ಕಾಂಗ್ರೆಸ್ ಸಿಂಪಥಿ ಕಳೆದುಕೊಂಡಾಯ್ತು ಎಂದು ಅಣಕಿಸಿದ ಶೋಭಾ ಕರಂದ್ಲಾಜೆ
Recommended Video
ಚಿಕ್ಕಮಗಳೂರು, ಸೆಪ್ಟೆಂಬರ್ 4: "ಕಾಂಗ್ರೆಸ್ ಜನರ ಸಿಂಪಥಿಯನ್ನು ಕಳೆದುಕೊಂಡು ಈ ಮಟ್ಟಕ್ಕೆ ಇಳಿದಿದೆ. ಇಂಥದ್ದನ್ನ ಮಾಡಿ ಮಾಡಿಯೇ ಅವರು ಜನರ ಕರುಣೆಯನ್ನೂ ಕಳೆದುಕೊಂಡಿರೋದು" ಎಂದು ವ್ಯಂಗ್ಯವಾಡಿದ್ದಾರೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ.
ಡಿಕೆ ಶಿವಕುಮಾರ್ ಆಸ್ತಿ ವಿವರ ಬಹಿರಂಗ, 600 ಕೋಟಿ ಪ್ಲಸ್!
ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ಡಿ.ಕೆ.ಶಿವಕುಮಾರ್ ಬಂಧನ ಕಾನೂನಿನ ಪ್ರಕಾರವೇ ಆಗಿದೆ. ನಿರಂತರ ಅಧ್ಯಯನ ಹಾಗೂ ತನಿಖೆಯನ್ನು ಸಂಸ್ಥೆಗಳು ಮಾಡಿವೆ. ಅದರ ಆಧಾರದಲ್ಲಿ ಅವರ ಬಂಧನವಾಗಿರಬಹುದು. ದೇಶದ 70 ವರ್ಷದ ಇತಿಹಾಸದಲ್ಲಿ ಇಂಥ ಹಲವು ಬಂಧನ, ತನಿಖೆಗಳು ಆಗಿವೆ. ಇಡಿ ಅಥವಾ ಸಿಬಿಐ ಯಾವುದೂ ನಾವು ಹುಟ್ಟು ಹಾಕಿದ್ದಲ್ಲ. ಇವೆಲ್ಲಾ ಹುಟ್ಟಲು ಅವರೇ ಕಾರಣೀಕರ್ತರು. ಇವತ್ತು ಇವರು ಮಾಡುತ್ತಿರುವ ಹೋರಾಟ ಯಾರ ಪರ ಎಂದು ಅರ್ಥ ಆಗ್ತಿಲ್ಲ. ಯಾರ ಪರ ನಿಂತಿದ್ದಾರೆ, ಯಾಕಾಗಿ ನಿಲ್ತಾರೆ?" ಎಂದು ಪ್ರಶ್ನಿಸಿದರು.
"ಹಾಗಿದ್ದರೆ ಹಿಂದೆ ಅವರು ಮಾಡಿದ ಎಲ್ಲಾ ಬಂಧನವೂ ರಾಜಕೀಯ ಪ್ರೇರಿತವೇ? ರಾಜಕೀಯ ಪ್ರೇರಿತವಾಗಿಯೇ ಯುಪಿಎ ಕಾಲದಲ್ಲಿ ಬಂಧನವಾಗಿದೆಯಾ? ಇದಕ್ಕೆಲ್ಲಾ ಕಾಂಗ್ರೆಸ್ ಉತ್ತರ ಕೊಡಬೇಕಾದ ಜಾಗದಲ್ಲಿದೆ. ಯಾರು ಪ್ರಶ್ನೆ ಕೇಳ್ತಿದ್ದಾರೆ, ಅವರೇ ಉತ್ತರ ಹೇಳಬೇಕು" ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಹಾಗಿದ್ದರೆ ಇಷ್ಟುದಿನ ಡಿಕೆ ಶಿವಕುಮಾರ್ ಮಾಧ್ಯಮದ ಮುಂದೆ ಹೇಳೆದೆಲ್ಲಾ ಸುಳ್ಳಾ?
"ಡಿಕೆಶಿ ಸಾಮಾನ್ಯ ವ್ಯಕ್ತಿಯಲ್ಲ. ಪ್ರಭಾವಿ ಮುಖಂಡ. ಸುಮ್ಮನೆ ಅವರ ಬಂಧನವಾಗಲ್ಲ. ದೊಡ್ಡ ವ್ಯಕ್ತಿ, ಮಂತ್ರಿಯಾದವರ ಬಂಧನವಾಗುತ್ತದೆ ಎಂದರೆ ಅದರ ಹಿಂದೆ ಬಲವಾದ ಸಾಕ್ಷಿ ಇರುತ್ತೆ. 70 ವರ್ಷದಲ್ಲಿ ಈ ದೇಶವನ್ನು ಹೇಗೆ ಲೂಟಿ ಮಾಡಿದ್ರು, ಯುಪಿಯ ಅವಧಿಯಲ್ಲಿ ಯಾವ-ಯಾವ ಇಲಾಖೆಯಲ್ಲಿ ಎಷ್ಟು ಲೂಟಿ ಮಾಡಿದರು, ಅದೆಲ್ಲ ಸಾಕ್ಷಿಗಳು ಇವತ್ತು ನಮ್ಮ ಕಣ್ಣ ಮುಂದಿದೆ. ಹಲವರಿಗೆ ಶಿಕ್ಷೆಯಾಗಿದೆ. ಮತ್ತೂ ಹಲವರಿಗೆ ಶಿಕ್ಷೆಯಾಗಲಿದೆ. ಕಾಂಗ್ರೆಸ್ ಯಾರನ್ನು ಬೇಕಾದರೂ ಸಮರ್ಥನೆ ಮಾಡಿಕೊಳ್ಳುತ್ತದೆ. ಇದು ವ್ಯವಸ್ಥೆಗೆ ಅಣಕ" ಎಂದು ಹೇಳಿದರು.