ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ 16 ಸ್ಥಾನಗಳನ್ನು ಗೆಲ್ಲಲಿದೆ: ಸಿ.ಟಿ. ರವಿ
ಚಿಕ್ಕಮಗಳೂರು, ಡಿಸೆಂಬರ್ 8: "ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಒಳಗಿನ ಅಭಿಪ್ರಾಯದ ಪ್ರಕಾರ ಕನಿಷ್ಠ 11 ಹಾಗೂ ಗರಿಷ್ಠ 16 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ. ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಾಣೇಶ್ 500 ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ," ಎಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ನಗರದಲ್ಲಿ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಪಕ್ಷದ ವರದಿ ಪ್ರಕಾರ 11 ರಿಂದ 16 ಸ್ಥಾನಗಳಲ್ಲಿ ಗೆಲುವು ನಿಶ್ಚಿತ ಎಂಬುದು ತಿಳಿದು ಬಂದಿದೆ. ಇದರ ಮೇಲೆ ಚುನಾಯಿತ ಪ್ರತಿನಿಧಿಗಳ ಮನಸ್ಸಿನಲ್ಲಿ ಏನಿದೆ ಗೊತ್ತಿಲ್ಲ. ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗೆದ್ದಿದೆ ಎಂಬುದು ನಮ್ಮ ಗ್ರಾಮ ಸ್ವರಾಜ್ ಸಮಾವೇಶದಿಂದ ವ್ಯಕ್ತವಾಗಿದೆ. ಆದರೂ ಚುನಾವಣೆಗಳಲ್ಲಿ ಇದು ಪರಿಣಾಮ ಬೀರುವುದಿಲ್ಲ ಇದನ್ನು ಮೀರಿದ ಕೆಲವು ಸಂಗತಿಗಳು ಕೂಡ ಕೆಲಸ ಮಾಡುತ್ತವೆ," ಎಂದರು.
ಸಿದ್ದರಾಮಯ್ಯ ಹೆಸರನ್ನು ಪಾಕಿಸ್ತಾನದಲ್ಲಿ ಹೇಳಬೇಕು
"ಜೆಡಿಎಸ್ ವರಿಷ್ಠರು ತಮ್ಮ ಬೆಂಬಲವನ್ನು ಸ್ಥಳೀಯ ನಾಯಕರ ಅಭಿಪ್ರಾಯಕ್ಕೆ ಬಿಟ್ಟಿದ್ದಾರೆ. ಸ್ಥಳೀಯ ನಾಯಕರು ಪಂಚಾಯತ್ ಸದಸ್ಯರ ತೀರ್ಮಾನಕ್ಕೆ ಬಿಡುತ್ತಿದ್ದು ಅವರೇ ತೀರ್ಮಾನಿಸುತ್ತಾರೆ. ಎಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಿಲ್ಲವೂ ಅಲ್ಲಿ ನಮಗೆ ಬೆಂಬಲ ಕೊಡಿ ಎಂದು ನಮ್ಮ ಹಿರಿಯ ನಾಯಕರಾದ ಯಡಿಯೂರಪ್ಪ ಮನವಿ ಮಾಡಿದ್ದರು. ಸಕಾರಾತ್ಮಕವಾಗಿ ಬೆಂಬಲ ವ್ಯಕ್ತವಾಗುತ್ತಿದೆ ಎಂದ ಅವರು, ನಮ್ಮ ಮೊದಲ ಆದ್ಯತೆ ರಾಜಕೀಯವಾಗಿ ಕಾಂಗ್ರೆಸ್ ಅನ್ನು ಮುಗಿಸಲು ಸಕಾರಾತ್ಮಕವಾಗಿ ಜೆಡಿಎಸ್ ನಮ್ಮನ್ನು ಬೆಂಬಲಿಸುತ್ತಾರೆಂದು," ಸಿ.ಟಿ. ರವಿ ಹೇಳಿದರು.
