ಸಾಲಮನ್ನಾ ಮಾಡಿ; ಕಾಫಿ ಬೆಳೆಗಾರರ ಪ್ರತಿಭಟನೆ
ಚಿಕ್ಕಮಗಳೂರು, ಜನವರಿ 29: ಕಾಫಿ ಬೆಳೆಗಾರರು ಪಡೆದಿರುವ ಸಂಪೂರ್ಣ ಸಾಲಮನ್ನಾ ಮಾಡಬೇಕು. ಕಾಫಿ ಮಂಡಳಿಗಳ ಬಾಗಿಲು ಮುಚ್ಚಬಾರದು ಎಂದು ಒತ್ತಾಯಿಸಿ ಕಾಫಿ ಬೆಳೆಗಾರರು ಪ್ರತಿಭಟನೆ ನಡೆಸಿದರು.
ಗುರುವಾರ ಆಲ್ದೂರು ಹೋಬಳಿ ಕಾಫಿ ಬೆಳೆಗಾರರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಆಲ್ದೂರಿನಿಂದ ನಗರಕ್ಕೆ ವಾಹನಗಳಲ್ಲಿ ಆಗಮಿಸಿದ ಪ್ರತಿಭಟನಾಕಾರರು, ಮುಖ್ಯರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ತೆರಳದೆ, ನೇರವಾಗಿ ಕೃಷ್ಣರಾಜೇಂದ್ರ ಕೇಂದ್ರ ಗ್ರಂಥಾಲಯದ ಎದುರಿನ ವೃತ್ತದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದರು.
ಅಕಾಲಿಕ ಮಳೆಯಿಂದ ಬೆಳೆ ಹಾಳಾಗಿದ್ದು, ಸಹಾಯಧನ ಬಿಡುಗಡೆಗೊಳಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಬೆಳೆಗಾರರ ಹೋರಾಟಕ್ಕೆ ಜಯವಾಗಲಿ, ಯಾವುದೇ ಕಾರಣಕ್ಕೂ ಆಲ್ದೂರಿನ ಕಾಫಿ ಮಂಡಳಿಯನ್ನು ಮುಚ್ಚಬಾರದು, ಕೇಂದ್ರಸರ್ಕಾರ ಕಾಫಿ ಬೆಳೆಗಾರರ ಹಿತಕಾಪಾಡಬೇಕು. ಕಾಫಿ ಉದ್ಯಮ ಉಳಿಸಿ, ಕಾಫಿ ಬೆಳೆಗಾರರು ಮತ್ತು ಕಾರ್ಮಿಕರನ್ನು ರಕ್ಷಿಸಬೇಕು ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, "ಕಳೆದ ಆರೇಳು ವರ್ಷದಿಂದ ಬೆಳೆಗಾರರಿಗೆ ಸಂಕಷ್ಟ ಎದುರಾಗಿದ್ದು, ಸರ್ಕಾರಗಳು ಹೆಚ್ಚಿನ ಗಮನ ಹರಿಸಲಿಲ್ಲ, ಅಕಾಲಿಕ ಮಳೆಯಿಂದ ಶೇ. 40 ರಷ್ಟು ಬೆಳೆ ಹಾಳಾಗಿದ್ದು, ನಷ್ಟವನ್ನು ಹೇಗೆ ಭರಿಸಬೇಕು ಎಂಬುದೇ ತಿಳಿಯದಾಗಿದೆ" ಎಂದರು.
ಎಕರೆಗಿಂತಿಷ್ಟು ಪರಿಹಾರವೆಂದು ನಿಗದಿಪಡಿಸಿ ಬಿಡುಗಡೆಗೊಳಿಸಬೇಕು. ಸಾಲ ತೀರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಬೆಳೆಗಾರರಿದ್ದಾರೆ. ಅವರುಗಳನ್ನು ಬ್ಯಾಂಕಿನಿಂದ ಪಡೆದಿರುವ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಶೇ.3ರ ಬಡ್ಡಿದರದಲ್ಲಿ ಹೊಸಸಾಲ ನೀಡಬೇಕೆಂದು ಆಗ್ರಹಿಸಿದರು.
ಒಂದು ಲೋಡು ಸಿಲ್ವರ್ ಮರಕ್ಕೆ 12-15ಸಾವಿರ ಕಡಿತಗೊಳಿಸಲಾಗುತ್ತಿದೆ. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ, ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನಾನಿರತರನ್ನುದ್ದೇಶಿಸಿ ಮಾತನಾಡಿದ ಕಾಫಿಮಂಡಳಿ ಮಾಜಿ ಉಪಾಧ್ಯಕ್ಷ ಡಿ. ಎಂ. ವಿಜಯ್, "ಫಸಲ್ಬೀಮಾ ಯೋಜನೆಯಡಿ ರೈತರ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತಿರುವುದು ತಪ್ಪಬೇಕು. ಬೆಳೆಗಾರರ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕಾಫಿ ಉದ್ಯಮ ಉಳಿಯುವುದಿಲ್ಲವೆಂದು" ಎಚ್ಚರಿಸಿದರು.
ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ ಬಳಿಕ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ಅವರ ಬಳಿ ಹೇಳಿಕೊಂಡರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, "ಅಕಾಲಿಕ ಮಳೆಯಿಂದ ಬೆಳೆಹಾಳಾಗಿರುವುದು ಕಂಡುಬಂದಿದೆ. ಎನ್ಡಿಆರ್ಎಫ್ ನಿಯಮದಂತೆ ಸದ್ಯದಲ್ಲೇ ಪರಿಹಾರ ದೊರೆಯಲಿದೆ. ಸಿಲ್ವರ್ ಮರಗಳಿಗೆ ಶೇ.10 ರಷ್ಟು ಹಣವನ್ನು ಕಡಿತಗೊಳಿಸುತ್ತಿರುವ ಕುರಿತು ಅರಣ್ಯ ಇಲಾಖೆ ಗಮನಕ್ಕೆ ತರಲಾಗುವುದು. ಸಾಲಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಕಾಫಿ ಮಂಡಳಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು" ಎಂದರು.