'ವಿಕ್ರಾಂತ್ ರೋಣ' ನೋಡುವಾಗ ಗಲಾಟೆ, ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
ಚಿಕ್ಕಮಗಳೂರು, ಆಗಸ್ಟ್, 03: ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರ ವೀಕ್ಷಣೆ ವೇಳೆ ಚಿಕ್ಕಮಗಳೂರಿನ ಮಿಲನ ಚಿತ್ರಮಂದಿರದಲ್ಲಿ ಯುವಕರು ಲಾಂಗು, ಮಚ್ಚುಗಳಿಂದ ಹೊಡೆದಾಡಿಕೊಂಡ ಘಟನೆ ನಡೆದಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಘಟನೆ ನಡೆದ 4 ದಿನದಲ್ಲಿ 8 ಜನ ಆರೋಪಿಗಳನ್ನು ಬಂಧಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗಳನ್ನು 11 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಭಾಷೆ ಬಗೆಗಿನ ಪ್ರಧಾನಿ ಮೋದಿ ಹೇಳಿಕೆಗೆ ಕಿಚ್ಚ ಸುದೀಪ್ ಮೆಚ್ಚುಗೆ!
ಜುಲೈ 28ರಂದು ನಗರದ ಮಿಲನ ಚಿತ್ರಮಂದಿರದಲ್ಲಿ ವಿಕ್ರಾಂತ್ ರೋಣ ಸಿನಿಮಾ ವೀಕ್ಷಣೆ ವೇಳೆ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು, ಈ ಕುರಿತ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿನಿಮಾ ವೀಕ್ಷಣೆ ವೇಳೆ ಯುವಕನೋರ್ವ ಪದೇ-ಪದೇ ಹೊರಗೆ ಹೋಗಿ ಬರುತ್ತಿದ್ದನು. ಇದೇ ವಿಷಯವಾಗಿ ಚಿತ್ರ ಮಂದಿರದ ಒಳಗೆ ಎರಡು ಗುಂಪುಗಳ ಮಧ್ಯೆ ಸಣ್ಣ ಗಲಾಟೆಯಾಗಿತ್ತು. ಹೊರಗೆ ಬಂದವರು ಮತ್ತೆ ಗಲಾಟೆ ಮಾಡಿಕೊಂಡಿದ್ದಾರೆ.
ಈ ವೇಳೆ ಕಾರಿನಲ್ಲಿಟ್ಟಿದ್ದ ಮಚ್ಚು, ಲಾಂಗು, ಡ್ರ್ಯಾಗರ್ಗಳಿಂದ ಹೊಡೆದಾಡಿಕೊಂಡಿದ್ದರು. ಗಲಾಟೆಯಲ್ಲಿ ಭರತ್ ಹಾಗೂ ಜೀವನ್ ಎಂಬ ಇಬ್ಬರು ಯುವಕರಿಗೆ ತೀವ್ರ ಗಾಯವಾಗಿದ್ದು, ಇಬ್ಬರೂ ಹಾಸನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಧಿತ ಆರೋಪಿಗಳು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಚಿಕ್ಕಮಗಳೂರು ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ 4 ತನಿಖಾ ತಂಡಗಳನ್ನು ರಚಿಸಿದ್ದರು.
ಎಂಟು ಜನರಲ್ಲಿ 6 ಮಂದಿ ಕೃತ್ಯದಲ್ಲಿ ಭಾಗಿಯಾಗಿದ್ದರು. ಇನ್ನಿಬ್ಬರು ಪರೋಕ್ಷವಾಗಿ ಸಹಕಾರ ನೀಡಿದ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಇನ್ನು ಮೂರ್ನಾಲ್ಕು ಜನ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಅವರನ್ನು ಬಂಧಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ತಿಳಿಸಿದರು.
ಸಿಪಿಐಗಳಾದ ಗುರುಪ್ರಸಾದ್, ಜಯರಾಮ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು. ಸಿನಿಮಾ ವೀಕ್ಷಣೆ ವೇಳೆ ಸಣ್ಣ ವಿಚಾರವಾಗಿ ಕಿರಿಕ್ ಉಂಟಾಗಿ ಲಾಂಗು, ಮಚ್ಚಿನಿಂದ ಹೊಡೆದಾಡಿಕೊಂಡಿದ್ದ ಯುವಕರು ಸದ್ಯ ಜೈಲು ಸೇರಿದ್ದಾರೆ.