ಚೈತ್ರೋತ್ಸವ ಅಲ್ಲ, ಚಿಕ್ಕಮಗಳೂರು ಹಬ್ಬ; ಲೋಗೋದಲ್ಲಿ ಮಲೆನಾಡಿನ ಸೊಬಗು
ಚಿಕ್ಕಮಗಳೂರು, ಫೆಬ್ರವರಿ 03: ಇದೇ ಫೆಬ್ರವರಿ 28, 29, ಮಾರ್ಚ್ 01 ರಂದು ಮೂರು ದಿನಗಳ ಕಾಲ ನಡೆಯುವ ಚಿಕ್ಕಮಗಳೂರು ಜಿಲ್ಲಾ ಉತ್ಸವ 'ಚಿಕ್ಕಮಗಳೂರು ಹಬ್ಬ'ಕಾರ್ಯಕ್ರಮದ ಲೋಗೋವನ್ನು ಇಂದು ಉದ್ಘಾಟನೆ ಮಾಡಲಾಯಿತು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಮತ್ತು ಸಕ್ಕರೆ ಸಚಿವ ಸಿ.ಟಿ. ರವಿ ಲೋಗೋ ಹಾಗೂ ಫೇಸ್ಬುಕ್ ಪೇಜ್ ಉದ್ಘಾಟನೆ ಮಾಡಿದರು. 20 ವರ್ಷದ ಹಿಂದೆ ಚೈತ್ರೋತ್ಸವ ಎಂಬ ಹೆಸರಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣ ಕೆಮ್ಮಣ್ಣುಗುಂಡಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಉತ್ಸವವನ್ನು ಅಚರಣೆ ಮಾಡಲಾಗಿತ್ತು. ಅದಾದ ಬಳಿಕ ಈವರೆಗೂ ಬೇರೆ ಬೇರೆ ಕಾರಣಗಳಿಗೆ ಜಿಲ್ಲಾ ಉತ್ಸವಕ್ಕೆ ಬ್ರೇಕ್ ಬಿದ್ದಿತ್ತು. ಈ ಬಾರಿ ಮತ್ತೆ ಜಿಲ್ಲಾ ಉತ್ಸವ ನಡೆಯುತ್ತಿರುವುದು ಮಲೆನಾಡಿನ ಜನರಲ್ಲಿ ಸಂತಸ ತಂದಿದೆ.
ತರೀಕೆರೆಯಲ್ಲಿ ತಡರಾತ್ರಿವರೆಗೂ ನಡೆದ ರೋಮಾಂಚನಕಾರಿ ಜೋಡೆತ್ತಿನ ಸ್ಪರ್ಧೆ
ಈ ಬಾರಿ ಚೈತ್ರೋತ್ಸವದ ಬದಲಾಗಿ ಚಿಕ್ಕಮಗಳೂರು ಹಬ್ಬ ಎಂಬ ಹೆಸರಿನಲ್ಲಿ ಜಿಲ್ಲಾ ಉತ್ಸವ ಆಚರಿಸಲಾಗುತ್ತಿದೆ. ಲೋಗೋವನ್ನು ಚಿಕ್ಕಮಗಳೂರು ಪರಿಸರ, ಸಂಸ್ಕೃತಿ, ಕಲೆ, ಸಾಹಿತ್ಯ, ಮಲೆನಾಡಿನ ಜಾನಪದವನ್ನು ಪ್ರತಿಬಿಂಬಿಸುವಂತೆ ರಚಿಸಲಾಗಿದೆ.
ಚಿಕ್ಕಮಗಳೂರಿನ ಶಾಂತಿನಿಕೇತನ ಕಲಾ ಕಾಲೇಜಿನ ಮುಖ್ಯಸ್ಥ ವಿಶ್ವಕರ್ಮ ಆಚಾರ್ಯ ಲೋಗೋ ರಚಿಸಿದ್ದಾರೆ. ಮೂರು ದಿನಗಳ ಚಿಕ್ಕಮಗಳೂರು ಹಬ್ಬದಲ್ಲಿ ಮಲೆನಾಡಿನ ಸೊಬಗು ತೆರೆದುಕೊಳ್ಳಲಿದೆ. ಲೋಗೋ ಬಿಡುಗಡೆ ವೇಳೆ ಬಿ.ಎಲ್. ಶಂಕರ್, ಮೋಹನ್ ಆಳ್ವಾ, ಜಿಲ್ಲಾಧಿಕಾರಿ ಬಗಾದಿ ಗೌತಮ್, ಎಸ್ಪಿ ಹರೀಶ್ ಪಾಂಡೆ ಇದ್ದರು.