ಚಿಕ್ಕಮಗಳೂರು: ಕೊಚ್ಚಿ ಹೋದ ಸೇತುವೆ, ನದಿಯಲ್ಲಿ ಜನರ ಓಡಾಟ
ಚಿಕ್ಕಮಗಳೂರು, ಜುಲೈ 10: ಹಲವು ಗ್ರಾಮಗಳ ಸಂಪರ್ಕ ಕಲ್ಪಿಸುವ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯ ತಾತ್ಕಾಲಿಕ ಸೇತುವೆ ವಾರದ ಹಿಂದೆ ಕೊಚ್ಚಿ ಹೋಗಿತ್ತು. ಆದರೂ ಸ್ಥಳೀಯ ಜನ ಪ್ರಾಣದ ಹಂಗು ತೊರೆದು ನದಿಯ ಮೂಲಕ ಓಡಾಟ ನಡೆಸುತ್ತಿದ್ದಾರೆ.
Recommended Video
ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯಲ್ಲಿ ಅಪಾಯವನ್ನು ಲೆಕ್ಕಿಸದೆ ಜನರು ನದಿಯನ್ನು ದಾಟಿ ಓಡಾಡುತ್ತಿದ್ದಾರೆ. ಯಾಕೆಂದರೆ ಅಲ್ಲಿನ ಜನರಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬರಬೇಕಾದರೆ ರಸ್ತೆಯಿಲ್ಲ. ಹೀಗಾಗಿ ಅವರು ಅನಿವಾರ್ಯವಾಗಿ ನದಿಯನ್ನು ದಾಟಿ ಬರುತ್ತಿದ್ದಾರೆ.
ಚಿಕ್ಕಮಗಳೂರು: ಭಾರಿ ಮಳೆಗೆ ತಾತ್ಕಾಲಿಕ ಸೇತುವೆ ಕುಸಿತ
ಜನರು ದಿನನಿತ್ಯದ ಕೆಲಸಕ್ಕಾಗಿ ಪ್ರಾಣದ ಹಂಗು ತೊರೆದು ಹೇಮಾವತಿ ನದಿಯನ್ನು ದಾಟಿ ಬರುತ್ತಿದ್ದಾರೆ. ಈ ನದಿಗೆ ಕಟ್ಟಲಾಗಿದ್ದ ತಾತ್ಕಾಲಿಕ ಸೇತುವೆ ವಾರದ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು.
ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಪ್ರವಾಹದಲ್ಲಿ ಬಂಕೇನಹಳ್ಳಿಯ ಸೇತುವೆ ಕೊಚ್ಚಿ ಹೋಗಿತ್ತು. ಸೇತುವೆ ನಿರ್ಮಿಸಲು ಸರ್ಕಾರ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಸ್ವತಃ ಗ್ರಾಮಸ್ಥರೇ ತಾತ್ಕಾಲಿಕ ಸೇತುವೆಯನ್ನು ನಿರ್ಮಾಣ ಮಾಡಿಕೊಂಡಿದ್ದರು. ಈಗ ಅದೂ ಕೊಚ್ಚಿ ಹೋಗಿದೆ.
ದಿನನಿತ್ಯ ಈ ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರು, ಕಾರ್ಮಿಕರು ಜೀವದ ಹಂಗು ತೊರೆದು ಕುಸಿದ ಸೇತುವೆ ದಾಟಿ ಹೋಗಬೇಕಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಮೂಡಿಗೆರೆ ತಹಶೀಲ್ದಾರ್ ಅವರ ಗಮನ ಸೆಳೆದಾಗ ಶೀಘ್ರವಾಗಿ ಸೇತುವೆ ನಿರ್ಮಿಸುವ ಭರವಸೆ ನೀಡಿದ್ದಾರೆ ಎಂದರು.