ಮನೆಯ ಸೌಂದರ್ಯಕ್ಕೆ ಅಡ್ಡಿ: ಬಸ್ ನಿಲ್ದಾಣ ಧ್ವಂಸಗೊಳಿಸಿದ ಗ್ರಾ.ಪಂ ಅಧ್ಯಕ್ಷೆ
ಚಿಕ್ಕಮಗಳೂರು, ಜೂನ್ 22: ತನ್ನ ಮನೆಯ ಸೌಂದರ್ಯಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ನಿಲ್ದಾಣವನ್ನೇ ಧ್ವಂಸಗೊಳಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯು ಮಹಾ ದರ್ಪ ತೋರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಎಸ್.ಬಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಣಮ್ಮ ಮೇಲೆ ಅಧಿಕಾರ ದುರುಪಯೋಗ ಮಾಡಿಕೊಂಡ ಆರೋಪ ಕೇಳಿಬಂದಿದೆ.
ಚಿಕ್ಕಮಗಳೂರು: ಪ್ರವಾಸೋದ್ಯಮ ತಾಣವಾಗಿ ಅಯ್ಯನಕೆರೆ ಅಭಿವೃದ್ಧಿ
ಜೆಸಿಬಿ ಯಂತ್ರದ ಮೂಲಕ ಸರ್ಕಾರಿ ಬಸ್ ನಿಲ್ದಾಣ ಧ್ವಂಸಗೊಳಿಸಿದ್ದು, ಗ್ರಾ.ಪಂ ಅಧ್ಯಕ್ಷೆಯ ಮಕ್ಕಳಾದ ಪ್ರಭಾಕರ್, ಜಗದೀಶ್ ರವರು ತೆರವುಗೊಳಿಸಿದ್ದಾರೆ. ಬಸ್ ನಿಲ್ದಾಣವಿಲ್ಲದೆ ಸಿದ್ದಾಪುರ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಗ್ರಾ.ಪಂ ಅಧ್ಯಕ್ಷೆ ದ್ರಾಕ್ಷಯಣಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೊಸದಾಗಿ ಮನೆಯ ಎದುರು ಬಸ್ ನಿಲ್ದಾಣವಿದ್ದಿದ್ದರಿಂದ ಸೌಂದರ್ಯಕ್ಕೆ ಅಡ್ಡಿ ಎಂಬ ಕಾರಣವೊಡ್ಡಿ ತೆರವುಗೊಳಿಸಿದ್ದಕ್ಕೆ ಚಿಕ್ಕ ಮಕ್ಕಳಿಂದಲೂ ಆಕ್ರೋಶ ವ್ಯಕ್ತವಾಗಿದೆ. ಗ್ರಾ.ಪಂ ಅಧ್ಯಕ್ಷೆ ವಿರುದ್ಧ ಗ್ರಾಮಸ್ಥರು ದೂರು ನೀಡಿದ್ದಾರೆ.