ನ.3ರಿಂದ ದೇವಿರಮ್ಮ ಬೆಟ್ಟದಲ್ಲಿ ದೀಪೋತ್ಸವ: ಕೋವಿಡ್ ಮಾರ್ಗಸೂಚಿ ಅನ್ವಯ
ಚಿಕ್ಕಮಗಳೂರು, ಅಕ್ಟೋಬರ್ 28: "ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿ ಬಿಂಡಿಗದ ದೇವಿರಮ್ಮ ಬೆಟ್ಟದಲ್ಲಿ ದೀಪೋತ್ಸವ ನ.3ರಿಂದ 6 ರವರೆಗೆ ನಡೆಯಲಿದ್ದು, ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ," ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ದೇವಿರಮ್ಮ ದೇವಾಲಯದ ದೀಪಾವಳಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, "ಭಕ್ತಾಧಿಗಳ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ನವೆಂಬರ್ 3ರಂದು ದೇವಿರಮ್ಮ ಬೆಟ್ಟಕ್ಕೆ ಹತ್ತುವವರ ಸಂಖ್ಯೆಯನ್ನು ಈ ಬಾರಿ ಕಡಿತಗೊಳಿಸಲಾಗುತ್ತದೆ," ಎಂದು ಹೇಳಿದರು.
"ದೇವಿರಮ್ಮಬೆಟ್ಟ ಅತ್ಯಂತ ಕಡಿದಾಗಿದ್ದು, ಬೆಟ್ಟಕ್ಕೆ ಹತ್ತುವ ಮಾರ್ಗಗಳು ತುಂಬಾ ಕಿರಿದಾಗಿರುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವುದರಿಂದ ಬೆಟ್ಟಕ್ಕೆ ಹತ್ತುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಷ್ಟ ಸಾಧ್ಯವಿರುವುದರಿಂದ ಬೆಟ್ಟದ ಮೇಲೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ತಡೆಹಿಡಿಯಲಾಗಿದೆ," ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದರು.
"ದೇವಿರಮ್ಮ ಬೆಟ್ಟ ಹತ್ತುವ ಮತ್ತು ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾಧಿಗಳು, ಸಾರ್ವಜನಿಕರು ಆರೋಗ್ಯದ ಹಿತದೃಷ್ಠಿಯಿಂದ ಜಿಲ್ಲಾಡಳಿತ ರೂಪಿಸಿರುವ ಕೋವಿಡ್ ನಿಯಮಾವಳಿಯನ್ನು ಪಾಲಿಸಿ, ಮನೆಗೆ ಒಬ್ಬರಂತೆ ಹಾಗೂ ಗ್ರಾಮಕ್ಕೆ ನಿಗದಿಗೊಳಿಸಲಾದ ಪಾಸ್ನೊಂದಿಗೆ ಜನರು ದರ್ಶನ ಪಡೆಯಬಹುದಾಗಿದೆ," ಎಂದರು.
"ದೇವಿರಮ್ಮ ಬೆಟ್ಟಕ್ಕೆ ಜನರು ನಾಲ್ಕು ದಿಕ್ಕುಗಳಿಂದ ಆಗಮಿಸುವ ಸಾಧ್ಯತೆ ಹೆಚ್ಚಿದ್ದು, ಅಂತಹ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಹೆಚ್ಚು ಜನ ಸೇರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಾಣಿಕ್ಯಧಾರದಿಂದ ದರ್ಶನಕ್ಕೆ ಆಗಮಿಸುವುದನ್ನು ಸಂಪೂರ್ಣವಾಗಿ ಬಂದ್ ಮಾಡಿ, ದೇವಿ ದರ್ಶನಕ್ಕೆ ಮಲ್ಲೇನಹಳ್ಳಿ ಮಾರ್ಗದಿಂದ ಮಾತ್ರ ಜನರು ಆಗಮಿಸಲು ಅನುವು ಮಾಡಿಕೊಡಲಾಗುವುದು," ಎಂದು ಜಿಲ್ಲಾಧಿಕಾರಿ ತಿಳಿಸಿದರು.
"ದೇವಿರಮ್ಮ ಜಾತ್ರೆಯಲ್ಲಿ ಯಾವುದೇ ರೀತಿಯ ದೇವಿ ಮೆರವಣಿಗೆಗೆ ಅವಕಾಶವಿರುವುದಿಲ್ಲ ಮತ್ತು ಸಾಮೂಹಿಕ ಊಟದ ವ್ಯವಸ್ಥೆ ನಿಷೇಧಿಸಲಾಗಿದೆ, ನ.2ರಿಂದ 7 ರವರೆಗೆ ನಿರಂತರವಾಗಿ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ, ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ವತಿಯಿಂದ ಒದಗಿಸುವಂತೆ," ಸೂಚಿಸಿದರು.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ಮಾತನಾಡಿ, ಭಕ್ತಾದಿಗಳು ಬೆಟ್ಟ ಹತ್ತುವಾಗ ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ ಮುಂಜಾಗ್ರತಾ ಕ್ರಮವಾಗಿ ಆಂಬ್ಯುಲೆನ್ಸ್, ವೈದ್ಯಕೀಯ ತಂಡ, ಸ್ಯಾನಿಟೈಸರ್ ವ್ಯವಸ್ಥೆ ಮಾಡುವಂತೆ ಆರೋಗ್ಯ ಇಲಾಖೆ ಮತ್ತು ಅಗ್ನಿಶಾಮಕ ದಳ ಅಧಿಕಾರಿಗಳಿಗೆ ತಿಳಿಸಿದರು.
ಹೊರರಾಜ್ಯದಿಂದ ಬರುವ ಪ್ರವಾಸಿಗರನ್ನು ಜಾತ್ರೆ ನಡೆಯುವ ದಿನಗಳಲ್ಲಿ ನಿಷೇಧಿಸಲಾಗಿದ್ದು ಮತ್ತು ಬೆಟ್ಟದ ಸುತ್ತಮುತ್ತ ಇರುವ ಹೋಂ ಸ್ಟೇನಲ್ಲಿ ಪ್ರವಾಸಿಗರು ತಂಗುವುದನ್ನು ನಿರ್ಬಂಧಿಸಲಾಗಿದೆ ಎಂದರು.
ಕೋವಿಡ್ ಮಾರ್ಗಸೂಚಿ ಅನ್ವಯ ಅತ್ಯಂತ ಸರಳವಾಗಿ ದೇವಿರಮ್ಮ ದರ್ಶನ ಪಡೆಯುವಂತೆ ಭಕ್ತಧಿಗಳಲ್ಲಿ ಮನವಿ ಮಾಡಿದ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್ ನಿಯಮಾವಳಿಗಳನ್ನು ತಪ್ಪದೆ ಪಾಲಿಸುವಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ಸೂಚಿಸಿದರು.