ಬಿಜೆಪಿ ಸೇರಲು 'ಡಿಮ್ಯಾಂಡ್' ಇಟ್ಟಿದ್ದರು ಮಲೆನಾಡ ಕಾಂಗ್ರೆಸ್ ಶಾಸಕ?
ಚಿಕ್ಕಮಗಳೂರು, ಡಿಸೆಂಬರ್ 28: ಹದಿನೇಳು ಶಾಸಕರು ಸಾಮೂಹಿಕ ಆಪರೇಷನ್ ಗೆ ತುತ್ತಾಗಿ ಮೈತ್ರಿ ಸರ್ಕಾರಕ್ಕೆ ಕೈಕೊಟ್ಟು ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಡಿದ ವಿಷಯ ಈಗ ಸ್ವಲ್ಪ ಹಳೆಯದ್ದಾಯಿತು. ಹೊಸ ವಿಷಯವೆಂದರೆ ಆ ಸಮಯದಲ್ಲಿ ಇನ್ನೂ ಕೆಲವು ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಆಫರ್ ಹೋಗಿತ್ತು ಮತ್ತು ಕೆಲವರು ಪಕ್ಷ ಬಿಡಲು ತಯಾರೂ ಇದ್ದರು ಎಂಬುದು.
ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಬಿಜೆಪಿಯಿಂದ ಆಫರ್ ಹೋಗಿತ್ತು, ಅವರು ಬಿಜೆಪಿ ಸೇರಲು ತಯಾರಾಗಿದ್ದರು ಎಂದು ಮಾಜಿ ಶಾಸಕ ಜೀವರಾಜ್ ಆರೋಪ ಮಾಡಿದ್ದಾರೆ.
ಟಿ.ಡಿ.ರಾಜೇಗೌಡ ಅವರಿಗೆ ಬಿಜೆಪಿಯಿಂದ ಆಫರ್ ಇತ್ತು, ರಾಜೀನಾಮೆ ಕೊಟ್ಟು ಬಿಜೆಪಿ ಸೇರಲು ರಾಜೇಗೌಡ ಕೆಲವು ಡಿಮ್ಯಾಂಡ್ ಇಟ್ಟಿದ್ದರು ಎಂದು ಜೀವರಾಜ್ ಆರೋಪ ಮಾಡಿದ್ದಾರೆ. ಆದರೆ ಆ ಡಿಮ್ಯಾಂಡ್ಗಳು ಏನಾಗಿದ್ದವು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.
'ನೀವು ಬಿಜೆಪಿ ಗೆ ಬರಲು ಡಿಮ್ಯಾಂಡ್ ಮಾಡಿದ್ದು ಸುಳ್ಳಾದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿ' ಎಂದು ಮಾಜಿ ಸಚಿವ ಜೀವರಾಜ್, ರಾಜೇಗೌಡ ಅವಿರಗೆ ಸವಾಲು ಹಾಕಿದ್ದಾರೆ.
'ಡಿಮ್ಯಾಂಡ್ ಹೆಚ್ಚು ಮಾಡಿಕೊಳ್ಳಲೆಂದೇ ರಾಜೇಗೌಡ ಆಗ ಧರ್ಮಸ್ಥಳಕ್ಕೆ ಹೋಗಿದ್ದರು' ಎಂದು ಸಹ ಜೀವರಾಜ್ ಹೇಳಿದ್ದಾರೆ. ಆಪರೇಷನ್ ಕಮಲದ ಸಮಯದಲ್ಲಿ ರಾಜೇಗೌಡ ಅವರು ಏಕಾಏಕಿ ಧರ್ಮಸ್ಥಳಕ್ಕೆ ಹೋಗಿದ್ದರು. ನಂತರ ಅಲ್ಲಿಂದಲೇ ಫೋಟೊ ಬಿಡುಗಡೆ ಮಾಡಿ ನಾನು ಬಿಜೆಪಿ ಸೇರಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದರು.
ಇದು ಮಾತ್ರವಲ್ಲದೆ ಭ್ರಷ್ಟಾಚಾರದ ಆರೋಪವನ್ನೂ ರಾಜೇಗೌಡ ಮೇಲೆ ಹೊರಿಸಿರುವ ಜೀವರಾಜ್, 'ಅತಿವೃಷ್ಟಿ ದುಡ್ಡನ್ನು ತನ್ನ ಹಿಂಬಾಲಕರ ಮನೆಗೆ ಕೊಟ್ಟಿದ್ದು ಸುಳ್ಳು ಎನ್ನುವುದಾದರೇ ಬಂದು ಪ್ರಮಾಣ ಮಾಡಿ ' ಎಂದು ಸವಾಲೆಸಿದಿದ್ದಾರೆ.
'ಜೀವರಾಜ್ ಕ್ಷೇತ್ರಕ್ಕೆ ಬಂದ ಅನುದಾನವನ್ನು ತಡೆಹಿಡಿದಿದ್ದಾರೆ ಸುಳ್ಳು ಎಂದಾದರೆ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ' ಎಂದು ಶಾಸಕ ಟಿ.ಡಿ.ರಾಜೇಗೌಡ ಇತ್ತಿಚ್ಚೆಗೆ ಆರೋಪ ಮಾಡಿದ್ದರು. ಇದರಿಂದಾಗಿ ಕೆರಳಿದ ಜೀವರಾಜ್ ಇಂದು ಕೊಪ್ಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.