ಮಗು ಮೂತ್ರ ಮಾಡಿಕೊಂಡಿದ್ದಕ್ಕೆ ಚಾಕುವಿನಿಂದ ಹೊಡೆಯೋದೇ?
ಚಿಕ್ಕಮಗಳೂರು, ನವೆಂಬರ್.25: ಮಗು ಅಂಗನವಾಡಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಶಿಕ್ಷಕಿಯೇ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಇಂಥದೊಂದು ಘಟನೆ ಚಿಕ್ಕಮಗಳೂರು ಜಿಲ್ಲೆ ಕೆರೆಮಕ್ಕಿ ಗ್ರಾಮದಲ್ಲಿ ನಡೆದಿದೆ.
ಆಟವಾಡುತ್ತಾ ಕುಳಿತಿದ್ದ ಮಗು ಚಡ್ಡಿಯಲ್ಲೇ ಮೂತ್ರ ಮಾಡಿಕೊಂಡಿದ್ದಕ್ಕೆ ಶಿಕ್ಷಕಿ ಕೋಪಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಸಹಾಯಕಿ ಹಾಗೂ ಶಿಕ್ಷಕಿ ಸೇರಿಕೊಂಡು ಪುಟ್ಟ ಮಗುವಿನ ತಲೆಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂರು ತಿಂಗಳ ಕಂದಮ್ಮನನ್ನು ನಾಲೆಗೆ ಬಿಸಾಡಿದ ಹೆತ್ತವ್ವ
ಬೆಳಗ್ಗೆ ತಾಯಿ ತನ್ನ ಮಗುವನ್ನು ಎಂದಿನಂತೆ ಅಂಗನವಾಡಿಗೆ ಬಿಟ್ಟು ಬಂದಿದ್ದಾರೆ. ನಂತರ ಅಮಿತ್ ಎಂಬ ಮಗು ಅಂಗನವಾಡಿಯಲ್ಲಿ ಆಟವಾಡುತ್ತಾ ಚಡ್ಡಿಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾನೆ. ಇದರಿಂದ ಕೆರಳಿದ ಟೀಚರ್ ಮಾಲತಿ ಮಗುವಿನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಮಗುವಿನ ತಲೆಗೆ ಗಾಯವಾಗಿದ್ದು, ಸಾಕಷ್ಟು ರಕ್ತಸ್ರಾವ ಆಗಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.
ಇನ್ನು, ತಲೆಗೆ ಗಂಭೀರ ಗಾಯವಾಗಿದ್ದು, ಮಗುವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಮಗುವಿನ ತಲೆಗೆ ಮೂರು ಹೊಲಿಗೆ ಹಾಕಿದ್ದಾರೆ. ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಬಂದು ವಿಚಾರಣೆ ನಡೆಸಿದ್ದಾರೆ.
ಮಗುವಿನ ಮೇಲೆ ಹಲ್ಲೆ ನಡೆಸಿದ್ದಕ್ಕೆ ಗ್ರಾಮಸ್ಥರು ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಶಿಕ್ಷೆ ಕೊಡಿಸುವಂತೆ ಆಗ್ರಹಿಸಿದ್ದಾರೆ.