ಸಕಾಲ ಅನುಷ್ಠಾನದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಮೊದಲ ಸ್ಥಾನ
ಚಿಕ್ಕಮಗಳೂರು, ಫೆಬ್ರವರಿ 25: ಸಕಾಲ ಯೋಜನೆಯಡಿ 2021ರ ಜನವರಿ ತಿಂಗಳಲ್ಲಿ ಅರ್ಜಿ ಸ್ವೀಕರಿಸಿ ವಿಲೇವಾರಿ ಮಾಡಿದ ಜಿಲ್ಲೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ವಿಕಾಸ ಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ ಮತ್ತು ಉತ್ತಮ ಕಾರ್ಯನಿರ್ವಹಿಸಿದ ಜಿಲ್ಲೆಗಳಿಗೆ ಪುರಸ್ಕಾರವನ್ನು ಪ್ರಕಟಿಸಿ ಮಾತನಾಡಿದರು.
ಚಿಕ್ಕಮಗಳೂರು; ಗಿರಿಸ್ವಚ್ಚತಾ ಅಭಿಯಾನ, ರಾಶಿ-ರಾಶಿ ಕಸ ಸಂಗ್ರಹ
ಜನವರಿ ತಿಂಗಳಲ್ಲಿ ಚಿಕ್ಕಮಗಳೂರು ಜಿಲ್ಲೆ 67,093 ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸಿ 57,861 ಅರ್ಜಿಗಳನ್ನು ವಿಲೇವಾರಿ ಮಾಡಿ ರಾಜ್ಯದಲ್ಲಿ ಮೊದಲ ಸ್ಥಾನಗಳಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆ 2ನೇ ಸ್ಥಾನದಲ್ಲಿದ್ದು, ಶಿವಮೊಗ್ಗ ಜಿಲ್ಲೆ 3ನೇ ಸ್ಥಾನ ಪಡೆದುಕೊಂಡಿದ್ದರೆ, ಬೆಂಗಳೂರು ನಗರ ಕೊನೆಯ ಸ್ಥಾನದಲ್ಲಿದೆ ಎಂದರು.
ತಾಲ್ಲೂಕುವಾರು ಬೆಂಗಳೂರು ದಕ್ಷಿಣ ತಾಲ್ಲೂಕು ಮೊದಲ ಸ್ಥಾನ ಪಡೆದಿದ್ದು, ನವೆಂಬರ್ನಲ್ಲಿ ಮೊದಲ ಸ್ಥಾನಗಳಿಸಿದ ಮಂಡ್ಯ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿಗಳಿಗೆ ಬೃಹತ್ ಗಡಿಯಾರ ನೀಡುವ ಮೂಲಕ ಗೌರವಿಸಲಾಯಿತು. ಜನವರಿಯಲ್ಲಿ ಸಕಾಲ ಮೂಲಕ ಅರ್ಜಿ ವಿಲೇವಾರಿ ಪ್ರಮಾಣ ಶೇ.93.25 ರಷ್ಟಿದ್ದು, 27,45,997 ಅರ್ಜಿ ಸ್ವೀಕಾರ ಮಾಡಲಾಗಿದ್ದು, ಈ ಪೈಕಿ 22,88,794 ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ಮುಂದೆ ಎಲ್ಲಾ ಜಿಲ್ಲೆಗಳಲ್ಲಿ ಸಕಾಲ ಸಪ್ತಾಹ ಕಡ್ಡಾಯಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಎಲ್ಲಾ ಅಪರ ಜಿಲ್ಲಾಧಿಕಾರಿಗಳು ಪ್ರತಿ ಸೋಮವಾರ ಸಕಾಲ ವಿವರ ಪ್ರಗತಿ ಪರಿಶೀಲಿಸಬೇಕು. ಪರಿಶೀಲನಾ ಸಮಿತಿ ಪ್ರತಿ ಶನಿವಾರ ತಮ್ಮ ವ್ಯಾಪ್ತಿಯಲ್ಲಿನ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿ ಸಕಾಲದಲ್ಲಿ ಸ್ವೀಕೃತವಾಗಿರುವ ಅರ್ಜಿ ನಿಗದಿತ ಅವಧಿಯಲ್ಲಿ ವಿಲೇವಾರಿಯಾಗಿದೆಯೇ ಎಂಬುದರ ಕುರಿತು ಪರಿಶೀಲಿಸಬೇಕು ಎಂದು ಸೂಚಿಸಿದರು.
ಅರ್ಜಿ ವಿಲೇವಾರಿ ಮಾಡದಿದ್ದರೆ ಕಾರಣ ಹುಡುಕಬೇಕು ಎಂದ ಸಚಿವ ಎಸ್.ಸಚಿವ ಸುರೇಶ್ ಕುಮಾರ್, ಎಲ್ಲಾ ಕಚೇರಿಗಳ ಮುಂದೆ ಸಕಾಲ ಮಾಹಿತಿ ಫಲಕವನ್ನು ಕಡ್ಡಾಯಗೊಳಿಸಬೇಕು. ಸಕಾಲ ಒಂದೇ ನಾಗರೀಕರಿಗೆ ಸರ್ಕಾರದ ಸೇವೆಯ ತೃಪ್ತಿಪಡಿಸುವ ಪ್ರಮುಖ ಯೋಜನೆಯಾಗಿದ್ದು, ಈ ಬಗ್ಗೆ ಹೆಚ್ಚು ಆದ್ಯತೆ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ರವಿಕುಮಾರ್, ಈ ಆಡಳಿತದ ಹೆಚ್ಚುವರಿ ಕಾರ್ಯದರ್ಶಿ ರಾಜೀವ್ ಚಾವ್ಲಾ, ಸಕಾಲ ಮಿಷನ್ನ ನಿರ್ದೇಶಕಿ ಬಿ.ಆರ್.ಮಮತಾ ಹಾಗೂ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಹಾಜರಿದ್ದರು.