ವಿನಯ್ ಗುರೂಜಿನೂ ಬಿಡದ 'ಏಕಾಂತ ಸೇವೆ' ಆರೋಪ: ಹರಿದಾಡುತ್ತಿರುವ ಸುದ್ದಿಯ ಸತ್ಯಾಸತ್ಯತೆ ಏನು?
Recommended Video
ಚಿಕ್ಕಮಗಳೂರು, ಆಗಸ್ಟ್ 14:ಮಳೆ ಮಲೆನಾಡು ಭಾಗದಲ್ಲಿ ಹಿಂದೆಂದೂ ಕಾಣದಷ್ಟು ಭೀಕರವಾಗಿ ಸುರಿದ ಪರಿಣಾಮ ಭೂಮಿ ಮೇಲಿನ ಕೊಳೆ ತೊಳೆದು ಹೋಗಿದೆ. ಕಾಕತಾಳೀಯ ಎಂಬಂತೆ, ಇದೇ ಭಾಗದಲ್ಲಿ ಕಳೆದ ಕೆಲವು ವರ್ಷಗಳ ಅಂತರದಲ್ಲಿ 'ಅವಧೂತ'ರ ಅವತಾರ ಪಡೆದುಕೊಂಡ ವ್ಯಕ್ತಿಯೊಬ್ಬರ ಖಾಸಗಿ ಬದುಕಿನ ಗಂಭೀರ ಸಂಗತಿಯೂಂದು ಹೊರಬಿದ್ದಿದೆ.
ಚಿಕ್ಕಮಗಳೂರು ಜಿಲ್ಲೆ, ಹರಿಹರ ಪುರ ತಾಲೂಕು ಗೌರಿಗದ್ದೆ ಎಂಬ ಹಳ್ಳಿಯಲ್ಲಿ ಸ್ವರ್ಣ ಪೀಠಿಕೇಶ್ವರಿ ದತ್ತಾಶ್ರಮದ ಹೆಸರಿನಲ್ಲಿ ಆಧ್ಯಾತ್ಮಕ ಸಾಧನೆಗೆ ಇಳಿದಿದ್ದ ವಿನಯ್ ಗುರೂಜಿ ಮೇಲೀಗ ಅತ್ಯಾಚಾರದ ಪ್ರಕರಣವೊಂದು ಕೇಳಿಬಂದಿದೆ.
ಸಿದ್ದಾರ್ಥ ಬಗ್ಗೆ ಕೇಳಿದಾಗ 'ನೀರು ಕಾಣಿಸುತ್ತಿದೆ' ಎಂದಿದ್ದ ವಿನಯ್ ಗುರೂಜಿ
ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು, ನಕಲಿ ದೂರಿನ ಆರೋಪ, ಒಂದು ಆಡಿಯೋ ಕ್ಲಿಪ್, ಅದರ ಸುತ್ತ ಹರಡಿರುವ ಅನುಮಾನಗಳು ಹೀಗೆ ಸಾಕಷ್ಟು ಅಂಶಗಳು ಮುನ್ನೆಲೆಗೆ ಬಂದಿವೆ.
ನಾಗಮಂಡಲ ಮಾಡಲು ಸುಬ್ರಮಣ್ಯ ದೇವರು ಬಂದು ಹೇಳಿದ್ನಾ: ವಿನಯ್ ಗುರೂಜಿ ವಿವಾದದ ಹೇಳಿಕೆ
ಸುಮಾರು ಒಂದೂವರೆ ವರ್ಷಗಳಿಂದ ಮಲೆನಾಡ ಭಾಗದಲ್ಲಿ, ಇತ್ತೀಚೆಗೆ ಜಾಲತಾಣಗಳಲ್ಲೂ ವ್ಯಾಪಕವಾಗಿ ಹಂಚಲಾಗಿರುವ ಯುವ ಸನ್ಯಾಸಿ ವಿನಯ್ ಗುರೂಜಿ ಮೇಲೆ ಬಂದಿರುವ ಗುರುತರ ಆರೋಪವೊಂದರ ಸುತ್ತ ಬೆಳೆದು ನಿಂತಿರುವ ಎಲ್ಲಾ ಆಯಾಮಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಏನಿದು ಪ್ರಕರಣ?
