ಮಗ ಸತ್ತ ತಿಂಗಳೊಳಗೇ ಅಪ್ಪನ ಸಾವು; ಇಂದು ಸಿದ್ಧಾರ್ಥ ತಂದೆ ಗಂಗಯ್ಯ ಹೆಗ್ಡೆ ಅಂತ್ಯಕ್ರಿಯೆ
Recommended Video
ಚಿಕ್ಕಮಗಳೂರು, ಆಗಸ್ಟ್ 26: ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ದಾರ್ಥ ಅವರ ಸಾವಿಗೆ ಇಡೀ ರಾಜ್ಯವೇ ಮರುಗಿತು, ಕಂಬನಿ ಮಿಡಿಯಿತು. ಆದರೆ ಜನ್ಮ ಕೊಟ್ಟು, ಸಾಕಿ ಸಲುಹಿದ ಅಪ್ಪನಿಗೆ ಮಾತ್ರ ತನ್ನ ಮಗನ ಸಾವಿನ ವಿಷಯ ತಿಳಿಯಲೇ ಇಲ್ಲ. ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದ ಗಂಗಯ್ಯ ಹೆಗ್ಡೆ ಅವರಿಗೆ ತಮ್ಮ ಮಗ ಸತ್ತದ್ದು, ತಮ್ಮನ್ನು ಬಿಟ್ಟು ಹೋಗಿದ್ದು ಇದಾವುದೂ ತಿಳಿಯಲಿಲ್ಲ. ಇದೀಗ ಅವರೂ ಮಗನನ್ನೇ ಹಿಂಬಾಲಿಸಿದ್ದಾರೆ.
ವಿ. ಜಿ. ಸಿದ್ದಾರ್ಥ ತಂದೆ ಗಂಗಯ್ಯ ಹೆಗ್ಡೆ ವಿಧಿವಶ
ಸಿದ್ಧಾರ್ಥ ಅವರ ಸಾವು ಸಂಭವಿಸಿ ಇನ್ನೂ ತಿಂಗಳಾಗಿಲ್ಲ, ಅವರ ತಂದೆ ಗಂಗಯ್ಯ ಹೆಗ್ಡೆ ಅವರೂ ವಿಧಿವಶರಾಗಿದ್ದಾರೆ. ತಿಂಗಳು ಕಳೆಯುವುದರೊಳಗೇ ಎರಡೆರಡು ಸಾವು ಕುಟುಂಬಕ್ಕೆ ಆಘಾತ ನೀಡಿದೆ.
ಮಗನ ಕೊನೆ ವಿಧಿ ನಡೆದ ಜಾಗದಲ್ಲೇ ಅಪ್ಪನ ಅಂತ್ಯಸಂಸ್ಕಾರ
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಂಗಯ್ಯ ಹೆಗ್ಡೆ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ವಿಧಿವಶರಾಗಿದ್ದಾರೆ. ಅವರ ಅಂತ್ಯಕ್ರಿಯೆಯು ಇಂದು ಚಿಕ್ಕಮಗಳೂರಿನಲ್ಲಿ ನಡೆಯಲಿದೆ.
ಗಂಗಯ್ಯ ಹೆಗ್ಡೆ ಅವರ ಪಾರ್ಥಿವ ಶರೀರ ದರ್ಶನಕ್ಕೆ 12 ಗಂಟೆವರೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಅವರ ಸ್ವಗ್ರಾಮ ಚೇತನಹಳ್ಳಿ ಎಸ್ಟೇಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಸಿದ್ದಾರ್ಥ ಅವರ ಅಂತ್ಯಕ್ರಿಯೆ ನಡೆಸಿದ್ದ ಸ್ಥಳದ ಪಕ್ಕದಲ್ಲಿಯೇ ಗಂಗಯ್ಯ ಹೆಗ್ಡೆ ಅವರ ಅಂತ್ಯಕ್ರಿಯೆಯೂ ನಡೆಯಲಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಸಲಾಗುವುದೆಂದು ತಿಳಿದುಬಂದಿದೆ.
ಕುಟುಂಬಕ್ಕೆ ಎರಡೆರಡು ಸಾವಿನ ಆಘಾತ
ಮಗ ಮರಣ ಹೊಂದಿದ ತಿಂಗಳ ಒಳಗೇ ತಂದೆ ಗಂಗಯ್ಯ ಹೆಗ್ಡೆ ಸಾವನ್ನಪ್ಪಿದ್ದಾರೆ. ಇದು ಅವರ ಕುಟುಂಬಕ್ಕೆ ಮತ್ತೊಂದು ಆಘಾತ ನೀಡಿದಂತಾಗಿದೆ. ಜುಲೈ 31ಕ್ಕೆ ಸಿದ್ಧಾರ್ಥ ಅವರ ಅಂತ್ಯಕ್ರಿಯೆ ನಡೆದಿತ್ತು. ಇದೀಗ ತಿಂಗಳು ಕಳೆಯುವುದರೊಳಗೆ ಅದೇ ಜಾಗದಲ್ಲಿ, ಮತ್ತೊಂದು ಅಂತ್ಯಕ್ರಿಯೆಯನ್ನು ನಡೆಸಬೇಕಾಗಿದೆ.
