ ದತ್ತ ಮಾಲಾಧಾರಿಗಳಿಗೆ ಸಾಥ್ ನೀಡಿದರು. ಇದೇ ವೇಳೆ, ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮೂರ್ತಿ ಮೆರವಣಿಗೆಗೆ ಅನುಮತಿ ನೀಡದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಋಷಿಕೇಶ ಸ್ವಾಮೀಜಿ, ಸಚಿವ ಸಿ.ಟಿ.ರವಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕೆಂಡಾಮಂಡಲರಾಗಿದ್ದರು.
ಒಟ್ಟಾರೆ, ದತ್ತಮಾಲಾ ಅಭಿಯಾನದ ಹಿನ್ನೆಲೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ, ದತ್ತಪಾದುಕೆ ದರ್ಶನ ಪಡೆದರು. ಎಲ್ಲೂ ಸಣ್ಣ ಅಚಾತುರ್ಯ ಸಂಭವಿಸಿದಂತೆ ಪೊಲೀಸರು ಕೂಡ ವ್ಯಾಪಕ ಬಂಸೋಬಸ್ತ ಮಾಡಿದರು. ದತ್ತಾತ್ರೇಯನ ಮೂರ್ತಿಯ ಶೋಭಾಯಾತ್ರೆ ಮಾಡಬೇಕು ಎಂದು ಇಚ್ಛೆಪಟ್ಟಿದ್ದ ದತ್ತಭಕ್ತರ ಆಸೆಗೆ ಪೊಲೀಸರು ತಣ್ಣೀರು ಎರಚಿದರು. ಈ ಬೆಳವಣಿಗೆಗೆ ಶ್ರೀರಾಮಸೇನೆ ಹಾಗೂ ದತ್ತ ಭಕ್ತರು ಸರ್ಕಾರದ ವಿರುದ್ಧ ತಿರುಗಿ ಬೀಳುವುದಕ್ಕೆ ಕಾರಣವಾಗಿದ್ದಂತೂ ಸತ್ಯ.