ಚಿಕ್ಕಮಗಳೂರು: ಕಂಡ ಕನಸಿನಂತೆ ಪೊಲೀಸ್ ಇಲಾಖೆ ಸೇರಿದ ಹೆಮ್ಮೆಯ ಅಣ್ಣ-ತಂಗಿ
ಚಿಕ್ಕಮಗಳೂರು, ಸೆಪ್ಟೆಂಬರ್ 23: ಒಂದೇ ಕುಟುಂಬದ ಹಲವರು ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಕಾಣಬಹುದು. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ಕುಟುಂಬದ ಸಹೋದರ ಮತ್ತು ಸಹೋದರಿ ಇಬ್ಬರೂ ಪೊಲೀಸ್ ಇಲಾಖೆಯನ್ನೇ ಆಯ್ಕೆ ಮಾಡಿಕೊಂಡು ಸೇವೆ ಸಲ್ಲಿಸಲು ಮುಂದಾಗಿದ್ದಾರೆ.
ಅವರುಗಳು ಒಂದೇ ಶ್ರೇಣಿಯ ಅಧಿಕಾರಿಗಳಾಗಿದ್ದು, ಅಣ್ಣನ ಹೆಸರು ಮಹಮ್ಮದ್ ಪೈಗಂಬರ್ ಲಾಲೂಸಾಬ್ ಜಂಗ್ಲಿ ಹಾಗೂ ತಂಗಿಯ ಹೆಸರು ರುಬೀನಾ ಬಾನು. ಅಣ್ಣ ಚಿಕ್ಕಮಗಳೂರು ನಗರದ ಸಶಸ್ತ್ರ ಮೀಸಲು ಪಡೆಯ ಸಬ್ ಇನ್ಸ್ಪೆಕ್ಟರ್ ಆಗಿದ್ದರೇ, ತಂಗಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಸಿವಿಲ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೈಸೂರಿನ ಕುಗ್ರಾಮದ ಸಹೋದರರು ಪಿಎಸ್ ಐ ಆದ ಕಥೆ
ಇವರಿಬ್ಬರು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹಿಪ್ಪರಗಿ ಗ್ರಾಮದವರು. ಜೀವನ ನಿರ್ವಹಣೆಗೆ ಬಸ್ ನಿರ್ವಾಹಕ ಹುದ್ದೆ ಸಿಕ್ಕಿದರೆ ಸಾಕೇಂಬುದು ಹೆತ್ತವರ ಆಸೆ. ಆದರೆ ರಕ್ಷಣಾ ಇಲಾಖೆ ಸೇರಬೇಕೆಂಬ ಮಹಾದಾಸೆ ಲಾಲೂಸಾಬ್ ಅವರದ್ದಾಗಿತ್ತು.
ರುಬಿನಾ ಬಾನು ಅವರು ಅಣ್ಣನ ಹಾದಿಯನ್ನೇ ತುಳಿದರು
ಈ ಸಹೋದರ, ಸಹೋದರಿಯವರು 6 ವರ್ಷಗಳ ಕಾಲ ಧಾರವಾಡದಲ್ಲಿ ಶಿಕ್ಷಣ ಪೂರ್ಣಗೊಳಿಸಿದರು. ಯಾವುದೇ ಕೋಚಿಂಗ್ ತರಗತಿಗೆ ಹೋಗದೆ, ಸ್ವಂತ ಪರಿಶ್ರಮದಿಂದ ಮೊದಲ ಪ್ರಯತ್ನದಲ್ಲೇ ಗೃಹ ಇಲಾಖೆಯ ಸಬ್ಇನ್ಸ್ಪೆಕ್ಟರ್ ಪರೀಕ್ಷೆ ಬರೆದು ಲಾಲೂ ಸಾಬ್ ತೇರ್ಗಡೆಯಾದರು. ಪದವಿ ಪೂರ್ಣಗೊಳಿಸಿದ ಒಂದೇ ವರ್ಷಕ್ಕೆ ರುಬಿನಾ ಬಾನು ಅವರು ಅಣ್ಣನ ಹಾದಿಯನ್ನೇ ತುಳಿದರು. ಸಹ ಠಾಣಾಧಿಕಾರಿ ಹುದ್ದೆಗೆ ನೇಮಕವಾದರು. ಸಾಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಮಹತ್ತರವಾದ ಜವಾಬ್ದಾರಿ ಇದೆ. ಜನರ ನೆಮ್ಮದಿ ಬದುಕಿಗೆ ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ದುಷ್ಟ ಶಕ್ತಿಗಳಿಂದ ಸಮಾಜದ ರಕ್ಷಣೆ ಮಾಡಬಹುದೆನ್ನುವುದನ್ನು ಅರಿತ್ತಿದ್ದರಿಂದ ರಕ್ಷಣಾ ಇಲಾಖೆಯನ್ನೇ ಇವರು ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣವಾಗಿದೆ.
