ನಟ ದರ್ಶನ್ ಕರೆಗೆ ಓಗೊಟ್ಟು 3 ಪಕ್ಷಿ ದತ್ತು ಸ್ವೀಕರಿಸಿದ ಕಾಫಿನಾಡು ಕುಟುಂಬ
ಚಿಕ್ಕಮಗಳೂರು, ಜೂನ್ 8: ಕೋವಿಡ್-19 ಜಗತ್ತನ್ನು ತಲ್ಲಣಗೊಳಿಸಿದೆ. ಇದು ಕೇವಲ ವ್ಯಾಪಾರ ವಹಿವಾಟುಗಳಷ್ಟೇ ಅಲ್ಲದೆ, ಇನ್ನಿತರ ಹಲವು ಕ್ಷೇತ್ರಗಳು ಸಹ ಸಂಕಷ್ಟಕ್ಕೆ ಸಿಲುಕಿದೆ. ಈ ವ್ಯಾಪ್ತಿಗೆ ಮೃಗಾಲಯಗಳು ಸೇರ್ಪಡೆಗೊಂಡಿದ್ದು, ಪ್ರವಾಸಿಗರಿಲ್ಲದೆ ಇವುಗಳ ನಿರ್ವಹಣೆ ಸರ್ಕಾರಕ್ಕೂ ಸವಾಲಾಗಿ ಪರಿಣಮಿಸಿದೆ.
ಈ ಬಾರಿಯ ಪರಿಸರ ದಿನಾಚರಣೆಯಂದು ನಟ ದರ್ಶನ್ ತೂಗುದೀಪ್ ನೀಡಿದ ಕರೆಗೆ ಮಲೆನಾಡಿನ ಕುಟುಂಬವೊಂದು ಮೂರು ಪಕ್ಷಿಗಳನ್ನು ದತ್ತು ಸ್ವೀಕಾರ ಮಾಡಿ ಸಾಮಾಜಿಕ ಕಳಕಳಿ ಮೆರೆದಿದೆ.
ಜೂ.5ರ ಪರಿಸರ ದಿನಾಚರಣೆಯಂದು ನಟ ದರ್ಶನ್ "ರಾಜ್ಯದಲ್ಲಿ ಮೃಗಾಲಯಗಳು ಸಂಕಷ್ಟಕ್ಕೆ ಸಿಲುಕಿದ್ದು, ಹಲವು ಪ್ರಾಣಿಗಳು ಸೇರಿದಂತೆ ಅಲ್ಲಿನ ನಿರ್ವಹಣೆ ಮಾಡುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ. ಇಲ್ಲಿನ ಪ್ರಾಣಿಗಳನ್ನು ದತ್ತು ತಗೆದುಕೊಳ್ಳುವಂತೆ' ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೆ ಕರೆ ನೀಡಿದ್ದರು. ಇದನ್ನು ಗಮನಿಸಿದ ಚಿಕ್ಕಮಗಳೂರು ನಗರದ ಸಂದೀಪ್ ವಸಿಷ್ಠ ಹಾಗೂ ಅವರ ಪತ್ನಿ ರಮ್ಯಾ ಮೂರು ಪಕ್ಷಿಗಳನ್ನು ಒಂದು ವರ್ಷಕ್ಕೆ ದತ್ತು ತಗೆದುಕೊಂಡಿದ್ದಾರೆ.
