ಡಿ. 30ಕ್ಕೆ ನಗರಸಭೆ ಚುನಾವಣೆ ಫಲಿತಾಂಶ; ಅಭ್ಯರ್ಥಿಗಳಲ್ಲಿ ಢವಢವ
ಚಿಕ್ಕಮಗಳೂರು, ಡಿಸೆಂಬರ್ 29; ನಗರಸಭಾ ಚುನಾವಣೆಯ ಮತಎಣಿಕೆ ಗುರುವಾರ ಬೆಳಗ್ಗೆ ಚಿಕ್ಕಮಗಳೂರು ನಗರದ ಐಡಿಎಸ್ಜಿ ಕಾಲೇಜಿನಲ್ಲಿ ನಡೆಯುತ್ತಿದ್ದು, ಕಣದಲ್ಲಿದ್ದ 146 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾಗುವ ಮತಎಣಿಕೆ ಮಧ್ಯಾಹ್ನ 12ರಿಂದ 1 ಗಂಟೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಮತ ಎಣಿಕೆಗೆ ಸಕಲ ಸಿದ್ಧತೆ ನಡೆದಿದೆ. ಪೊಲೀಸರ ಬಿಗಿಕಾವಲಿನ ನಡುವೆ ಒಟ್ಟು 10 ಟೇಬಲ್ನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಪ್ರತಿಟೇಬಲ್ಗೆ ಒಬ್ಬ ಮೇಲ್ವಿಚಾರಕ, ಸಹಾಯಕ ಮೇಲ್ವಿಚಾರಕ ಸೇರಿದಂತೆ 20 ಮಂದಿ ಅಧಿಕಾರಿಗಳು ಎಣಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಒಟ್ಟು 140 ಸಿಬ್ಬಂದಿಗಳ ಎಣಿಕೆ ಕಾರ್ಯಕ್ಕೆ ಸಹಕರಿಸುತ್ತಿದ್ದಾರೆ.
ವಿಧಾನ ಪರಿಷತ್ ಚುನಾವಣೆ 2021; ಗೆದ್ದವರು, ಸೋತವರ ಪಟ್ಟಿ
ಐಡಿಎಸ್ಜಿ ಕಾಲೇಜಿನ 5 ಕೊಠಡಿಗಳನ್ನು ಮತಎಣಿಕೆಗೆ ಬಳಸಿಕೊಳ್ಳುತ್ತಿದ್ದು, 7 ವಾರ್ಡ್ಗೆ ಒಂದು ಕೊಠಡಿಯನ್ನು ಮೀಸಲಿಡಲಾಗಿದೆ. 1 ಕೊಠಡಿಗೆ 2 ಟೇಬಲ್ಗಳನ್ನು ಹಾಕಲಾಗಿದೆ. ಪ್ರತಿವಾರ್ಡಿನ ಮತಎಣಿಕೆ ಮೊದಲು ಅಥವಾ 2ನೇ ಸುತ್ತಿನಲ್ಲಿ ಮುಕ್ತಾಯಗೊಳ್ಳಲಿದೆ.
ಚಿಕ್ಕಮಗಳೂರಲ್ಲಿ 6 ಮತದ ಸೋಲು; ಕಾಂಗ್ರೆಸ್ ಕೋರ್ಟ್ಗೆ!
ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 33 ಅಭ್ಯರ್ಥಿಗಳು, ಬಿಜೆಪಿ 33, ಜೆಡಿಎಸ್ 12, ಬಿಎಸ್ಪಿ 5, ಸಿಪಿಐ 1, ಆಮ್ಆದ್ಮಿ 6, ಎಸ್ಡಿಪಿಐ 4, ಪಕ್ಷೇತರರು 52 ಅಭ್ಯರ್ಥಿಗಳು ಸೇರಿದಂತೆ ಒಟ್ಟು 146 ಅಭ್ಯರ್ಥಿಗಳು ಕಣದಲ್ಲಿದ್ದರು. ಅವರುಗಳ ರಾಜಕೀಯ ಭವಿಷ್ಯವನ್ನು ಮತದಾನದ ಮೂಲಕ ಇವಿಎಂನಲ್ಲಿ ಮತದಾರರು ಭದ್ರಪಡಿಸಿದ್ದಾರೆ.
ಒಕ್ಕಲಿಗರ ಸಂಘದ ಚುನಾವಣೆ; ಬೆಂಗಳೂರು ವಿಭಾಗದ ಫಲಿತಾಂಶ
ನಗರಸಭೆಯ 35 ವಾರ್ಡ್ಗಳಲ್ಲಿ 1.1ಲಕ್ಷ ಮತದಾರರಿದ್ದು, 60,855 ಮತಗಳು ಚಲಾವಣೆಯಾಗಿದ್ದವು. 49,150 ಪುರುಷರಲ್ಲಿ 30580 ಜನರು ಮತಚಲಾಯಿಸಿದ್ದರೆ, 51015 ಮಹಿಳಾ ಮತದಾರರಲ್ಲಿ 30275 ಮತದಾರರು ಮತಹಾಕಿದ್ದಾರೆ.
