ಚಿಕ್ಕಮಗಳೂರು; ರಜೆ ಮುಗಿಸಿ ಹೊರಟ ಯೋಧ ಶವವಾಗಿ ಪತ್ತೆ
ಚಿಕ್ಕಮಗಳೂರು,ಜೂ13: ರಜೆಗೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹೊರಟಿದ್ದ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಸಿಗದ್ದೆ ಗ್ರಾಮದ ಯೋಧ ಗಣೇಶ್ ಸಾವನ್ನಪ್ಪಿದ್ದಾರೆ. ಜೂನ್ 9ರಂದು ಹೊರಟಿದ್ದ ಗಣೇಶ್ ಮೃತದೇಹ ಬಿಹಾರದ ಕಿಶನ್ಗಂಜ್ನಲ್ಲಿ ಪತ್ತೆಯಾಗಿದೆ.
ಗಣೇಶ್ 15 ದಿನಗಳ ಹಿಂದೆ ರಜೆ ಹಾಕಿ ಊರಿಗೆ ಬಂದಿದ್ದರು. ಜೂನ್ 12ರಂದು ಸೇನಾ ತಂಡ ಸೇರಬೇಕಾದ ಕಾರಣ ಜೂನ್ 9ರಂದು ಹೊರಟಿದ್ದರು. ಆದರೆ ಬಿಹಾರದ ಕಿಶನ್ಗಂಜ್ನಲ್ಲಿ ಅವರ ಮೃತದೇಹ ಸಿಕ್ಕಿದೆ.
ಶನಿವಾರ ಬೆಳಗ್ಗೆ ಪತ್ನಿ ಜೊತೆ ಗಣೇಶ್ ಮಾತನಾಡಿದ್ದರು. ಆಗ ಅವರು ಮುಖ ತೊಳೆಯುತ್ತಿದ್ದೇನೆ ಎಂದು ಹೇಳಿದ್ದರು. ಮಧ್ಯಾಹ್ನದ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಭಾನುವಾರ ರಾತ್ರಿ ಸೇನೆಯ ಅಧಿಕಾರಿಗಳು ಕರೆ ಮಾಡಿ ಗಣೇಶ್ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಗ್ರಾಮದಲ್ಲಿ ನೀರವ ಮೌನ; ಕಿಶನ್ಗಂಜ್ನಲ್ಲಿ ಗಣೇಶ್ ಶವವನ್ನು ಮೊದಲು ನೋಡಿದ್ದು ಆಂಬ್ಯುಲೆನ್ಸ್ ಚಾಲಕ. ಜೇಬಿನಲ್ಲಿದ್ದ ಗುರುತಿನ ಚೀಟಿ ನೋಡಿ ಯೋಧ ಎಂದು ತಿಳಿದು ಸೇನೆಗೆ ಮಾಹಿತಿ ನೀಡಿದ್ದರು. ಗಣೇಶ್ ಹೇಗೆ ಸಾವನ್ನಪ್ಪಿದರು? ಎಂಬುದು ಇನ್ನೂ ತಿಳಿದುಬಂದಿಲ್ಲ.
ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ಗ್ರಾಮದ ನಾಗಯ್ಯ-ಗಂಗಮ್ಮ ದಂಪತಿಯ ಪುತ್ರನಾದ ಗಣೇಶ್ ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತ ಯೋಧ ಗಣೇಶ್ ಪ್ರಸ್ತುತ ಜಮ್ಮುವಿನಲ್ಲಿ ಸಿಗ್ನಲ್ ರೆಜಿಮೆಂಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಮೃತ ಗಣೇಶ್ಗೆ ಐದು ವರ್ಷದ ಓರ್ವ ಹೆಣ್ಣು ಮಗಳಿದ್ದಾಳೆ. ಕಳೆದ ಮೂರು ವರ್ಷಗಳ ಹಿಂದೆ ನಾಗಯ್ಯ-ಗಂಗಮ್ಮ ದಂಪತಿಯ ಇನ್ನೊಬ್ಬ ಮಗ ಹಾಗೂ ಯೋಧರಾಗಿದ್ದ ಗಣೇಶ್ ಸಹ ತೀರಿಕೊಂಡಿದ್ದರು. ಇದೀಗ ಯೋಧ ಗಣೇಶ್ ಕೂಡ ಸಾವನ್ನಪ್ಪಿದ್ದಾರೆ.
ಕುಟುಂಬಕ್ಕೆ ಆಧಾರವಾಗಿದ್ದ ಗಣೇಶ್ ಸಾವು ಕುಟುಂಬವನ್ನೂ ಚಿಂತೆಗೀಡು ಮಾಡಿದೆ. ಯೋಧ ಗಣೇಶ್ ಮನೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಡಿ. ಎನ್. ಜೀವರಾಜ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.