ಪ್ರಾಣಿಗಳ ಮೇಲೆ ಸಾಕಷ್ಟು ಪ್ರೀತಿ ಇರುವ ಈ ಕುಟುಂಬ ದರ್ಶನ್ ನೀಡಿದ ಕರೆ ತಿಳಿದ ತಕ್ಷಣ ಮೈಸೂರು ಮೃಗಾಲಯದಲ್ಲಿನ ಒಂದು ಬಿಳಿ ನವಿಲು, ಹಾಗೂ ಎರಡು ಇಮೂ ಪಕ್ಷಿಯನ್ನು ಒಂದು ವರ್ಷಕ್ಕೆ ದತ್ತು ತಗೆದುಕೊಂಡಿದ್ದಾರೆ. ಸಂದೀಪ್ ಅವರು ಎರಡು ಇಮೋ ಪಕ್ಷಿಗಳನ್ನು ದತ್ತು ಸ್ವೀಕಾರ ಮಾಡಿಕೊಂಡಿದ್ದು, ಒಂದು ಪಕ್ಷಿಗೆ ವರ್ಷಕ್ಕೆ ಹತ್ತು ಸಾವಿರದಂತೆ ಇಪ್ಪತ್ತು ಸಾವಿರವನ್ನು ನೀಡಿದ್ದಾರೆ.
ಪತ್ನಿ ರಮ್ಯಾ ಒಂದು ಬಿಳಿ ನವಿಲುಗೆ ವರ್ಷಕ್ಕೆ ಮೂರುವರೆ ಸಾವಿರವನ್ನು ನೀಡಿ ದತ್ತು ಸ್ವೀಕಾರ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಹುಲಿ ಹಾಗೂ ಆನೆಯನ್ನು ದತ್ತು ಸ್ವೀಕಾರ ಮಾಡಿಕೊಳ್ಳಲು ಚಿಂತನೆ ನಡೆಸಿದ್ದಾರೆ.
ಇನ್ನು ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವುದರಿಂದ ಆದಾಯ ತೆರಿಗೆಗೂ ಅನುಕೂಲವಗುತ್ತದೆ ಹಾಗೂ ನಾವು ಬೇರೆ ಸಂದರ್ಭದಲ್ಲಿ ಮೃಗಾಲಯಕ್ಕೆ ಹೋಗಲು ಉಚಿತವಿರುತ್ತದೆ. ಜೊತೆಗೆ ಇಂತಹ ಸಂದರ್ಭದಲ್ಲಿ ಮೂಕ ಪ್ರಾಣಿಗಳಿಗೆ ಆಹಾರ ನೀಡುವುದರ ಜೊತೆಗೆ ನಮ್ಮ ದೇಶದ ಸಂಪನ್ಮೂಲಗಳಾದ ಮೃಗಾಲಯಗಳನ್ನು ರಕ್ಷಣೆ ಮಾಡಿದಂತೆಯೂ ಆಗುತ್ತದೆ ಎಂದು ಸಂದೀಪ್ ಈ ಕಾರ್ಯದಿಂದ ಸಂತಸಗೊಂಡಿದ್ದಾರೆ.
Recommended Video
"ಕೋವಿಡ್ ಇವತ್ತಿನ ಸಂದರ್ಭವನ್ನು ಗಮನಿಸಿದರೆ ಇನ್ನು ಒಂದು ವರ್ಷ ಯಾವುದೇ ಪ್ರಕ್ರಿಯೆಗಳು ಮಾಮೂಲಿಯಾಗುವಂತೆ ಕಾಣುತ್ತಿಲ್ಲ. ಮೃಗಾಲಯಗಳು ತೆರೆಯುವ ಸಾಧ್ಯತೆ ಇಲ್ಲ. ರಾಜ್ಯದಲ್ಲಿ 9 ಮೃಗಾಲಯಗಳಿದ್ದು, ಅಲ್ಲಿರುವ ಪ್ರಾಣಿಗಳ ನಿರ್ವಹಣೆಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ನಾವು ಪ್ರಾಣಿಗಳನ್ನು ದತ್ತು ತಗೆದುಕೊಂಡಿದ್ದು, ನನ್ನ ಎಲ್ಲಾ ಸ್ನೇಹಿತರಿಗೂ ತಿಳಿಸಿದ್ದೇನೆ'' ಎಂದು ಸಂದೀಪ್ ವಸಿಸ್ಠಾ ಹೇಳಿದರು.