ವಿನಯ್ ಗುರೂಜಿ ಕರ್ನಾಟಕದ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಯುವ ಮುಖ. ತಮ್ಮದೇ ಆದ ವಿಶಿಷ್ಟ ಶೈಲಿ ಮೂಲಕ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಇವರು ಕಂಡುಕೊಂಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಆದಿಯಾಗಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಡಿ. ಕೆ. ಶಿವಕುಮಾರ್, ರಮೇಶ್ ಕುಮಾರ್, ಮುಖ್ಯಮಂತ್ರಿ ಯಡಿಯೂರಪ್ಪ ಹೀಗೆ ಪ್ರಮುಖ ರಾಜಕಾರಣಿಗಳ ಹೆಸರೂ ವಿನಯ್ ಗುರೂಜಿ ಹಿಂಬಾಲಕರ ಪಟ್ಟಿಯಲ್ಲಿದೆ.
ಆಗಾಗ್ಗೆ ಸುದ್ದಿಕೇಂದ್ರದಲ್ಲಿ ಸದ್ದು ಮಾಡುವ ವಿನಯ್ ಗುರೂಜಿ ನಡೆಸುತ್ತಿರುವ ದತ್ತಾಶ್ರಮಕ್ಕೆ 2016ರಲ್ಲಿ ಶೃಂಗೇರಿ ಮೂಲದ ಮಹಿಳೆಯೊಬ್ಬರು ತಮ್ಮ ಮಗನ ಸಮಸ್ಯೆಯನ್ನು ಮುಂದಿಟ್ಟುಕೊಂಡು ಭೇಟಿ ನೀಡಿದ್ದರು.
"ನಾನು ಆಶ್ರಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಬೇರೆ ಭಕ್ತಾದಿಗಳು ಇರಲಿಲ್ಲ. ನನ್ನ ಮಗನ ವಿದ್ಯಾಭ್ಯಾಸ ವಿಚಾರವಾಗಿ ಕೇಳಲು ಹೇಗಿದ್ದೆ. ಈ ಸಮಯದಲ್ಲಿ ಒಂದು ಪೆನ್ ನೀಡಿ, ಒಳ್ಳೆಯದಾಗುತ್ತೆ ಎಂದು ಗುರೂಜಿ ಹೇಳಿ ಕಳುಹಿಸಿದರು..." ಎಂದು ಆರಂಭವಾಗುತ್ತದೆ ಮಹಿಳೆ ನೀಡಿದ ದೂರಿನ ಪತ್ರ.
ಮಹಿಳೆ ನೀಡಿರುವ ದೂರು ಪತ್ರದಲ್ಲಿ ಏನಿದೆ?
"ನಾನು ಆಶ್ರಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಬೇರೆ ಭಕ್ತಾಧಿಗಳು ಇರಲಿಲ್ಲ. ನನ್ನ ಮಗನ ವಿದ್ಯಾಭ್ಯಾಸ ವಿಚಾರವಾಗಿ ಕೇಳಲು ಹೇಗಿದ್ದೆ. ಈ ಸಮಯದಲ್ಲಿ ಒಂದು ಪೆನ್ ನೀಡಿ, ಒಳ್ಳೆಯದಾಗುತ್ತೆ ಎಂದು ಗುರುಜಿ ಹೇಳಿ ಕಳುಹಿಸಿದರು..." ಎಂದು ಆರಂಭವಾಗುತ್ತದೆ ಮಹಿಳೆ ನೀಡಿದ ದೂರಿನ ಪತ್ರ.
ಏಕಾಂತ ಕೊಠಡಿಯಲ್ಲಿ:
ಅವತ್ತು ಹಾಗೆ ಪೆನ್ ಪಡೆಯುವ ಮೂಲಕ ಆಶೀರ್ವಾದ ಪಡೆದುಕೊಂಡ ಮಹಿಳೆ ತಮ್ಮ ಮೊಬೈಲ್ ನಂಬರ್ ನೀಡಿದ್ದರಂತೆ. "ಇದಾಗಿ 20 ದಿನಗಳ ನಂತರ ಹಾಸನದಿಂದ ಕರೆ ಮಾಡಿದ ಗುರೂಜಿ, ಆದಷ್ಟು ಬೇಗ ಆಶ್ರಮಕ್ಕೆ ಬಂದ ಹೋಗು. ಇಲ್ಲದಿದ್ದರೆ ತೊಂದರೆಯಾಗುತ್ತೆ ಎಂದರು. ಎರಡ್ಮೂರು ದಿನಗಳ ನಂತರ ಆಶ್ರಮಕ್ಕೆ ಹೋದಾಗ ನನಗೆ ಎಸ್. ಎಂ. ಕೃಷ್ಣ ಅಳಿಯ ಸಿದ್ಧಾರ್ಥ್ ಗೊತ್ತು. ಕುಮಾರಸ್ವಾಮಿ, ದೇವೇಗೌಡ ಮತ್ತಿತರ ರಾಜಕಾರಣಿಗಳು ಪರಿಚಯ ಇದ್ದಾರೆ. ಮಗನಿಗೆ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು,'' ಎಂದು ದೂರಿನಲ್ಲಿ ಮಹಿಳೆ ತಿಳಿಸುತ್ತಾರೆ.