ಸಹೋದರಿ ರುಬೀನಾರನ್ನು ಕಾಫಿನಾಡು ಕೈಬೀಸಿ ಕರೆಯಿತು
ಮಂಗಳೂರು ವಲಯದಲ್ಲಿ ಕರ್ತವ್ಯಕ್ಕೆ ಲಾಲೂಸಾಬ್ ನಿಯೋಜನೆಗೊಂಡರೆ, ಅವರ ಸಹೋದರಿ ಬೆಂಗಳೂರು ವಲಯಕ್ಕೆ ನೇಮಕಗೊಂಡರು. ಎರಡನೇ ಪೋಸ್ಟಿಂಗ್ ನಲ್ಲಿ ಅಣ್ಣನಿಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆಯಾಯಿತು. ಈಗ ರಿಸರ್ವ್ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅದೃಷ್ಟವೆಂಬಂತೆ ಅವರ ಸಹೋದರಿಯನ್ನು ಕಾಫಿನಾಡು ಚಿಕ್ಕಮಗಳೂರು ಕೈಬೀಸಿ ಕರೆಯಿತೆಂದೇ ಹೇಳಬಹುದು. ಅವರಿಗೂ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ವರ್ಗಾವಣೆಯಾಯಿತು. ಅವರು ಈಗ ನಗರ ಠಾಣೆಯಲ್ಲಿ ಸಹ ಠಾಣಾಧಿಕಾರಿಯಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪಿಯುಸಿ ಓದುತ್ತಿದ್ದಾಗಲೇ ಪೊಲೀಸ್ ಇಲಾಖೆ ಸೇರಬೇಕೆಂಬ ಕನಸು
ಉತ್ತರ ಕರ್ನಾಟಕ ಭಾಗದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಜನರು ಅತ್ಯಂತ ಗೌರವದ ಭಾವನೆ ಹೊಂದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರನ್ನು ಅಲ್ಲಿನ ಜನರು ಗೌರವದಿಂದ ಕಾಣುತ್ತಾರೆ. ಪೊಲೀಸ್ ಮುಖ್ಯಾಧಿಕಾರಿಗೆ ನೀಡುವ ಗೌರವವನ್ನು ಪ್ರತಿ ಪೊಲೀಸ್ ಪೇದೆಗೂ ನೀಡುತ್ತಾರೆ. ಹಾಗಾಗಿಯೇ ಮುಹಮ್ಮದ್ ಫೈಗಂಬರ್ ಲಾಲೂಸಾಬ್ ಜಂಗ್ಲಿಯವರು ಪಿಯುಸಿ ಓದುತ್ತಿದ್ದಾಗಲೇ ಪೊಲೀಸ್ ಇಲಾಖೆಗೆ ಸೇರಬೇಕೆಂಬ ಕನಸನ್ನು ಕಂಡಿದ್ದರು. ಹಾಗಾಗಿ ಬೇರೆ ಇಲಾಖೆಯತ್ತ ತಮ್ಮ ಚಿತ್ತವನ್ನು ಹರಿಸದೆ ಮನದ ಬಯಕೆಯನ್ನು ಈಡೇರಿಸಿಕೊಂಡರು.
Recommended Video
ಇವರ ಕುಟುಂಬಕ್ಕೆ ಮಲೆನಾಡೆಂದರೆ ಅಚ್ಚುಮೆಚ್ಚು
ಇವರ ಕುಟುಂಬದಲ್ಲಿ ಸಹೋದರಿಯೊಬ್ಬರನ್ನು ಬೇಗನೆ ಮದುವೆ ಮಾಡಿಕೊಟ್ಟಿದ್ದರಿಂದ ಲಾಲೂಸಾಬ್ ಅವರ ಮನಸ್ಸಿಗೆ ತುಂಬಾ ಬೇಸರವಾಯಿತು. ಎಲ್ಲಾ ಹೆಣ್ಣು ಮಕ್ಕಳಿಗೆ ಸಹೋದರಿಯನ್ನು ಮಾದರಿಯನ್ನಾಗಿಸಬೇಕೆಂದು ಯೋಚಿಸಿದರು. ತನ್ನಂತೆಯೇ ನನ್ನ ತಂಗಿಯೂ ಪೊಲೀಸ್ ಇಲಾಖೆಗೆ ಸೇರಬೇಕೆಂಬ ಆಸೆಯಿಂದ ಮಾರ್ಗದರ್ಶನ ನೀಡಿದರು. ಅದರಲ್ಲೂ ಯಶಕಂಡರು.
ಪೊಲೀಸ್ ಇಲಾಖೆಯನ್ನು ಲಾಲೂಸಾಬ್ 25ನೇ ವಯಸ್ಸಿಗೆ ಸೇರಿಕೊಂಡರು. ಅವರು ಸೇವೆಗೆ ಸೇರಿ 4 ವರ್ಷಗಳಾಗಿವೆ. ಅವರ ಸಹೋದರಿ ರುಬಿನಾಬಾನು ಅವರೂ ಸಹ ಮೂರು ವರ್ಷಗಳ ಅನುಭವ ಹೊಂದಿದ್ದಾರೆ. ಇವರ ಕುಟುಂಬಕ್ಕೆ ಮಲೆನಾಡೆಂದರೆ ಅಚ್ಚುಮೆಚ್ಚು. ಹಾಗಾಗಿಯೇ ಅವರ ಕುಟುಂಬ ಕಾಫಿನಾಡಿನತ್ತ ಮುಖಮಾಡಿ ಚಿಕ್ಕಮಗಳೂರು ನಗರದಲ್ಲಿ ನೆಲೆನಿಂತಿದೆ.