ಚಿಕ್ಕಮಗಳೂರಿನ ಗ್ರಾಮ ಸ್ವರಾಜ್ ಕಾರ್ಯಕ್ರಮದಲ್ಲಿ ಮೋದಿ ಮಹಾ ಸುಳ್ಳುಗಾರ ಎಂದು ಹೇಳಿಕೆ ನೀಡಿದ ಸಿದ್ದರಾಮಯ್ಯ ಹೇಳಿಕೆಗೆ ಉತ್ತರಿಸಿದ ಶಾಸಕ ಸಿ.ಟಿ. ರವಿ, ಒನ್ ಸನ್, ಒನ್ ಗ್ರೀಡ್, ಒನ್ ವರ್ಲ್ಡ್, ಒನ್ಲೀ ಒನ್ ನರೇಂದ್ರ ಮೋದಿ ಎಂದು ಇಂಗ್ಲೆಡ್ ಅಧ್ಯಕ್ಷ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ರಾಜಕೀಯ ತಂತ್ರಗಾರಿಕೆ ಒಂದೇ ಇರುವುದಿಲ್ಲ
"ಇಸ್ರೇಲ್ ಅಧ್ಯಕ್ಷರು ನನಗಿಂತ ನಮ್ಮ ದೇಶದಲ್ಲಿ ಮೋದಿ ಹೆಚ್ಚು ಪ್ರಸಿದ್ದ ವ್ಯಕ್ತಿ ಅಂತಾ ತಮಾಷೆಯಾಗಿ ಪ್ರಶಂಸಿದ್ದಾರೆ. ದೇಶದಲ್ಲಿ ಎಲ್ಲೇ ಹೋದರೂ ಮೋದಿ ಮೋದಿ ಅಂತಾರೆ. ಕರ್ನಾಟಕದಿಂದ ಆಚೆ ಹೋದರೆ ಸಿದ್ದರಾಮಯ್ಯ ಇರಲಿ, ರಾಹುಲ್ ಗಾಂಧಿ ಹೆಸರನ್ನೇ ಹೇಳುವುದಿಲ್ಲ. ಸಿದ್ದರಾಮಯ್ಯನವರ ಹೆಸರನ್ನು ಪಾಕಿಸ್ತಾನದಲ್ಲಿ ಯಾರಾದರೂ ಹೇಳಬೇಕು. ಬಾವಿ ಒಳಗಿನ ಕಪ್ಪೆ ಬಾವಿಯೇ ಪ್ರಪಂಚ ಎಂದು ಅಂದುಕೊಳ್ಳುತ್ತದೆ. ತಾನು ಹೇಗಿದ್ದೇನೋ ಹಾಗೆ ಸಿದ್ದರಾಮಯ್ಯ ಉಳಿದವರನ್ನು ಸಹ ಭಾವಿಸುತ್ತಾರೆ," ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರಿಗೆ ಜೆಡಿಎಸ್ ಬೆಂಬಲ ಕೇಳಬೇಕಾದ ಪರಿಸ್ಥಿತಿ ಬಂತಲ್ಲಾ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, "ರಾಜಕೀಯ ತಂತ್ರಗಾರಿಕೆ ಒಂದೇ ಇರುವುದಿಲ್ಲ. ಜೆಡಿಎಸ್ ಬೆಂಬಲ ಇಲ್ಲದಿದ್ದರೆ ಡಿ.ಕೆ. ಶಿವಕುಮಾರ್ ಅವರು ತಮ್ಮನನ್ನು ಸಹ ಸಂಸದರನ್ನಾಗಿ ಗೆಲ್ಲಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಜೆಡಿಎಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಳ್ಳದಿದ್ದರೆ ಅವರು ಶಾಸಕರಾಗಿ ಗೆದ್ದು ಬರಲು ತಿಣುಕಾಡಬೇಕಿತ್ತು. ಬಿಜೆಪಿ ಅಲೆಯಲ್ಲಿ ಜೆಡಿಎಸ್ ಬೆಂಬಲ ಇರುವುದಕ್ಕೆ ಅವರು 2018ರ ವಿಧಾನಸಭೆಯಲ್ಲಿ ಶಾಸಕರಾಗಿ ಆಯ್ಕೆಯಾದರು," ಎಂದರು.
ನೂರಾರು ಭಕ್ತರಿಂದ ದತ್ತಮಾಲಾಧಾರಣೆ
ಬಜರಂಗದಳ, ವಿಶ್ವ ಹಿಂದೂ ಪರಿಷತ್ ವತಿಯಿಂದ ಡಿ.17ರಿಂದ 19ರವರೆಗೆ ನಡೆಯಲಿರುವ ದತ್ತ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನೂರಾರು ಭಕ್ತರು ದತ್ತಮಾಲಾಧಾರಣೆ ಮಾಡಿದರು.
ಚಿಕ್ಕಮಗಳೂರು ನಗರದ ವಿಜಯಪುರ ರಸ್ತೆಯ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆಯೇ ನೂರಾರು ದತ್ತಭಕ್ತರು ರಘು ಅವಧಾನಿಗಳ ನೇತೃತ್ವದಲ್ಲಿ ದತ್ತಮೂರ್ತಿಗೆ ಧಾರ್ಮಿಕ ವಿಧಿವಿಧಾನ, ಪೂಜೆ ನೇರವೇರಿಸಿ ದತ್ತಮಾಲಾಧಾರಣೆ ಮಾಡಿದರು.
ಮಾಲಾಧಾರಣೆ ಬಳಿಕ ಮಾತನಾಡಿದ ಭಜರಂಗ ದಳ ದಕ್ಷಿಣ ಪ್ರಾಂತ ಸಂಚಾಲಕ ರಘು ಸಕಲೇಶಪುರ ಮಾತನಾಡಿ, ಶುದ್ಧ ಸ್ಕಂದ ಪಂಚಮಿಯಂದು ದತ್ತಜಯಂತಿಯ ವೇಳೆಯಲ್ಲಿಯೇ ಹಿಂದೂ ಅರ್ಚಕರ ನೇಮಕ ಆಗಬೇಕು ಎಂಬ ಶ್ರೇಷ್ಠವಾದ ಸಂಕಲ್ಪದೊಂದಿಗೆ ಇಡೀ ರಾಜ್ಯಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಜನರು ದತ್ತಮಾಲಾಧಾರಣೆ ಮಾಡಿದ್ದಾರೆ ಎಂದು ತಿಳಿಸಿದರು.