ಮೈಸೂರಿನ ಆಸ್ಪತ್ರೆಯಲ್ಲಿ ಸಿದ್ಧಾರ್ಥ್ ತಂದೆ: ಮಗನ ಮುಖವನ್ನು ಕೊನೇ ಬಾರಿಯೂ ನೋಡಲಾಗದೆ ಅಪ್ಪನಿಗೆ?
ವೈರಲ್ ಆಗಿತ್ತು ಅಪ್ಪನ ಪಕ್ಕ ಚಿಂತಾಕ್ರಾಂತರಾಗಿ ಕುಳಿತಿದ್ದ ಸಿದ್ಧಾರ್ಥ ಚಿತ್ರ
ತನ್ನ ತಂದೆಯ ಆರೋಗ್ಯ ವಿಚಾರಿಸಲು ಸಿದ್ಧಾರ್ಥ ಅವರು ಮೈಸೂರಿನ ಗೋಪಾಲಗೌಡ ಆಸ್ಪತ್ರೆಗೆ ಆಗಾಗ ಭೇಟಿ ನೀಡುತ್ತಿದ್ದರು. ತನ್ನ ಅಪ್ಪನ ಪಕ್ಕ ಚಿಂತಾಕ್ರಾಂತರಾಗಿ ಕುಳಿತಿದ್ದ ಸಿದ್ಧಾರ್ಥ ಅವರ ಚಿತ್ರವೊಂದು ಸಿದ್ದಾರ್ಥ ಅವರ ಸಾವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಫೋಟೋದಲ್ಲಿ ಅವರ ತಂದೆ ಬೆಡ್ ಮೇಲೆ ಮಲಗಿದ್ದು, ಪಕ್ಕದಲ್ಲಿ ಸಿದ್ಧಾರ್ಥ್ ಕುಳಿತು ಚಿಂತಿಸುತ್ತಿರುವಂತೆ ಕಾಣುತ್ತಿದ್ದು, ಈ ಫೋಟೋ ಮನಕಲಕುವಂತಿತ್ತು.
ಅಪ್ಪ, ಮಗ ಇಬ್ಬರಿಗೂ ಸಾವು ತಿಳಿಯಲಿಲ್ಲ
ಗಂಗಯ್ಯ ಹೆಗ್ಡೆ ಅವರಿಗೆ ತಮ್ಮ ಮಗ ಸತ್ತ ವಿಚಾರ ಗೊತ್ತಾಗಲಿಲ್ಲ, ತಮ್ಮ ಮಗನ ಮುಖವನ್ನು ಕೊನೆ ಬಾರಿಯೂ ಅವರಿಗೆ ನೋಡಲು ಸಾಧ್ಯವಾಗಲಿಲ್ಲ. ಸಿದ್ಧಾರ್ಥ ಅವರಿಗೂ ತಂದೆ ಮುಖ ನೋಡಲಾಗುವುದಿಲ್ಲ. ಮಗನ ಸಾವು ಅಪ್ಪನಿಗೆ, ಅಪ್ಪನ ಸಾವು ಮಗನಿಗೆ ತಿಳಿಯಲೇ ಇಲ್ಲ. ಆದರೆ ಅಪ್ಪ ಮಗ ಇಬ್ಬರ ಅಂತ್ಯಕ್ರಿಯೆಯೂ ಒಂದೇ ಜಾಗದಲ್ಲಿ ನಡೆಯುತ್ತಿದೆ. ಇದು ಕುಟುಂಬದವರಿಗೆ ನುಂಗಲಾರದಂಥ ನೋವಾಗಿದೆ. ಸಿದ್ಧಾರ್ಥ ಅವರು ಸತ್ತಾಗ ಇಡೀ ಮೂಡಿಗೆರೆಯಲ್ಲಿ ನೀರವ ಮೌನ ತುಂಬಿಕೊಂಡಿತ್ತು. ಈಗ ಮತ್ತೊಂದು ಸಾವು ಸಂಭವಿಸಿದ್ದು, ಮತ್ತೆ ಇಂದು ಮೂಡಿಗೆರೆಯಲ್ಲಿ ಅದೇ ಸೂತಕದ ಛಾಯೆ ತುಂಬಿಕೊಂಡಿದೆ.