ಮೂರು ಮತ್ತು 7ನೇ ವಾರ್ಡಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು, ನೇರಸ್ಪರ್ಧೆ ಏರ್ಪಟ್ಟಿತ್ತು. 17ನೇ ವಾರ್ಡಿನಲ್ಲಿ 10 ಜನರು, 13ನೇ ವಾರ್ಡಿನಲ್ಲಿ 8 ಅಭ್ಯರ್ಥಿಗಳು 23ನೇ ವಾರ್ಡಿನಲ್ಲಿ 7 ಮಂದಿ ಕಣದಲ್ಲಿದ್ದರು. ಈಗಾಗಲೇ ಗೆಲುವಿಗಾಗಿ ಬೆವರುಹರಿಸಿದ್ದ ಪಕ್ಷದ ಮುಖಂಡರು ಮತ್ತು ಅಭ್ಯರ್ಥಿಗಳು ರಾಜಕೀಯ ಭವಿಷ್ಯ ಇವಿಎಂ ತೆರೆದುಕೊಂಡು ಬಳಿಕವೇ ಗೊತ್ತಾಗಲಿದೆ.
ಕೆಲವು ವಾರ್ಡ್ಗಳಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಪಕ್ಷೇತರವಾಗಿ ನಿಂತರವೇ ಸೆಡ್ಡುಹೊಡೆದಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಆ ಪಕ್ಷದ ರಾಜ್ಯಮಟ್ಟದ ನಾಯಕರು ಆಗಮಿಸಿ ಪ್ರಚಾರ ನಡೆಸಿ ತಮ್ಮ ಸಮುದಾಯದ ಮುಖಂಡರನ್ನು ಭೇಟಿಮಾಡಿ ಸಭೆ ನಡೆಸುವ ಮೂಲಕ ಮತಚಲಾಯಿಸುವಂತೆ ಮನವಿ ಮಾಡಿಕೊಂಡಿದ್ದರು.
ನಗರದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದ್ದು, ಸಂಚಾರಕ್ಕೆ ಸರಿಯಾದ ರಸ್ತೆಗಳಿಲ್ಲ, ಕುಡಿಯುವ ನೀರು ಸಮರ್ಪಕವಾಗಿಲ್ಲ, ಮೂಲಸೌಲಭ್ಯಗಳಿಲ್ಲ ಹಾಗಾಗಿ ಆಡಳಿತ ಪಕ್ಷ ಬಿಜೆಪಿಗೆ ವಿರುದ್ಧ ಮತದಾರರು ಮತಚಲಾಯಿಸುತ್ತಿದ್ದು, ಈ ಬಾರಿ ಗೆಲುವು ನಮ್ಮದು ಎಂದು ಕಾಂಗ್ರೆಸ್ ಮುಖಂಡರು ಹೇಳಿಕೊಂಡರೆ, ಈ ಬಾರಿ ಮತ್ತೊಮ್ಮೆ ಅಧಿಕಾರ ಹಿಡಿಯಲೇಬೇಕೆಂದು ಹಟಕ್ಕೆ ಬಿದ್ದಿದ್ದ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ 33 ವಾರ್ಡ್ಗಳಲ್ಲಿ ಮಿಂಚಿನಂತೆ ಸಂಚರಿಸುವ ಮೂಲಕ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದರು.
ನಗರಸಭೆಯಲ್ಲಿ 22 ರಿಂದ 25 ಸ್ಥಾನಗಳು ಬರುತ್ತವೆ ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದರೆ, ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರು ಕೆಪಿಸಿಸಿ ವೀಕ್ಷಕರಾಗಿ ಕಿಮ್ಮನೆ ರತ್ನಾಕರ್ ಅವರನ್ನು ನೇಮಿಸಿದ್ದು, ಚುನಾವಣೆಯ ಗೆಲುವಿನ ತಂತ್ರಗಳನ್ನು ಮಾತ್ರ ವೀಕ್ಷಕರು ಬಿಟ್ಟುಕೊಟ್ಟಿರಲಿಲ್ಲ, ಈ ಬಾರಿ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.
ಗುರುವಾರ ನಡೆಯುವ ಮತಎಣಿಕೆಯಲ್ಲಿ ಆಡಳಿತ ಪಕ್ಷ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್ಗೆ ಹೆಚ್ಚುಸ್ಥಾನಗಳ ನೀಡಲಿದ್ದಾರೆಯೇ? ಎಂಬುದು ಗೊತ್ತಾಗಲಿದ್ದು, ನಗರಸಭೆ ಆಡಳಿತ ಚುಕ್ಕಾಣಿ ಯಾವ ಪಕ್ಷದ ಪಾಲಾಗುತ್ತದೆ? ಎಂಬುದು ತಿಳಿಯಲಿದೆ.
Recommended Video