"ನನ್ನ ಜತೆ ಏಕಾಂತ ಕೊಠಡಿಗೆ ಬಾ ಎಂದು ಒಳಗೆ ಕರೆದುಕೊಂಡು ಹೋದರು. ಅಲ್ಲಿ ಕಪ್ಪು ಬಣ್ಣದ ದ್ರವ ಸೇವಿಸಲು ಹೇಳಿದರು. ಅದನ್ನು ಕುಡಿದ ನಂತರ ಜ್ಞಾನ ತಪ್ಪಿದೆ. ಎದ್ದು ನೋಡಿದಾಗ ಮೈಮೇಲೆ ಬಟ್ಟೆಗಳು ಇರಲಿಲ್ಲ. ತಕ್ಷಣ ಬಟ್ಟೆ ಹಾಕಿಕೊಂಡು, ಏನು ಮಾಡಿದಿರಿ ಎಂದು ಕೇಳಿದೆ. ನಿನ್ನನ್ನು ಮೊದಲ ದಿನ ನೋಡಿದಾಗಲೇ ಅನುಭವಿಸಬೇಕು ಅಂದುಕೊಂಡಿದ್ದೆ. ಅದು ಇವತ್ತು ನೆರವೇರಿತು. ನಾನು ನಾರಾಯಣ ಗುರುವಿನ ಕಲಿಯುಗ ಅವತಾರ ಎಂದು ಗಹಗಹಿಸಿ ನಕ್ಕರು,'' ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮುಂದುವರಿದ ಸಂಬಂಧ
ಇದಾದ ನಂತರ ಮಹಿಳೆ ಮತ್ತು ವಿನಯ್ ಗುರೂಜಿ ನಡುವೆ 2018ರವರೆಗೂ ಸಂಬಂಧ ಮುಂದುವರಿಯಿತು. ಮನಸ್ಸಿಲ್ಲದಿದ್ದರೂ ಭಯದಿಂದ ಆಶ್ರಮಕ್ಕೆ ಹೋಗಿ ಬರುತ್ತಿದ್ದೆ. ಆದರೆ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಆಶ್ರಮಕ್ಕೆ ಬರಬೇಡ ಎಂದರು. ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಬೆಂಗಳೂರಿನಲ್ಲಿರುವ ರೌಡಿ ಅನುಯಾಯಿಗಳಿಂದ ಗಂಡ ಮತ್ತು ಮಗನನ್ನು ಕೊಲೆ ಮಾಡಿಸುವುದಾಗಿ ಧಮಕಿ ಹಾಕಿದರು ಎಂದು ದೂರಿನ ಪತ್ರದಲ್ಲಿ ವಿವರಣೆಗಳು ಲಭ್ಯವಾಗುತ್ತವೆ.
ವಿಡಿಯೋ ರೆಕಾರ್ಡಿಂಗ್
ಇದೇ ಸಮಯದಲ್ಲಿ ತನ್ನನ್ನು ಬಲವಂತವಾಗಿ ಕೂರಿಸಿ, ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ದೂರುದಾರ ಮಹಿಳೆಯು ವಿನಯ್ ಗುರೂಜಿ ಮೇಲೆ ಆರೋಪ ಮಾಡಿದ್ದಾರೆ. "ಕೇಳುವ ಪ್ರಶ್ನೆಗಳಿಗೆ ನಾವು ಹೇಳಿದಂತೆ ಉತ್ತರಿಸಬೇಕು. ವಿನಯ್ ಗುರೂಜಿ ಅತ್ಯಾಚಾರ ಮಾಡಿದ್ದಾರಾ ಎಂದರೆ ನೀನು ಇಲ್ಲ ಎಂದು ಹೇಳಬೇಕು ಎಂದರು. ನಂತರ ಕ್ಯಾಮೆರಾ ಮತ್ತು ಮೊಬೈಲ್ ಆನ್ ಮಾಡಿ, ನಿನ್ನ ಮೇಲೆ ಅತ್ಯಾಚಾರ ಮಾಡಿದ್ದೇನಾ ಎಂದು ಕೇಳಿದರು. ಆಗ ನಾನು ಅವರಿಗೆ ಬೇಕಾದ ಉತ್ತರವಾದ 'ಇಲ್ಲ' ಎಂಬುದನ್ನು ನನ್ನಿಂದ ಬಲವಂತವಾಗಿ ಹೇಳಿಸಿದರು," ಎಂದು ದೂರಿನ ಪತ್ರದಲ್ಲಿ ವಿವರಿಸಲಾಗಿದೆ.
