ವೈಜ್ಞಾನಿಕವಾಗಿ ಪ್ರಕರಣ ಪತ್ತೆ ಹೆಚ್ಚು ಕಲೆ ಕರಗತ ಮಾಡಿಕೊಂಡಿರುವ ಪೊಲೀಸ್ ಇಲಾಖೆ
ಚಿಕ್ಕಮಗಳೂರು, ಆಗಸ್ಟ್ 31: "ಪೊಲೀಸ್ ಇಲಾಖೆಯು ಪ್ರಕರಣಗಳನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚುವಂತಹ ಕಲೆಯನ್ನು ಕರಗತ ಮಾಡಿಕೊಂಡಿದೆ," ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ 5ನೇ ತಂಡದ ಸಿವಿಲ್ ಕಾನ್ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿ, "ಮೈಸೂರಿನಲ್ಲಿ ಘಟನೆ ನಡೆದ 85 ಗಂಟೆಗಳಲ್ಲಿ ಅಪರಾಧಿಗಳನ್ನು ಬಂಧಿಸುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆಂದರು."
"ಭಾರತೀಯ ಸೇನಾಪಡೆಯು ಜಗತ್ತಿನಲ್ಲಿ 3ನೇ ಅತ್ಯಂತ ದೊಡ್ಡ ಪಡೆಯಾಗಿದ್ದು, ಹಾಗೆಯೇ ಭಾರತೀಯ ಪೊಲೀಸ್ ಇಲಾಖೆ ಅದರಲ್ಲೂ ಕರ್ನಾಟಕ ಪೊಲೀಸ್ ಇಲಾಖೆಗೆ ಒಳ್ಳೆಯ ಕೀರ್ತಿ ಇದೆ. ರಾಜ್ಯದಲ್ಲಿ ಆಂತರಿಕ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದೆ," ಎಂದು ಹೇಳಿದರು.
"ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಾದ ನಾವುಗಳು ನೆಮ್ಮದಿಯಿಂದ ಜೀವನ ನಡೆಸಬಹುದು, ನಮ್ಮ ಮಾನ, ಪ್ರಾಣ, ಆಸ್ತಿಯನ್ನು ಪ್ರತಿದಿನವೂ ಕಾಪಾಡುತ್ತಾರೆ ಹಾಗೂ ಪೊಲೀಸರ ರಕ್ಷಣೆ ನಮ್ಮ ಮೇಲಿದೆ ಎಂಬ ಭರವಸೆಯನ್ನು ಸಾರ್ವಜನಿಕರಲ್ಲಿ ನಮ್ಮ ದಿನ ನಿತ್ಯದ ಕಾರ್ಯ ಚಟುವಟಿಕೆಯಿಂದ ಹುಟ್ಟಿಸಬೇಕೆಂದರು."
"ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಈ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟರೆ ಭಾರತೀಯರು ದೇಶವನ್ನು ಉಳಿಸಿಕೊಳ್ಳುವುದಿಲ್ಲ ಹಾಗೂ ಆಳುವ ಶಕ್ತಿಯು ಇಲ್ಲವೆಂದು ಹೇಳಿದ್ದರು ಆದರೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ದೇಶಕ್ಕೆ ಪ್ರಬಲವಾದ ಆಳುವ ಶಕ್ತಿ ಇದೆ ಎಂಬುವುದನ್ನು ನಮ್ಮ ಸೇನೆ ಹಾಗೂ ಪೊಲೀಸರು ತೋರಿಸಿದ್ದು, ಇಡಿ ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಿದೆ, ಇದಕ್ಕೆ ದೇಶದ ಗಡಿ ಕಾಯುತ್ತಿರುವ ಸೈನಿಕರು ಹಾಗೂ ಆಂತರಿಕ ಭದ್ರತೆ ಕಾಪಾಡುತ್ತಿರುವ ಪೊಲೀಸ್ ಇಲಾಖೆ ಕಾರಣವೆಂದರು."
