ಕೋರ್ಟ್ ಆದೇಶ ಉಲ್ಲಂಘನೆ: ಜೆಡಿಎಸ್ ಜಿಲ್ಲಾಧ್ಯಕ್ಷನ ವಿರುದ್ಧ ದೂರು
ಚಿಕ್ಕಮಗಳೂರು, ಮಾರ್ಚ್ 09: ಚಿಕ್ಕಮಗಳೂರು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ತಾಲೂಕು ಪಂಚಾಯತ್ ಸದಸ್ಯ ರಂಜನ್ ಅಜಿತ್ ಕುಮಾರ್ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಮ್ಮ ಪ್ರಭಾವ ಬಳಸಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ತಮ್ಮ ತೋಟದ ಬೇಲಿಯನ್ನು ಯುವಕರಿಂದ ಅಕ್ರಮವಾಗಿ ತೆರವುಗೊಳಿಸಿದ್ದಾರೆಂದು ತೋಟದ ಮಾಲೀಕರಾದ ಅಲ್ಬರ್ಟ ವಿನೋದ್ ಕಾರ್ಡೋಜಾ ಅವರು ಸೋಮವಾರ ಮೂಡಿಗೆರೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಪ್ಪದಲ್ಲಿ ರಾತ್ರೋರಾತ್ರಿ ಒಂಟಿ ಮನೆಗೆ ನುಗ್ಗಿ ಸಿನಿಮೀಯ ರೀತಿ ದರೋಡೆ
ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಸರ್ವೆ ನಂ 141/2 ಮತ್ತು 141/3 ರಲ್ಲಿ ಸುಮಾರು 80 ವರ್ಷದಿಂದ ಹಿಡುವಳಿ ಜಾಗ ನಮ್ಮ ಸ್ವಾಧೀನದಲ್ಲಿದೆ. ಆದರೆ ಪಕ್ಕದ ಜಮೀನಿನ ಮಾಲೀಕ ಹಾಗೂ ತಾ.ಪಂ. ಸದಸ್ಯರಾದ ರಂಜನ್ ಅಜಿತ್ ಕುಮಾರ್ ಆ ಜಾಗ ತಮ್ಮ ಭೋಗದಲ್ಲಿದೆ ಎಂದು ತಹಸೀಲ್ದಾರರಿಗೆ ಈ ಹಿಂದೆ ದೂರು ಸಲ್ಲಿಸಿದ್ದರು.
ಈ ಸಂಬಂಧ ಮೂಡಿಗೆರೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಮುಂದಿನ ಆದೇಶದವರೆಗೆ ಜಮೀನಿನ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಆದರೂ ಅವರು ತಮ್ಮ ಪ್ರಭಾವ ಬಳಸಿ ಮಾ. 08 ರಂದು ಮಧ್ಯರಾತ್ರಿ ಯುವಕರ ತಂಡವೊಂದನ್ನು ಕಳುಹಿಸಿ ನಮ್ಮ ಜಮೀನಿನಲ್ಲಿದ್ದ ಬೇಲಿ ತೆರವುಗೊಳಿಸಿದ್ದಾರೆ.
ನಮ್ಮ ಮನೆಯಲ್ಲಿ 5 ಮಂದಿ ವಾಸವಾಗಿದ್ದು, ಅವರ ಜೀವಕ್ಕೆ ಅಪಾಯವಿರುವುದರಿಂದ ನಮಗೆ ರಕ್ಷಣೆ ನೀಡುವುದರ ಜೊತೆಗೆ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಯುವಕರ ತಂಡವನ್ನು ಬಿಟ್ಟು ತಮ್ಮ ಜಮೀನಿನ ಬೇಲಿ ಕತ್ತರಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.