ಕೇಸರಿಮಯವಾದ ಚಿಕ್ಕಮಗಳೂರು:ಇಂದಿನಿಂದ ದತ್ತಮಾಲಾ ಅಭಿಯಾನಕ್ಕೆ ಚಾಲನೆ
ಚಿಕ್ಕಮಗಳೂರು, ಡಿಸೆಂಬರ್ 12: ಭಜರಂಗದಳ, ವಿಎಚ್ ಪಿ ವತಿಯಿಂದ ನಡೆಯುವ ದತ್ತಮಾಲಾ ಅಭಿಯಾನಕ್ಕೆ ಇಂದಿನಿಂದ ಚಾಲನೆ ದೊರೆತಿದೆ. ವಿವಾದಿತ ದತ್ತಪೀಠದಲ್ಲಿ ಹೋರಾಟ ಈ ಬಾರಿ ಹಲವು ಕಾರಣಗಳಿಗೆ ವಿಶೇಷತೆ ಪಡೆದಿದ್ದು, ಆರಂಭದಲ್ಲಿಯೇ ಸಂಘರ್ಷಕ್ಕೆ ಕಾರಣವಾಗಿದೆ.
ಒಂದೆಡೆ ಜಿಲ್ಲಾಡಳಿತ ರಥಯಾತ್ರೆಗೆ ನಿರ್ಭಂದ ಹಾಕಿದ್ದು, ಮತ್ತೊಂದೆಡೆ ಹಿಂದೂ ಮುಖಂಡರ ವಿರುದ್ಧ ದೂರು ದಾಖಲಾಗಿದೆ. ಇದೆಲ್ಲದರ ಮಧ್ಯೆಯೂ ನೂರಾರು ದತ್ತಭಕ್ತರು ದತ್ತಮಾಲಾ ಧಾರಣೆ ಮಾಡುವ ಮೂಲಕ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಬಾಬಾಬುಡನ್ ಗಿರಿಯಲ್ಲಿ ದತ್ತಮಾಲಾ ಅಭಿಯಾನ ಆರಂಭ
ಹೌದು, ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಹಾಗೂ ಚಿಕ್ಕಮಗಳೂರು ಇಂದಿನಿಂದ 11 ದಿನಗಳ ಕಾಲ ಸಂಪೂರ್ಣ ಕೇಸರಿಮಯವಾಗಲಿದೆ. 11 ದಿನಗಳ ಕಾಲ ನಡೆಯುವ ದತ್ತಮಾಲಾ ಅಭಿಯಾನಕ್ಕೆ ಹಲವು ಎಡರು ತೊಡರುಗಳ ಮಧ್ಯೆಯೇ ದತ್ತಮಾಲಾ ಅಭಿಯಾನಕ್ಕೆ ಚಾಲನೆ ದೊರೆತಿದೆ.
ನಗರದ ಕಾಮದೇನು ಗಣಪತಿ ದೇವಸ್ಥಾನದ ಆವರಣದಲ್ಲಿ ದತ್ತಾತ್ರೇಯ ಸ್ತೋತ್ರದೊಂದಿಗೆ ನೂರಾರು ಜನ ದತ್ತಭಕ್ತರು ದತ್ತಮಾಲಾಧಾರಣೆ ಮಾಡುವ ಮೂಲಕ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ರಾಜ್ಯದೆಲ್ಲೆಡೆ ಇಂದಿನಿಂದ 11 ದಿನಗಳವೆರೆಗೂ ದತ್ತಭಕ್ತರು ಮಾಲಾಧಾರಣೆ ಮಾಡಲಿದ್ದಾರೆ, ಜೊತೆಗೆ ದತ್ತಮಾಲಾ ಅಭಿಯಾನದ ಹಿನ್ನಲೆ 11 ದಿನಗಳ ಅನುಸೂಯ ಜಯಂತಿ, ಜೊತೆಗೆ ವಿವಿಧ ಕಾರ್ಯಕ್ರಮ ನಡೆಯಲಿದ್ದು ಕೊನೆಯ ದಿನ ನಗರದೆಲ್ಲೆಡೆ ಶೋಭಾಯಾತ್ರೆ ನಂತರ ಸಾವಿರಾರು ಭಕ್ತರು ದತ್ತಪೀಠಕ್ಕೆ ಭೇಟಿನೀಡಲಿದ್ದಾರೆ.
ಇನ್ನು ಶಾಸಕ ಸಿ ಟಿ ರವಿ ಚಳಿಗಾಲದ ಅಧಿವೇಶನ ಕಾರಣ ಬೆಳಗಾವಿಯಲ್ಲಿ ಇರುವ ಕಾರಣ ಬೆಳಗಾವಿಯ ಬಸವೇಶ್ವರ ವೃತ್ತದ ಬಳಿಯ ದತ್ತಮಂದಿರದಲ್ಲಿ ದತ್ತಮಾಲಾಧಾರಣೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಆಯೋಧ್ಯೆ ದತ್ತಪೀಠವನ್ನು ಮುಕ್ತಗೊಳಿಸಲು ಕರಸೇವೆಗೆ ಸಜ್ಜಾಗಿ ಎಂದು ಪೋಸ್ಟ್ ಹಾಕಿರುವ ಕಾರಣ ಭಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಂಚಾಲಕ ರಘು ಸಕಲೇಶಪುರ ಹಾಗೂ ಪ್ರಾಂತ ಸಂಯೋಜಕ ಕೆ ಆರ್ ಸುನೀಲ್ ವಿರುದ್ಧ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಪರಿಣಾಮ ಇಬ್ಬರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ. ಇದು ವಿಎಚ್ ಪಿ ಹಾಗೂ ಭಜರಂಗದಳ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸ್ ಇಲಾಖೆ ನಗರದೆಲ್ಲೆಡೆ ಹೈ ಅಲರ್ಟ್ ಘೋಷಿಸಿದ್ದು, ಪರಿಸ್ಥಿತಿ ಮಾತ್ರ ಬೂದಿಮುಚ್ಚಿದ ಕೆಂಡದಂತಿದೆ.