ತಂದೆ, ಮಕ್ಕಳನ್ನು ಗೆಲ್ಲಿಸುವುದೇ ಕುಮಾರಸ್ವಾಮಿ ಚಿಂತೆಯಾಗಿದೆ : ಬಿಎಸ್ವೈ
Recommended Video
ಚಿಕ್ಕಮಗಳೂರು, ಏಪ್ರಿಲ್ 11 : 'ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ತಂದೆ-ಮಕ್ಕಳನ್ನು ಗೆಲ್ಲಿಸುವುದೇ ಚಿಂತೆಯಾಗಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಅವರಿಗೆ ಚಿಂತೆ ಇಲ್ಲ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಚಿಕ್ಕಮಗಳೂರಿನಲ್ಲಿ ಗುರುವಾರ ಯಡಿಯೂರಪ್ಪ ಪತ್ರಿಕಾಗೋಷ್ಠಿಯನ್ನು ನಡೆಸಿದರು, 'ಕರ್ನಾಟಕದ ಮುಖ್ಯಮಂತ್ರಿಗಳು ದರ್ಪದಿಂದ ಮಾತನಾಡುತ್ತಿದ್ದಾರೆ. ನಾನು ಹೇಳಿದಂತೆ ಮಾಧ್ಯಮಗಳು ಕೇಳಬೇಕು ಎಂಬಂತೆ ವರ್ತಿಸುತ್ತಿದ್ದಾರೆ' ಎಂದು ದೂರಿದರು.
ಮಂಡ್ಯದ ಸಾಕ್ಷಾತ್ ಸಮೀಕ್ಷೆ ಸಾಮಾಜಿಕ ಜಾಲತಾಣದಲ್ಲಿ ವೈರಲ್!
'ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ. ಕರ್ನಾಟಕದಲ್ಲಿ 22ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಗಳಿಸಲಿದ್ದೇವೆ. ಈಗಾಗಲೇ ಬಂದಿರುವ ಸಮೀಕ್ಷೆಗಳು ಇದನ್ನೇ ಹೇಳುತ್ತಿವೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತೇಜಸ್ವಿ ಸೂರ್ಯ ಸೇರಿ 22 ಸೀಟು ಗೆಲ್ಲುತ್ತೇವೆ : ಯಡಿಯೂರಪ್ಪ
'ಈಗಾಗಲೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. 2014ರ ಚುನಾವಣೆಗೆ ಹೋಲಿಕೆ ಮಾಡಿದರೆ ನರೇಂದ್ರ ಮೋದಿ ಅವರ ಅಲೆ ಹೆಚ್ಚಾಗಿದೆ. ಕಳೆದ ಬಾರಿಗಿಂತ ಶೇ 15 ರಿಂದ 20ರಷ್ಟು ಹೆಚ್ಚುಮತಗಳನ್ನು ಪಕ್ಷ ಪಡೆಯಲಿದೆ' ಎಂದು ಯಡಿಯೂರಪ್ಪ ಹೇಳಿದರು.....
ತಾಕತ್ತಿದ್ದರೆ ಮೇ 23ರ ಒಳಗೆ ಕೇಸ್ ಓಪನ್ ಮಾಡಲಿ: ಎಚ್ಡಿಕೆಗೆ ಯಡಿಯೂರಪ್ಪ ಸವಾಲು
ಅಭಿವೃದ್ಧಿಯನ್ನು ಮರೆತಿದ್ದಾರೆ
'ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ, 9 ತಿಂಗಳು ಕಳೆದರೂ 4500 ಕೋಟಿಗಿಂತ ಹೆಚ್ಚಿನ ಸಾಲ ಮನ್ನಾ ಆಗಿಲ್ಲ. ಇದನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ಸಾಲಮನ್ನಾ ಮಾಡಿಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆಯೇ? ಎಂದರೆ ಅದನ್ನು ಮಾಡಿಲ್ಲ' ಎಂದು ಯಡಿಯೂರಪ್ಪ ಆರೋಪ ಮಾಡಿದರು.
