ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೇರಳ ಪ್ರವಾಸಿಗರ ಮೇಲೆ ಕಣ್ಣು
ಚಿಕ್ಕಮಗಳೂರು, ಫೆಬ್ರವರಿ 05: ಚೀನಾದಲ್ಲಿ ಆರಂಭವಾದ ಕೊರೊನಾ ವೈರಸ್ ಎಂಬ ಮಹಾಮಾರಿ ಈಗ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.
ಸದ್ಯ ಈ ವೈರಸ್ ಭಾರತದ ದೇವರ ನಾಡು ಕೇರಳದಲ್ಲಿಯೂ ಪತ್ತೆಯಾಗಿದ್ದು, ಇದು ಕಾಫಿನಾಡು, ಪ್ರವಾಸಿಗರ ಸ್ವರ್ಗ ಚಿಕ್ಕಮಗಳೂರು ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟಿಸಿದೆ.
ಕಾಫಿನಾಡು ಚಿಕ್ಕಮಗಳೂರಿಗೆ ವಾರದಲ್ಲಿ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲಿ ಇತ್ತೀಚಿಗೆ ಕೇರಳದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ದಿನನಿತ್ಯ ನೂರಾರು ಪ್ರವಾಸಿಗರು ಕೇರಳದಿಂದ ಚಿಕ್ಕಮಗಳೂರಿಗೆ ಬರುತ್ತಾರೆ.
ಕೊರೊನಾ ಭೀತಿ: ಬೆಂಗಳೂರು-ಚೀನಾ ನಡುವೆ ವಿಮಾನ ಸಂಚಾರ ರದ್ದು
ಪ್ರತಿನಿತ್ಯ ಚಿಕ್ಕಮಗಳೂರು ಸಮೀಪದ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಕೆಮ್ಮಣ್ಣುಗುಂಡಿ, ಮುತ್ತೋಡಿ ಸೇರಿದಂತೆ ನರಸಿಂಹರಾಜ ಪುರ ತಾಲೂಕಿನ ಹಲವು ಪ್ರವಾಸಿ ತಾಣಗಳಿಗೆ ಹೆಚ್ಚು ಕೇರಳದ ಪ್ರವಾಸಿಗರು ಆಗಮಿಸುತ್ತಾರೆ.
ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಒತ್ತಾಯ
ಹೀಗಾಗಿ ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಡಳಿತ ಎಚ್ಚರಿಕೆಯಿಂದ ಇರಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಇನ್ನು ಪ್ರವಾಸಿಗರು ಗಿರಿಭಾಗದ ಹೋಂ ಸ್ಟೇಗಳು ಸೇರಿದಂತೆ ನಗರದ ಲಾಡ್ಜ್ ಗಳಲ್ಲಿಯೂ ಉಳಿದುಕೊಳ್ಳುತ್ತಾರೆ. ಇಡೀ ವಿಶ್ವದಲ್ಲೇ ಭಾರೀ ಸದ್ದಾಗುತ್ತಿರುವ ಸದ್ಯದ ಸುದ್ದಿ "ಕೊರೊನಾ'.
ಚೀನಾದಲ್ಲಿ ನೂರಾರು ಮಂದಿಯನ್ನು ಬಲಿ ತೆಗೆದುಕೊಂಡಿರುವ ಕೊರೊನಾ ವೈರಸ್ ಎಂಬ ಪದವೇ ಬೆಚ್ಚಿ ಬೀಳಿಸುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕ ರಾಜ್ಯದ ಕೆಲವೆಡೆ ಕಟ್ಟೆಚ್ಚರ ವಹಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿ ನಿಗಾ ಇಡಲಾಗಿದೆ. ಹೊರಗಿನಿಂದ ಬರುತ್ತಿರುವ ಪ್ರವಾಸಿಗರ ಮೇಲೆ ಕಣ್ಣಿಡಲಾಗಿದೆ. ಕೊರೊನಾ ವೈರಸ್ ಶಂಕೆ ಕಂಡುಬಂದಲ್ಲಿ ತಪಾಸಣೆಗೆ ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ ಗಳನ್ನೂ ತೆರೆಯಲಾಗುತ್ತಿದೆ.
ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸುತ್ತಿರುವ ಡಿಸಿಗಳು
ಈ ಬಗ್ಗೆ ಜಿಲ್ಲಾಡಳಿತ ಎಚ್ಚರಗೊಂಡು ಕೇರಳದ ಪ್ರವಾಸಿಗರಿಗೆ ಚಿಕ್ಕಮಗಳೂರು ಪ್ರವಾಸಕ್ಕೆ ಕೆಲಕಾಲ ನಿರ್ಬಂಧ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇನ್ನು ಈ ಬಗ್ಗೆ ಜಿಲ್ಲಾಡಳಿತ ಈಗಾಗಲೇ ಎಚ್ಚೆತ್ತುಕೊಂಡಿದ್ದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಈಗಾಗಲೇ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಕೊರೊನಾ ವೈರಸ್ ಜಿಲ್ಲೆಯಲ್ಲಿ ಹರಡದಂತೆ ಕಟ್ಟೆಚ್ಚರ ವಹಿಸಬೇಕು ಅಲ್ಲದೇ ಕೊರೊನಾ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊರೊನಾ ವೈರಸ್ ; ರಾಜ್ಯ ವಿಪತ್ತು ಎಂದು ಘೋಷಿಸಿದ ಕೇರಳ
ಹೊರರಾಜ್ಯದ ಪ್ರವಾಸಿಗರ ಮಾಹಿತಿ ಜಿಲ್ಲಾಡಳಿತ ಬಳಿ ಇಲ್ಲ
ಚಿಕ್ಕಮಗಳೂರು ಜಿಲ್ಲೆಗೆ ಕೇರಳದಿಂದ ಪ್ಯಾಕೇಜ್ ರೂಪದಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಈ ಪ್ಯಾಕೇಜ್ ಅನ್ನು ಚಿಕ್ಕಮಗಳೂರು ಮೂಲದ ಕೆಲವರು ಕೇರಳದ ಪ್ರವಾಸಿಗರಿಗೆ ಗಿರಿಶ್ರೇಣಿ ದರ್ಶನದ ಪ್ಯಾಕೇಜ್ ವ್ಯವಸ್ಥೆ ಮಾಡಿಕೊಡುತ್ತಿದ್ದು, ಇದರಲ್ಲಿ ಕೆಲ ಹೋಟೆಲ್, ಹೊಂ ಸ್ಟೇ, ಹಾಗೆ ಕೆಲ ಟ್ರಾವೆಲ್ ಏಜೆನ್ಸಿಗಳು ಕಾರ್ಯ ಪ್ರವೃತ್ತವಾಗಿವೆ.
ಹೀಗಾಗಿ ಜಿಲ್ಲೆಗೆ ಕೇರಳದಿಂದ ಎಷ್ಟು ಜನ ಪ್ರವಾಸಿಗರು ಜಿಲ್ಲೆಗೆ ಬರುತ್ತಾರೆ ಎಂಬ ಬಗ್ಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದ ಬಳಿ ಮಾಹಿತಿ ಇಲ್ಲ. ಆದ್ದರಿಂದ ಜಿಲ್ಲಾಡಳಿತ ಈ ಸಂದರ್ಭದಲ್ಲಿ ಈ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ ಎಂಬುದು ಸ್ಥಳೀಯರ ಆಗ್ರಹ.
ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ
ಇನ್ನು ಜಿಲ್ಲಾ ಆರೋಗ್ಯ ಇಲಾಖೆ ಈಗಾಗಲೇ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು, ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ 5 ಬೆಡ್ ಗಳ ಪ್ರತ್ಯೇಕ ಕೊಠಡಿ ಕಾಯ್ದಿರಿಸಲಾಗಿದೆ. ಒಮ್ಮೆಲೆ ಕೊರೊನಾ ವೈರಸ್ ಪತ್ತೆಯಾದರೆ ಸೂಕ್ತ ಚಿಕಿತ್ಸೆ ನೀಡಲು ಒಬ್ಬರು ವೈದ್ಯರು, ಓರ್ವ ನರ್ಸ್ ಹಾಗೂ ಒಬ್ಬ ಡಿ ದರ್ಜೆ ನೌಕರರನ್ನು ನೇಮಿಸಲಾಗಿದೆ.
ಇನ್ನ ನರಸಿಂಹರಾಜಪುರಕ್ಕೆ ಹೆಚ್ಚು ಕೇರಳದಿಂದ ಜನರು ಬರುತ್ತಾರೆ. ಈಗಾಗಿ ಎನ್.ಆರ್.ಪುರ ದಲ್ಲಿ ಚಿಕಿತ್ಸೆಗೆ ಪ್ರತ್ಯೇಕ ಕೊಠಡಿ ತೆರೆಯಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.