ಗನ್ ಮ್ಯಾನ್ ನೀಡುವಂತೆ ಚಿಕ್ಕಮಗಳೂರು ನಗರಸಭೆ ಸದಸ್ಯನ ಮನವಿ!
ಚಿಕ್ಕಮಗಳೂರು, ಆಗಸ್ಟ್, 01: ರಾಜ್ಯದಲ್ಲಿನ ಕೋಮು ಸಂಘರ್ಷ ಹಾಗೂ ಜಾತಿ ದ್ವೇಷದ ಘಟನೆಯಿಂದ ಆತಂಕಗೊಂಡು ಚಿಕ್ಕಮಗಳೂರಿನಲ್ಲಿ ಜೆಡಿಎಸ್ ನಗರಸಭೆ ಸದಸ್ಯ ಎ. ಸಿ. ಕುಮಾರ್ ಗನ್ ಮ್ಯಾನ್ಗಾಗಿ ಮನವಿ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಗನ್ ಮ್ಯಾನ್ ನೀಡುವಂತೆ ಪತ್ರ ಬರೆದಿದ್ದಾರೆ.
ನಗರಸಭೆಯ 8ನೇ ವಾರ್ಡಿನ ಜೆಡಿಎಸ್ ಸದಸ್ಯ ಎ. ಸಿ. ಕುಮಾರ್ ಎಂಬುವವರು ಗನ್ ಮ್ಯಾನ್ ಕೋರಿ ಎಸ್ಪಿ ಅಕ್ಷಯ್ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು ತಮಗೆ ಗನ್ ಮ್ಯಾನ್ ಏಕೆ ಬೇಕು ಎಂದು ಚಿಕ್ಕಮಗಳೂರು ಎಸ್ಪಿಗೆ ವಿವರವಾದ ವಿವರಣೆಯನ್ನು ನೀಡಿದ್ದಾರೆ.
ಚಿಕ್ಕಮಗಳೂರು ನಗರಸಭೆಯಲ್ಲಿ ಈ ಹಿಂದೆ ಹಾಗೂ ಈಗ ನಡೆಯುತ್ತಿರುವ ಕಾನೂನುಬಾಹಿರ ಕಾಮಗಾರಿಗಳು, ಟೆಂಡರ್ಗಳು, ಅಕ್ರಮ ನೇಮಕಾತಿ, ಕಾನೂನು ಬಾಹಿರವಾಗಿ ಇಟ್ಟಿರುವ ಖಾತೆಗಳು, ಕಾನೂನು ಉಲ್ಲಂಘಿಸಿ ನಿರ್ಮಿಸುತ್ತಿರುವ ಅನಧಿಕೃತ ಕಟ್ಟಡಗಳು, ಸರ್ಕಾರಿ ಆಸ್ತಿ ಒತ್ತುವರಿಗಳ ಬಗ್ಗೆ ಮಾಹಿತಿ ಹಕ್ಕಿನಡಿ ದಾಖಲೆಗಳನ್ನು ಪಡೆದು ಅಕ್ರಮಗಳ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ ಎಂದು ಹೇಳಿದ್ದಾರೆ.
ನಗರದ ಜನತೆಗೂ ಕೂಡ ನಗರಸಭೆಯಲ್ಲಿನ ಭ್ರಷ್ಟಾಚಾರದ ಮಾಹಿತಿಯನ್ನು ತಿಳಿಸುತ್ತಿದ್ದೇನೆ. ಹಾಗಾಗಿ ನನ್ನ ಮೇಲೆ ಜಾತಿ ನಿಂದನೆ ಕಾಯ್ದೆಯಡಿ ಸುಳ್ಳು ದೂರು ದಾಖಲಿಸಿದ್ದು, ನಗರಸಭೆ ಪೌರಾಯುಕ್ತರು ಹಾಗೂ ಅಧ್ಯಕ್ಷರು ಸಿಬ್ಬಂದಿಗಳನ್ನು ಪ್ರಚೋದಿಸಿ ನನ್ನ ವಿರುದ್ಧ ದೂರು ತೆಗೆದುಕೊಂಡಿರುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಾನು ಮಾಹಿತಿ ನೀಡಿರುವ ಅಕ್ರಮ ಕಟ್ಟಡಗಳ ಮಾಲೀಕರು ನನ್ನ ವಿರುದ್ಧ ದೂರು ನೀಡುವಂತೆ ಎತ್ತಿಕಟ್ಟಿದ್ದಾರೆ. ನನ್ನ ವಾಸದ ಮನೆಯನ್ನು ಕೂಡ ಅಕ್ರಮವಾಗಿ ಕಟ್ಟಿದ್ದೀರಿ ಎಂದು ನೋಟಿಸ್ ನೀಡಿರುತ್ತಾರೆ. ಆದ್ದರಿಂದ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ನಗರದಲ್ಲಿ ನಡೆಯುತ್ತಿರುವ ನನ್ನ ವಿರುದ್ಧದ ಪಿತೂರಿಯಿಂದ ಬೇಸತ್ತಿದ್ದೇನೆ ಎಂದು ತಿಳಿಸಿದ್ದಾರೆ.
ರಕ್ಷಣೆ ಇಲ್ಲದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ನನಗೆ ತಾವುಗಳು ಗನ್ ಮ್ಯಾನ್ ನೀಡಿ, ಕಾನೂನು ಬದ್ಧ ರಕ್ಷಣೆ ನೀಡಬೇಕೆಂದು ಎಸ್ಪಿಗೆ ಎ. ಸಿ. ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ನಗರಸಭೆ ಸದ್ಯಸ್ಯರಿಗೆ ಹೀಗಾದರೆ ಜನಸಮಾನ್ಯರ ಗತಿ ಏನು ಎನ್ನವಂತಹ ಪ್ರಶ್ನೆಗಳು ಮೂಡುತ್ತಿವೆ.
ರಾಜ್ಯದಲ್ಲಿ ಆಗುತ್ತಿರುವ ಭ್ರಷ್ಟಾಚಾರಗಳು, ಕೋಮು, ಗಲಭೆಗಳಿಂದ ಆತಂಕಗೊಂಡು ಚಿಕ್ಕಮಗಳೂರಿನಲ್ಲಿ ನಗರಸಭೆ ಸದಸ್ಯ ಎ. ಸಿ. ಕುಮಾರ್ ತಮ್ಮ ರಕ್ಷಣೆಗೆ ಗನ್ ಮ್ಯಾನ್ ಕೇಳಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿಯಾಗಿದೆ.
Recommended Video