"ಭೂತದ ಬಾಯಲ್ಲಿ ಭಗವದ್ಗೀತೆ"; ಡಿಕೆಶಿಗೆ ಸಿ.ಟಿ.ರವಿ ಟಾಂಗ್
ಚಿಕ್ಕಮಗಳೂರು, ಆಗಸ್ಟ್ 01: "ಭ್ರಷ್ಟಾಚಾರದ ಬಗ್ಗೆ ಡಿಕೆಶಿ ಮಾತನಾಡ್ತಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಬರೋದಕ್ಕೂ ಇದಕ್ಕೂ ವ್ಯತ್ಯಾಸವಿಲ್ಲ" ಎಂದು ಡಿ.ಕೆ.ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ ಸಚಿವ ಸಿ.ಟಿ.ರವಿ.
ಚಿಕ್ಕಮಗಳೂರಿನಲ್ಲಿ ಇಂದು, ರಾಜ್ಯ ಸರ್ಕಾರದ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಡಿರುವ ಆರೋಪಗಳಿಗೆ ಉತ್ತರಿಸಿದ ಅವರು, "ಡಿಕೆಶಿ ನನ್ನನ್ನು ನೇಣಿಗೆ ಏರಿಸಲಿ ಎಂದಿದ್ದಾರೆ. ಅವರು ಪ್ರಾಮಾಣಿಕರಾ ಎಂದು ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಲಿ. ಕಾಂಗ್ರೆಸಿಗೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ. ಇಂಟರ್ ನಲ್ ಕಾಂಪಿಟೇಷನ್ ನಡೆಯುತ್ತಿರಬಹುದು" ಎಂದು ವ್ಯಂಗ್ಯವಾಡಿದರು.
ಹೆಣಗಳ ಮೇಲೆ ಹಣ ಮಾಡಲು ಹೊರಟಿದೆ ಸರ್ಕಾರ; ಡಿಕೆಶಿ ವಾಗ್ದಾಳಿ
"ಕೋವಿಡ್ ವಿಚಾರದಲ್ಲಿ ಭ್ರಷ್ಟಾಚಾರದ ಆಲೋಚನೆಯೂ ತಪ್ಪು. ಆಧಾರ ಇದ್ದರೆ ಸಿದ್ದರಾಮಯ್ಯ ಕಂಪ್ಲೇಂಟ್ ಮಾಡಲಿ. ಆಧಾರ ಇದ್ದರೆ ಕೋರ್ಟ್ ಹಾಗೂ ಲೋಕಾಯುಕ್ತಕ್ಕೆ ಸಲ್ಲಿಸಲಿ. ಆಧಾರ ಇಲ್ಲದೆ ಪ್ರಶ್ನೆ ಮಾಡೋಡು ತಪ್ಪು. ಎಲುಬಿಲ್ಲದ ನಾಲಗೆ ಏನು ಬೇಕಾದ್ರು ಮಾತಾನಾಡುತ್ತೆ ಅನ್ನೋದು ಸಿದ್ದರಾಮಯ್ಯಗೆ ಅಪ್ಲೇ ಆಗಬಾರದು. ಅವರು ಸಿಎಂ ಆಗಿದ್ದವರು" ಎಂದು ಹೇಳಿದರು.
ಇದೇ ಸಂದರ್ಭ, ಸಿ.ಪಿ. ಯೋಗೇಶ್ವರ್ ಗೆ ಚಿಕ್ಕಮಗಳೂರಿಗೆ ಆಹ್ವಾನ ನೀಡಿದ ಸಿ.ಟಿ.ರವಿ, "ಬನ್ನಿ ನಮ್ಮ ಜಿಲ್ಲೆ ನಿಮಗೆ ಮಾದರಿ. ಪಂಚಾಯಿತಿಯಿಂದ ಪಾರ್ಲಿಮೆಂಟ್ ವರಗೂ ಬಿಜೆಪಿನೇ ಇದೆ. ನೀವು ರಾಮನಗರದಲ್ಲಿ ಅದೇ ರೀತಿ ಬಿಜೆಪಿ ಕಟ್ಟಿ. ಆಗ ನಿಮ್ಮ ಜಿಲ್ಲೆಯೂ ಮಾದರಿ ಜಿಲ್ಲೆಯಾಗುತ್ತದೆ" ಎಂದು ಸಲಹೆ ನೀಡಿದರು.