ಮಹಿಳೆ ಏನಂತಾರೆ?
'ಒನ್ ಇಂಡಿಯಾ ಕನ್ನಡ' ಸಂತ್ರಸ್ತ ಮಹಿಳೆಯನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, "ಘಟನೆ ನಡೆದಿದೆ, ಆದರೆ ಇದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ನಾನು ಸಿದ್ಧಳಿಲ್ಲ" ಎಂದರು. "ಇದು ನಡೆದಿರುವುದು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ. ನಾನು ಆತ್ಮಹತ್ಯೆಗೂ ಪ್ರಯತ್ನಿಸಿದ್ದೆ. ಇದೀಗ ಅದರಿಂದ ಹೊರಬಂದು ಮಗನ ಭವಿಷ್ಯವನ್ನು ಕಟ್ಟುವ ಕೆಲಸ ಮಾಡುತ್ತಿದ್ದೇನೆ. ಈ ಸಮಯದಲ್ಲಿ ನಾನು ಏನನ್ನೂ ಹೇಳಲು ತಯಾರಿಲ್ಲ. ಒಂದು ಮಾತಂತೂ ಹೇಳುತ್ತೇನೆ, ನೀವೆಲ್ಲಾ ಬರೆದಂತೆ ವಿನಯ್ ಗುರೂಜಿ ಪವಾಡ ಪುರಷರೇನಲ್ಲ. ಅವರಿಗೂ ಇನ್ನೊಂದು ಮುಖ ಇದೆ. ನನ್ನ ಬದುಕಿನಲ್ಲಿ ಆಗಿರುವುದು ಇನ್ನೊಬ್ಬ ಹೆಣ್ಣಿನ ಬದುಕಿನಲ್ಲಿ ನಡೆಯಬಾರದು,'' ಎಂದರು.
ಸ್ಟೋರಿಯಲ್ಲಿ ಟ್ವಿಸ್ಟ್
ವಿಷಯ ಹೀಗೊಂದು ಸ್ವರೂಪ ಪಡೆದುಕೊಂಡಿರುವಾಗಲೇ, ಆಗಸ್ಟ್ 10, 2019ರಲ್ಲಿ ಸಂತ್ರಸ್ತ ಮಹಿಳೆ ಚಿಕ್ಕಮಗಳೂರಿನ ಸಿಇಎಸ್ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ಸಲ್ಲಿಸುತ್ತಾರೆ. "ನನ್ನ ಹೆಸರಿನಲ್ಲಿ ಸಹಿ ಇಲ್ಲದ ಸುಳ್ಳು ದೂರಿನ ಪ್ರತಿಯನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಹಾಗೆಯೇ ನಕಲು ಧ್ವನಿ ಸುರಳಿಯೊಂದನ್ನು ಹಂಚಲಾಗುತ್ತಿದೆ. ಇದರಿಂದ ನನಗೆ ನ್ಯಾಯ ಕೊಡಿಸಿ,'' ಎಂದು ಮಹಿಳೆ ದೂರಿನಲ್ಲಿ ತಿಳಿಸುತ್ತಾರೆ.