"ಭಾರತೀಯ ಸೈನ್ಯದಲ್ಲಿ ಹೇಳುವ ಹಾಗೇ ತರಬೇತಿಯಲ್ಲಿ ಎಷ್ಟು ಬೆವರು ಸುರಿಸುತ್ತಾರೋ ಯುದ್ದ ಭೂಮಿಯಲ್ಲಿ ಅಷ್ಟು ಕಡಿಮೆ ರಕ್ತ ಸುರಿಸುತ್ತಾರೆ ಎಂಬಂತೆ ಪೊಲೀಸ್ ಇಲಾಖೆಗೆ ಸರ್ಕಾರವು ಉತ್ತಮ ತರಬೇತಿಯನ್ನು ನೀಡಿದ್ದು, ತರಬೇತಿಯಿಂದಾಗಿ ತಮ್ಮ ಕರ್ತವ್ಯದಲ್ಲಿ ಎಂತಹ ಅಪರಾಧಗಳು ನಡೆದರು ಅವುಗಳನ್ನು ಮೆಟ್ಟಿ ನಿಲ್ಲುವಂತಹ ಹೊಣೆಗಾರಿಕೆ ತಮ್ಮ ಮೇಲಿದ್ದು, ಈ ನಿಟ್ಟಿನಲ್ಲಿ ಉತ್ತಮ ಕಾರ್ಯನಿರ್ವಹಿಸುವಂತೆ," ತರಬೇತಿ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
"ಮೂರು ವರ್ಷಗಳಲ್ಲಿ ಪೊಲೀಸ್ ಇಲಾಖೆಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ನೀಡಿದ್ದು, ಪೊಲೀಸ್ ಇಲಾಖೆಯ ಕುಟುಂಬ ನೆಮ್ಮದಿಯಿಂದ ಇರುವ ನಿಟ್ಟಿನಲ್ಲಿ ಮೂಲ ಸೌಕರ್ಯಗಳಾದ ವಸತಿ, ಶುದ್ಧ ಕುಡಿಯುವ ನೀರು, ವಿದ್ಯುತ್, ಮಕ್ಕಳ ಉತ್ತಮ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನದ ವ್ಯವಸ್ಥೆ, ಆರೋಗ್ಯ ಸುಧಾರಣೆಗಾಗಿ ಆರೋಗ್ಯ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈಗಾಗಲೇ ಶೇ.49ರಷ್ಟು ಪೊಲೀಸ್ ಕಾನ್ಸ್ಟೆಬಲ್ಗಳಿಗೆ ಡಬಲ್ ಬೆಡ್ ರೂಂ ಹೊಂದಿರುವ ಮನೆಗಳನ್ನು ನೀಡಿದ್ದು, ಇನ್ನೂ ಹೆಚ್ಚಿನ ಮನೆಗಳನ್ನು ನಿರ್ಮಿಸಲಾಗುತ್ತಿದೆ," ಎಂದು ತಿಳಿಸಿದರು.
"ಸಮಾಜದಲ್ಲಿ ಅಪರಾಧಿಗಳು ಹಾಗೂ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುತ್ತಿರುವವರಿಗೆ ಸಿಂಹಸ್ವಪ್ನರಾಗಿ ಹಾಗೂ ಉತ್ತಮ ನಾಗರೀಕರಿಗೆ ರಕ್ಷಕರಾಗಿ, ಸ್ನೇಹಿತನಾಗಿ ಕಾಣುವ ಮೂಲಕ ಸದ್ಗುಣಗಳನ್ನು ಪಾಲನೆ ಮಾಡಿಕೊಂಡು ಕರ್ತವ್ಯದಲ್ಲಿ ಯಶಸ್ವಿಯಾಗಬೇಕೆಂದು," ಕಿವಿಮಾತು ಹೇಳಿದರು.
ಕಡೂರು ಪೊಲೀಸ್ ತರಬೇತಿ ಶಾಲೆಯ ಪ್ರಿನ್ಸಿಪಾಲ್ ಶ್ರೀನಿವಾಸ್ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ತರಬೇತಿಯಲ್ಲಿ ಒಳಾಂಗಣ ಮತ್ತು ಹೊರಾಂಗಣ, ರೈಫಲ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.