ಸಿಎಂ ಯಡಿಯೂರಪ್ಪಗೆ ದತ್ತಾತ್ರೇಯನ ಶಾಪ: ಗಂಗಾಧರ್ ಕುಲಕರ್ಣಿ
ಚಿಕ್ಕಮಗಳೂರು, ನವೆಂಬರ್ 22: ದತ್ತಮಾಲಾ ಅಭಿಯಾನಕ್ಕೆ ಭಾನುವಾರ ಚಿಕ್ಕಮಗಳೂರು ನಗರದ ಶಂಕರ ಮಠದಲ್ಲಿ ಮಾಲಾಧಾರಣೆ ಮಾಡುವ ಮೂಲಕ ಚಾಲನೆ ದೊರೆಯಿತು.
ಶ್ರೀರಾಮಸೇನೆ ವತಿಯಿಂದ ದತ್ತಮಾಲಾ ಅಭಿಯಾನ ನಡೆಯುತ್ತಿದ್ದು, ನ.22 ರಿಂದ ಐದು ದಿನಗಳ ಕಾಲ ನಡೆಯಲಿದೆ. 20ಕ್ಕೂ ಹೆಚ್ಚು ದತ್ತಭಕ್ತರು ಮಾಲಾಧಾರಣೆ ಮಾಡಿದರು. ಇದೇ ಸಂದರ್ಭದಲ್ಲಿ ದತ್ತಪೀಠವನ್ನು ಹಿಂದೂಗಳಿಗೆ ವಹಿಸುವಂತೆ ಆಗ್ರಹ ಮಾಡಲಾಯಿತು.
ಚಿಕ್ಕಮಗಳೂರು ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅಮಾನತು
ಈ ವೇಳೆ ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದತ್ತಾತ್ರೇಯನ ಶಾಪ ಇದೆ. ಹಿಂದೊಮ್ಮೆ ಯಡಿಯೂರಪ್ಪ ಸಿಎಂ ಆಗಿ ದತ್ತಮಾಲೆ ಧರಿಸಿ, ದತ್ತಪೀಠಕ್ಕೆ ಬರುತ್ತೇನೆ ಎಂದು ಹೇಳಿದ್ದರು. ಆದರೆ ಸಿಎಂ ಆದ ಮೇಲೆ ದತ್ತಪೀಠಕ್ಕೆ ಬರಲಿಲ್ಲವೆಂದರು.
ಈ ದತ್ತಮಾಲಾ ಅಭಿಯಾನದ ಕೊನೆ ದಿನ ದತ್ತಪೀಠಕ್ಕೆ ಬಂದು ಅವರ ಶಾಪ ವಿಮುಕ್ತಿಗೊಳಿಸಿಕೊಳ್ಳಬೇಕು. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗ ಪೂರ್ಣಾವಧಿ ಅಧಿಕಾರ ಮಾಡಲಿಲ್ಲ. ದತ್ತಾತ್ರೇಯನ ಶಾಪದಿಂದ ಹೀಗಾಗಿದೆ ಎಂದು ಹೇಳಿದರು.
ಶಾಪ ವಿಮೋಚನೆ ಆಗಬೇಕಾದರೆ ದತ್ತಪೀಠಕ್ಕೆ ಬರಬೇಕು. ದತ್ತಪೀಠಕ್ಕೆ ಮಾಲೆ ಹಾಕಿಕೊಂಡು ಬಂದು, ದತ್ತಪೀಠವನ್ನು ಹಿಂದೂಗಳಿಗೆ ವಹಿಸಬೇಕು. ಆಗ ಮುಂದಿನ ದಿನಗಳಲ್ಲಿ ಪೂರ್ಣಾವಧಿ ಅಧಿಕಾರ ನಡೆಸುವುದಕ್ಕೆ ಗುರುಗಳ ಆಶೀರ್ವಾದ ಸಿಗುತ್ತದೆ ಎಂದು ಗಂಗಾಧರ್ ಕುಲಕರ್ಣಿ ತಿಳಿಸಿದರು.
ಹಿಂದೂಗಳಿಗೆ ದತ್ತಪೀಠ ವಹಿಸುವುದಕ್ಕೆ ಯಡಿಯೂರಪ್ಪರಿಗೆ ಒಳ್ಳೆಯ ಅವಕಾಶವಿದ್ದು, ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಬಜೆಟ್ ಅಧಿವೇಶನದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
Recommended Video
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ದತ್ತಪೀಠ ಹಿಂದೂಗಳಿಗೆ ವಹಿಸುವುದಕ್ಕೆ ಇದೇ ಸೂಕ್ತ ಸಮಯ. ಎಲ್ಲಾ ಕೋರ್ಟ್ ಗಳಲ್ಲಿ ದತ್ತಪೀಠ ಹಿಂದೂಗಳಿಗೆ ಸೇರಬೇಕೆಂದು ತೀರ್ಪು ಬಂದಿದೆ. ಸದ್ಯ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರವೇ ತೀರ್ಮಾನ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದೆ ಎಂದು ಶ್ರೀರಾಮ ಸೇನೆ ರಾಜ್ಯ ಉಪಾಧ್ಯಕ್ಷ ಹೇಳಿದರು.