ಬಿಜೆಪಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ; ಧ್ರುವನಾರಾಯಣ
ಚಿಕ್ಕಮಗಳೂರು, ಡಿಸೆಂಬರ್ 01; "ಬಿಜೆಪಿ ಸರ್ಕಾರಕ್ಕೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಮಾಡದಿರುವುದೇ ಸ್ಪಷ್ಟ ಉದಾಹರಣೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದರು.
ಬುಧವಾರ ಚಿಕ್ಕಮಗಳೂರು ನಗರದ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು, "ಕಾಂಗ್ರೆಸ್ ಪಕ್ಷ ಈ ವರೆಗೆ ಎಲ್ಲಾ ವಿಷಯದಲ್ಲಿಯೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಂಡು ಬಂದಿದೆ. ಅದೇ ರೀತಿ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಸಹ ಎಲ್ಲಾ 20 ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತರು, ಮಹಿಳೆಯರು, ಯುವಕರನ್ನು ಅಭ್ಯರ್ಥಿಗಳನ್ನಾಗಿ ಮಾಡುವ ಮೂಲಕ ತನ್ನ ಬದ್ದತೆಯನ್ನು ಉಳಿಸಿಕೊಂಡಿದೆ" ಎಂದರು.
ಚಿಕ್ಕಮಗಳೂರು; ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ
"ಬಿಜೆಪಿ ಇದರಿಂದ ಹೊರತಾಗಿದೆ. ಅವರಿಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಲ್ಲ. ತೋರಿಕೆಗೆ ಮಾತ್ರ ಪ್ರದರ್ಶನ ಮಾಡುತ್ತಿದ್ದು ಬಾಯಿ ಮಾತಿಗೆ ಮಾತ್ರ ಸಿಮೀತವಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಧಿಕಾರ ವಿಕೇಂದ್ರೀಕರಣದ ದೃಷ್ಟಿಯಿಂದ ಜಾರಿಗೆ ತರಲಾಗಿದ್ದು ಇದಕ್ಕೆ ಕಾಂಗ್ರೆಸ್ ಕಾರಣ. ಈ ಮೂಲಕ ಮೀಸಲಾತಿಯಿಂದ ಹಲವು ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಅಧಿಕಾರ ಇಂದು ಸಿಗುತ್ತಿದೆ. ಅದು ಕಾಂಗ್ರೆಸ್ ಸರ್ಕಾರದ ಕೊಡುಗೆ" ಎಂದು ತಿಳಿಸಿದರು.
ಪರಿಷತ್ ಫೈಟ್; ಸರ್ಕಾರಿ ಅಧಿಕಾರಿ ಕೈಯಲ್ಲಿ ಕಾಂಗ್ರೆಸ್ ಬಿ-ಫಾರಂ!
"ನರೇಗಾ ಯೋಜನೆಯನ್ನು ಈ ಹಿಂದೆ ಬಿಜೆಪಿ ವಿರೋಧಿಸಿತ್ತು. ಆದರೆ ಈ ಯೋಜನೆಯಿಂದ ಇವತ್ತಿನ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಲಾಗಿದೆ. ಬಿಜೆಪಿ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವಧನ ಹೆಚ್ಚು ಮಾಡಿಲ್ಲ, ಈಗ ಪ್ರಚಾರಕ್ಕಾಗಿ ಗೌರವಧನ ಹೆಚ್ಚು ಮಾಡಲಾಗುವುದು ಎಂಬ ಹೇಳಿಕೆ ನೀಡುತ್ತಿದ್ದಾರೆ" ಎಂದು ಆರೋಪಿಸಿದರು.
ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಜಿಟಿಡಿ ಜೊತೆ ಸಿದ್ದರಾಮಯ್ಯ ಸ್ನೇಹ; ಈಶ್ವರಪ್ಪ
"ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಇಲಾಖೆಗೆ ಈ ವರೆಗೆ ಯಾವುದೇ ಕೊಡುಗೆ ನೀಡಿಲ್ಲ. ಕೇವಲ ಕಾಂಗ್ರೆಸ್ ಪ್ರಮುಖ ನಾಯಕರ ಬಗ್ಗೆ ಹೇಳಿಕೆಗಳನ್ನು ನೀಡಿಕೊಂಡು ಓಡಾಡುತ್ತಿದ್ದಾರೆ. ತಮ್ಮ ಪಕ್ಷದ ಸಿಎಂ ವಿರುದ್ಧವೇ ರಾಜ್ಯ ಪಾಲರಿಗೆ ಪತ್ರ ಬರೆದವರಿಗೆ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ" ಎಂದು ಟೀಕಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ವಿರುದ್ಧವೂ ಹರಿಹಾಯ್ದ ಅವರು, "ನೆಹರು, ಇಂದಿರಾ ಗಾಂಧಿ ಬಗ್ಗೆ ಮಾತನಾಡುವ ಸಿ. ಟಿ. ರವಿ ಅವರ ಕೊಡುಗೆ ದೇಶಕ್ಕೆ ಅಥವಾ ರಾಜ್ಯಕ್ಕೆ ಏನೆಂದು? ಪ್ರಶ್ನಿಸಿದರು. ನಾಲ್ಕು ಬಾರಿ ಶಾಸಕರಾಗಿ, ಮಂತ್ರಿಯಾಗಿರುವ ಅವರ ಕೊಡುಗೆ ಕ್ಷೇತ್ರಕ್ಕೆ ಏನು? ಎಂಬುದನ್ನು ಮನನ ಮಾಡಿಕೊಳ್ಳಲಿ. ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಪ್ರಮುಖ ಹುದ್ದೆಯಲ್ಲಿರುವ ಬಿಜೆಪಿ ನಾಯಕರಿದ್ದು ಜಿಲ್ಲೆಯ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದಾರೆ" ಎಂದರು.
"ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ಕೆ. ಎಸ್ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದರು. ಬಸನಗೌಡ ಪಾಟೀಲ್ ಯತ್ನಾಳ್, ಬೆಲ್ಲದ್, ವಿಶ್ವನಾಥ್ ಅವರು ವಿಜಯೇಂದ್ರ ಬಗ್ಗೆ ಹೇಳಿಕೆಗಳನ್ನು ನೀಡುವವರು. ನಮ್ಮದು ಶಿಸ್ತಿನ ಪಾರ್ಟಿ, ಶ್ರೀರಾಮ ಚಂದ್ರನ ಮೊಮ್ಮಕ್ಕಳು ಎಂದು ಹೇಳಿಕೊಳ್ಳಲು ಎಂದು ನಾಚಿಕೆಯಾಗಬೇಕು. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಬಗ್ಗೆ ಮಾತನಾಡುವ ನೈತಿಕೆತೆ ಬಿಜೆಪಿಗರಿಗಿಲ್ಲ" ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಜನರೇಟರ್ ವಿತರಣೆಯಲ್ಲಿ ಭ್ರಷ್ಟಾಚಾರ; "ಪ್ರಾಣೇಶ್ ವಿಧಾನ ಪರಿಷತ್ ಸದಸ್ಯರಾಗಿದ್ದ ವೇಳೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ನೀಡಿದ ಜನರೇಟರ್ಗಳಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಇದರಲ್ಲಿ ಪ್ರಾಣೇಶ್ ಕಿಕ್ ಬ್ಯಾಕ್ ಪಡೆದಿದ್ದಾರೆ" ಎಂದು ಎಐಸಿಸಿ ಕಾರ್ಯದರ್ಶಿ ಬಿ. ಎಂ. ಸಂದೀಪ್ ಆರೋಪಿಸಿದ್ದಾರೆ.
"ಪ್ರಾಣೇಶ್ ಅವರು ಗ್ರಾಮ ಪಂಚಾಯಿತಿಗಳಿಗೆ ಜನರೇಟರ್ ನೀಡಿರುವ ಬಗ್ಗೆ ದಾಖಲೆಗಳನ್ನು ಬಿಡುಗಡೆಗೊಳಿಸಬೇಕು. ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಬೇಕು. ಜಿಲ್ಲೆಗೆ ಪ್ರಾಣೇಶ್ ಅವರ ಕೊಡುಗೆ ಏನು?. ಅವರ ತಾಲೂಕಿನಲ್ಲಿ ನೆರೆಯಿಂದ ಮನೆ ಕಳೆದುಕೊಂಡವರಿಗೆ ಇನ್ನೂ ಸಹ ಸರ್ಕಾರದಿಂದ ಪರಿಹಾರವನ್ನು ನೀಡಿಲ್ಲ" ಎಂದು ಆರೋಪಿಸಿದರು.
"ಪರಿಷತ್ ಚುನಾವಣೆಯಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕಾಂಗ್ರೆಸ್ ಪಕ್ಷದ ವತಿಯಿಂದ ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇವೆ. ಈ ಕಾರಣಕ್ಕಾಗಿ ಮಹಿಳಾ ಮತದಾರರು ಹೆಚ್ಚಿನ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು" ಎಂದು ಮನವಿ ಮಾಡಿದರು.
Recommended Video
"ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಮಸೂದೆಗಳನ್ನು ರೈತರ ನಿರಂತರ ಹೋರಾಟದ ಕಾರಣದಿಂದ ಹಿಂದಕ್ಕೆ ತೆಗೆದುಕೊಂಡಿದ್ದಾರೆ. ರೈತರ ಹೋರಾಟಕ್ಕೆ ಸರ್ಕಾರ ಮಣಿದಿದೆ. ಸರ್ಕಾರವು ಬೆಳೆಗಳಿಗೆ ಸಾಮಾನ್ಯ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕೆಂದು ಮುಂದಿನ ದಿನದಲ್ಲಿ ಹೋರಾಟ ನಡೆಸಲಾಗುತ್ತದೆ" ಎಂದರು.