ಡಿ.19ರಂದು ದತ್ತಪಾದುಕೆ ದರ್ಶನ
ಮುಂದಿನ ದಿನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾರ್ಯಕರ್ತರು, ದತ್ತ ಭಕ್ತರು ಭಾಗವಹಿಸಲಿದ್ದು, ಡಿ.17ರಂದು ಅನುಸೂಯ ಜಯಂತಿ, ಡಿ.18ರಂದು ಶೋಭಾಯಾತ್ರೆ ಹಾಗೂ ಡಿ.19ರಂದು ಇಡೀ ರಾಜ್ಯದಿಂದ ಸುಮಾರು 15 ಸಾವಿರ ಭಕ್ತರು ದತ್ತಪೀಠಕ್ಕೆ ಬಂದು ದತ್ತಪಾದುಕೆ ದರ್ಶನ ಮಾಡಲಿದ್ದಾರೆ ಎಂದು ತಿಳಿಸಿದ ಅವರು. ಈ ದತ್ತ ಜಯಂತಿಯ ವೇಳೆಯಲ್ಲಿಯೇ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಭಜರಂಗದಳ ಜಿಲ್ಲಾ ಸಂಚಾಲಕ ಶಶಾಂಕ್ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ 150ಕ್ಕೂ ಹೆಚ್ಚು ಜನರು ಕಾಮಧೇನು ಗಣಪತಿ ದೇವಸ್ಥಾನದಲ್ಲಿ ದತ್ತಮಾಲಾಧಾರಣೆ ಮಾಡಿದ್ದು, ಜಿಲ್ಲೆಯಾದ್ಯಂತ ಸಾವಿರಕ್ಕೂ ಹೆಚ್ಚು ಜನರು ದತ್ತಮಾಲಾಧಾರಣೆ ಮಾಡಿದ್ದಾರೆ ಎಂದು ತಿಳಿಸಿದರು. ಹಿಂದೂಗಳ ಪೀಠ, ಶಕ್ತಿಯ ಪೀಠ ಎಂದು ಹಿರಿಯರ ಹಾದಿಯಲ್ಲಿ ನಾವೆಲ್ಲ ಮಾಲಾಧಾರಣೆ ಮಾಡಿದ್ದು, ಶೀಘ್ರದಲ್ಲಿ ದತ್ತಪೀಠ ಹಿಂದುಗಳ ಪೀಠವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೈಕೋರ್ಟ್ ಮತ್ತೆ ನ್ಯಾಯವನ್ನು ಎತ್ತಿಹಿಡಿದಿದೆ
ಶಾಸಕ ಸಿ.ಟಿ. ರವಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ದತ್ತಜಯಂತಿಗೆ ದಿನಾಂಕ ನಿಗದಿಯಾಗಿದ್ದು, ವೈಯಕ್ತಿಕ ಕಾರಣದಿಂದ ಎರಡು ದಿನ ತಡವಾಗಿ ಮಾಲಾಧಾರಣೆ ಮಾಡುತ್ತೇನೆ. ಈಗಾಗಲೇ ದತ್ತಪೀಠದ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸಕಾರಾತ್ಮಕ ತೀರ್ಪು ನೀಡಿದೆ. ಕ್ಯಾಬಿನೆಟ್ ಉಪ ಸಮಿತಿ ರಚನೆಯಾಗಿದ್ದು, ಇದರಿಂದ ಸಾರ್ವಜನಿಕವಾಗಿ ಚರ್ಚೆ ಮಾಡುವುದು ಸರಿಯಲ್ಲ.
ನ್ಯಾಯ, ಸತ್ಯ ದತ್ತಪೀಠದ ಪರವಾಗಿದೆ. ಹಿಂದೆ ಇದ್ದ ಸರ್ಕಾರ ಹಿಂದೂ ಭಕ್ತರಿಗೆ ಅನ್ಯಾಯ ಮಾಡುವ ಕೆಲಸವನ್ನು ನ್ಯಾಯಾಲಯಕ್ಕೆ ವ್ಯತಿರಿಕ್ತವಾಗಿ ಮಾಡಿತ್ತು. ಆದರೆ ಹೈಕೋರ್ಟ್ ಮತ್ತೆ ನ್ಯಾಯವನ್ನು ಎತ್ತಿಹಿಡಿದಿದೆ. ಆ ನ್ಯಾಯದ ಆಧಾರದಲ್ಲಿ ಸಂಪುಟ ಉಪಸಮಿತಿ ಪರಿಶೀಲನೆ ಮಾಡಿ ಶೀಘ್ರದಲ್ಲಿ ಅರ್ಚಕರ ಅಡೆತಡೆಗೆ ಇರುವ ಎಲ್ಲಾ ಅಡೆತಡೆಗಳು ನಿವಾರಣೆಯಾಗುವ ವಿಶ್ವಾಸ ಇದೆ ಎಂದು ಹೇಳಿದರು.
Recommended Video