ಚಿಕ್ಕಮಗಳೂರು: ದಲಿತ ಯುವಕರ ಮೇಲೆ ಪಿಎಸ್ಐ ದರ್ಪ ಖಂಡಿಸಿ ಪ್ರತಿಭಟನೆ
ಚಿಕ್ಕಮಗಳೂರು, ಅಕ್ಟೋಬರ್ 27: ಅಮಾಯಕ ದಲಿತ ಯುವಕರ ಮೇಲೆ ಪಿಎಸ್ಐ ದರ್ಪವನ್ನು ಖಂಡಿಸಿ ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಪೊಲೀಸ್ ಠಾಣೆಯ ಎದುರು ವಿವಿಧ ದಲಿತ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರು ತಾಲ್ಲೂಕಿನ ಹಲಸುಮನೆ ಗ್ರಾಮದಲ್ಲಿ ಇತ್ತೀಚೆಗೆ ಗಂಧದ ಮರಗಳ ಕಳವು ಪ್ರಕರಣ ಸಂಬಂಧಿಸಿದಂತೆ ಆಲ್ದೂರು ಠಾಣೆ ಪೋಲಿಸರು ಇತ್ತೀಚಿಗೆ ಮೂವರು ದಲಿತ ಯುವಕರನ್ನು ಠಾಣೆಗೆ ಕರೆದೊಯ್ದಿದ್ದರು.
ಪೊಲೀಸರು ಬಂಧಿಸಿದ ಹಲಸುಮನೆ ಗ್ರಾಮದ ಮೂವರು ದಲಿತರು ಅಮಾಯಕರಾಗಿದ್ದು, ಪ್ರಭಾವಿಗಳ ಕುಮ್ಮಕ್ಕಿನ ಮೇರೆಗೆ ಪೋಲಿಸರು ಅಮಾಯಕ ದಲಿತರನ್ನು ಬಂಧಿಸಿದ್ದಲ್ಲದೇ ಠಾಣೆಯಲ್ಲಿ ಚಿತ್ರಹಿಂಸೆ ನೀಡಿದ್ದಾರೆ.
ಬಂಧನಕ್ಕೊಳಗಾದವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆ ಮೂರು ದಿನಗಳ ಠಾಣೆಯಲ್ಲಿ ಇರಿಸಿಕೊಂಡು ಆರೋಪವನ್ನು ಒಪ್ಪಿಕೊಳ್ಳಲು ದೈಹಿಕ ಹಿಂಸೆ ನೀಡಿದ್ದಾರೆ. ಪೊಲೀಸರ ವರ್ತನೆ ಬಗ್ಗೆ ಸಂಘಟನೆಗಳ ಮುಖಂಡರು ಪ್ರಶ್ನಿಸಿದಾಗ, ಕಳೆದ ಶುಕ್ರವಾರ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ್ದಾರೆ ಎಂದು ಪ್ರತಿಭಟನಾ ನಿರತರು ಈ ವೇಳೆ ಆರೋಪಿದರು.
ಗಂಧದ ಕಳವು ಪ್ರಕರಣದಲ್ಲಿ ಪೋಲಿಸರು ಬಂಧಿಸಿರುವ ಮೂವರು ಯುವಕರು ಅಮಾಯಕರಾಗಿದ್ದು, ನೈಜ ಆರೋಪಿಗಳನ್ನು ಬಿಟ್ಟು ಅಮಾಕರನ್ನು ಬಂಧಿಸಿದ್ದಾರೆ ಎಂದು ಪಿಎಸ್ಐ ಶಂಭುಲಿಂಗಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಈ ವೇಳೆ ಪೋಲಿಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
Recommended Video
ದಲಿತ ಯುವಕರ ಮೇಲೆ ಪೊಲೀಸರ ಗೂಂಡಾ ವರ್ತನೆ ಮಾಡಿರುವ ಪಿಎಸ್ಐ ಅವರನ್ನು ಅಮಾನತ್ತು ಮಾಡಬೇಕೆಂದು ಈ ವೇಳೆ ಮುಖಂಡರು ಆಗ್ರಹಿಸಿದರು. ಪೊಲೀಸ್ ಠಾಣೆ ಎದುರು ದಲಿತ ಸಂಘಟನೆಗಳ ಹೋರಾಟ ಮುಂದುವರಿದಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಇದೆ. ಅಮಾಯಕರನ್ನು ಬಿಡುಗಡೆ ಮಾಡುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.