ಮುಖ್ಯಮಂತ್ರಿಗಳು ಕ್ಷಮೆ ಕೇಳಬೇಕು
'ಮಂಡ್ಯ ಜಿಲ್ಲೆಯ ಕೆಆರ್ಎಸ್ನಲ್ಲಿ ಬುಧವಾರ ಕುಮಾರಸ್ವಾಮಿ ಅವರು ಮಾಧ್ಯಮ ಸ್ನೇಹಿತರಿಗೆ ಬೆದರಿಕೆ ಹಾಕಿದ್ದಾರೆ. ಸರಿಯಾದ ಪ್ರಚಾರ ಕೊಡದಿದ್ದರೆ ನಿಮ್ಮ ಮೇಲೆ ದಾಳಿ ಆದರೆ ನಾನು ಜವಾಬ್ದಾರಿಯಲ್ಲ ಎಂದು ಹೇಳಿಕೆ ಕೊಟ್ಟು ಕಾರ್ಯಕರ್ತರಿಗೆ ಪ್ರಚೋದನೆ ಕೊಟ್ಟಿದ್ದಾರೆ. ಅಧಿಕಾರವಿದೆ ಎಂಬ ದರ್ಪದಿಂದ ಹೀಗೆ ಮಾಡುತ್ತಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತೇನೆ' ಎಂದು ಯಡಿಯೂರಪ್ಪ ಹೇಳಿದರು
ಇಂಥ ಮುಖ್ಯಮಂತ್ರಿಯನ್ನು ನೋಡಿಲ್ಲ
'ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಚಿವರು, ಶಾಸಕರು, ಪಕ್ಷ ಯಾವುದನ್ನೂ ನೋಡದೇ ದಾಳಿ ಮಾಡುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಎಷ್ಟು ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಬರುತ್ತಾರೆ ಎಂಬ ಮಾಹಿತಿಯನ್ನು ನೀಡುವ ಮೂಲಕ ತಮ್ಮ ಶಿಷ್ಯಂದಿರು ಲೂಟಿ ಹೊಡೆದಿರುವ ಕೋಟಿ ಕೋಟಿ ಹಣವನ್ನು ಸ್ಥಳಾಂತರ ಮಾಡಲು ಸಹಾಯ ಮಾಡಿದ್ದಾರೆ. ಆದಾಯ ತೆರಿಗೆ ಕಚೇರಿ ಮುಂದೆ ಹೋಗಿ ಪ್ರತಿಭಟನೆ ಮಾಡುತ್ತಾರೆ. ಇಂತಹ ಮುಖ್ಯಮಂತ್ರಿಯನ್ನು ನಾನು ಎಂದೂ ನೋಡಿಲ್ಲ' ಎಂದು ಯಡಿಯೂರಪ್ಪ ಹೇಳಿದರು.
ನಂಬಿಕೆ ದ್ರೋಹದ ಕೆಲಸ
'ಪುಲ್ವಾಮಾ ದಾಳಿಯ ಬಗ್ಗೆ ನನಗೆ 2 ವರ್ಷದ ಹಿಂದೆಯೇ ತಿಳಿದಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದಾರೆ. ದಾಳಿ ಬಗ್ಗೆ ತಿಳಿದಿದ್ದರೆ ರಾಷ್ಟ್ರಪತಿಗಳಿಗೋ, ಸೇನೆಯ ಉನ್ನತ ಅಧಿಕಾರಿಗಳಿಗೂ ತಿಳಿಸಬೇಕಾಗಿತ್ತು. ಸುಮ್ಮನೇ ಕುಳಿತಿದ್ದು ನಂಬಿಕೆ ದ್ರೋಹ ಮತ್ತು ದೇಶ ದ್ರೋಹದ ಕೆಲಸ' ಎಂದು ಯಡಿಯೂರಪ್ಪ ತಿಳಿಸಿದರು.
ತಂದೆ-ಮಕ್ಕಳ ಚಿಂತೆಯಾಗಿದೆ
'ಕುಮಾರಸ್ವಾಮಿ ಅವರಿಗೆ ತಂದೆ, ಮಕ್ಕಳನ್ನು ಚುನಾವಣೆಯಲ್ಲಿ ಗೆಲ್ಲಿಸುವುದೇ ಚಿಂತೆಯಾಗಿದೆ. ಮಂಡ್ಯದಲ್ಲಿ ಸುಮಲತಾ ಅವರು ಗೆಲ್ಲುವುದು ನಿಶ್ಚಿತವಾದ ಮೇಲೆ ಮಾಧ್ಯಮಗ ವಿರುದ್ಧ ಮಾತನಾಡುತ್ತಿದ್ದಾರೆ. ಪ್ರಚಾರಕ್ಕೆ ಬರುವ ನಟರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ' ಎಂದು ಯಡಿಯೂರಪ್ಪ ಆರೋಪಿಸಿದರು.
ಸರ್ಕಾರ ಪತನವಾಗಲಿದೆ
'ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಮೈತ್ರಿ ಸರ್ಕಾರ ಮುಂದುವರೆಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ. 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿಗಳ ವಿರುದ್ಧ ಇದ್ದಾರೆ' ಎಂದು ಯಡಿಯೂರಪ್ಪ ಹೇಳಿದರು.