ಚಿಕ್ಕಮಗಳೂರಿನಲ್ಲಿ ಅಕ್ರಮ ಮನೆಗಳನ್ನು ತೆರವುಗೊಳಿಸಿದ ಎಸಿ
ಚಿಕ್ಕಮಗಳೂರು, ಮಾರ್ಚ್ 19: ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಸುಮಾರು ಅರವತ್ತೈದುಕ್ಕೂ ಮನೆಗಳನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅಸಿಸ್ಟೆಂಟ್ ಕಮಿಷನರ್ ನಾಗರಾಜ್, ಸಿಬ್ಬಂದಿಗಳೊಂದಿಗೆ ತೆರವುಗೊಳಿಸಿದರು.
ಚಿಕ್ಕಮಗಳೂರು ತಾಲೂಕಿನ ಬೀಕನಹಳ್ಳಿ ಸರ್ವೇ ನಂಬರ್ 03 ರಲ್ಲಿ, ಬೀಕನಹಳ್ಳಿ ಕೆರೆಯ ಸಮೀಪ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಸುಮಾರು ಅರವತ್ತೈದು ಮನೆಗಳನ್ನು ತಾತ್ಕಾಲಿಕವಾಗಿ ನಿರ್ಮಿಸಿಕೊಂಡು ಸರ್ಕಾರಿ ಜಾಗವನ್ನು ಕಬಳಿಸಲು ಮುಂದಾಗಿದ್ದರು.
ಇದನ್ನು ಗಮನಿಸಿದ AC ನಾಗರಾಜ್, ಅಕ್ರಮವಾಗಿ ನಿರ್ಮಿಸಿದ್ದ ಮನೆಗಳನ್ನು ತಾವೇ ನೇತೃತ್ವವಹಿಸಿ, ಸರ್ಕಾರಿ ಅಧಿಕಾರಿಗಳ ಕೈಯಲ್ಲಿಯೇ ತೆರವುಗೊಳಿಸಿದರು.
ಈ ವೇಳೆ ಗ್ರಾಮ ಪಂಚಾಯತ್ ಪಿಡಿಓ ವಿರುದ್ಧ ""ಇಷ್ಟು ದಿನ ಏನ್ ಮಾಡ್ತಾ ಇದ್ದೀರಿ ಅಂತಾ ಗರಂ ಆದರು. ನೀವು ಸರಿಯಾಗಿ ಕೆಲಸ ಮಾಡಿದ್ದರೆ ಈ ರೀತಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲು ಸಾಧ್ಯವಿಲ್ಲ'' ಎಂದರು.
ಯಾರಾದರು ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದರೆ ನಿಮ್ಮ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು. ಇನ್ನು ಈ ಸರ್ಕಾರಿ ಜಾಗದಲ್ಲಿ ಹಿಂದೆ ನಗರಸಭೆಯಲ್ಲಿ ಕೆಲಸ ಮಾಡಿ ರಿಟೈರ್ಡ್ ಆಗಿರುವ ವ್ಯಕ್ತಿ ಇಲ್ಲಿ ಅಕ್ರಮವಾಗಿ ಸರ್ಕಾರಿ ಜಾಗ ಕಬಳಿಸಿರುವುದು ಬೆಳಕಿಗೆ ಬಂದಿದೆ. ಇನ್ನು ಗ್ರಾಮದ ಕೆಲವು ಪ್ರಭಾವಿಗಳೂ ಸಹ ಈ ಅಕ್ರಮದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.