ದತ್ತಾಶ್ರಮದ ಕಡೆಯಿಂದ ಬಂದ ಪ್ರತಿಕ್ರಿಯೆ
ಒಟ್ಟಾರೆ ಪ್ರಕರಣದ ಕುರಿತು ವಿನಯ್ ಗುರೂಜಿ ದತ್ತಾಶ್ರಮದ ಕಡೆಯಿಂದ ಹೆಚ್ಚೂ ಕಡಿಮೆ ಇದೇ ಆಯಾಮದ ಉತ್ತರವೊಂದು ದೊರಕುತ್ತದೆ. 'ಒನ್ ಇಂಡಿಯಾ ಕನ್ನಡ'ದ ಜತೆ ಮಾತನಾಡಿದ ದತ್ತಾಶ್ರಮದ ಟ್ರಸ್ಟಿ, ವಕೀಲ ವಿಜಯ್ ರಾಜೇಶ್, "ಇದು ಒಂದೂವರೆ ವರ್ಷಗಳಿಂದ ಹರಿದಾಡುತ್ತಿರುವ ಸುದ್ದಿ. ವಿನಯ್ ಗುರೂಜಿ ಗಾಂಧಿ ಮಾರ್ಗದಲ್ಲಿ ಸಾಮಾಜಿಕ ಬದಲಾವಣೆಗೆ ಮುಂದಾಗಿರುವ ವ್ಯಕ್ತಿ. ಅವರ ವಯಸ್ಸಿನ ಕಾರಣಕ್ಕೋ ಏನೋ ಸ್ಥಳೀಯರಿಗೆ ಇವರ ಪ್ರಗತಿ ಬಗ್ಗೆ ಅಸಮಾಧಾನ ಇದೆ. ನಾಗಮಂಡಲದ ವಿಚಾರದಲ್ಲಿಯೂ ಕಿಡಿಗೇಡಿಗಳು ಆಶ್ರಮಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದ್ದರು. ಇದು ಕೂಡ ಅಂಥದ್ದೇ ಇನ್ನೊಂದು ಪ್ರಕರಣ ಅಷ್ಟೆ. ಮಹಿಳೆಯೇ ನನ್ನ ಹೆಸರಿನಲ್ಲಿ ಸುಳ್ಳು ದೂರಿನ ಪ್ರತಿ ಹರಿದಾಡುತ್ತಿದೆ ಎಂದಿರುವಾಗ ಘಟನೆಯ ಇನ್ನೊಂದು ಆಯಾಮವನ್ನೂ ನೀವು ಗಮನಿಸಬೇಕು,'' ಎಂದರು.
ಆಶ್ರಮದ ಮೂಲಗಳು ಹೇಳುವ ಪ್ರಕಾರ, "ಈ ಮಹಿಳೆಯೂ ಸೇರಿದಂತೆ ಹಲವರು ವಿನಯ್ ಗುರೂಜಿ ಜತೆಯಲ್ಲಿದ್ದರು. ಆದರೆ ಹೊಸಬರ ಪ್ರವೇಶವಾದಾಗ ವ್ಯವಸ್ಥೆಯಲ್ಲಿ ಒಂದಷ್ಟು ಬದಲಾವಣೆಗಳಾದವು. ಗುರೂಜಿ ನಮ್ಮ ಅಂಕೆಯಲ್ಲೇ ಇರಬೇಕು ಎಂದುಕೊಳ್ಳುವವರಿಗೆ ಇದು ನಿರಾಸೆ ಮೂಡಿಸಿತು. ಇದರಿಂದಾಗಿ ವಿನಯ್ ಗುರೂಜಿ ಹೆಸರಿಗೆ ಮಸಿ ಬಳಿಯುವ ವ್ಯವಸ್ಥಿತ ಸಂಚು ನಡೆಯಿತು."
ಸತ್ಯ ಹೊರಬರಲಿ
ಹರಿದಾಡಿದ ನಕಲಿ ಎನ್ನಲಾದ ದೂರು ಮತ್ತು ಅದಕ್ಕೆ ಇತ್ತೀಚೆಗೆ ನೀಡಲಾದ ಪ್ರತಿ ದೂರಿನ ವಿವರಗಳನ್ನು ಸಂತ್ರಸ್ಥ ಮಹಿಳೆ ಮುಂದೆ ಇಡುವ ಪ್ರಯತ್ನ ಮಾಡಲಾಯಿತಾದರೂ, ಅವರು ಮರಳಿ ಸಂಪರ್ಕಕ್ಕೆ ಲಭ್ಯರಾಗಲಿಲ್ಲ.
ಸದ್ಯ ಲಭ್ಯ ಇರುವ ದಾಖಲೆಗಳು, ಹರಿದಾಡುತ್ತಿರುವ ಧ್ವನಿ ಮುದ್ರಿಕೆ ಹಾಗೂ ಆಶ್ರಮ ವಕೀಲರೇ ಹೇಳುವಂತೆ ಸಂಚು ನಡೆದಿರುವ ಸಾಧ್ಯತೆಗಳು ಮಲೆನಾಡು ಭಾಗಗದಲ್ಲಿ ಜನಪ್ರಿಯತೆ ಜತೆಗೆ ಅಪಾರ ಅನುಯಾಯಿಗಳನ್ನು ಕಡಿಮೆ ಅವಧಿಯಲ್ಲಿ ಸಂಪಾದಿಸಿರುವ ವಿನಯ್ ಗುರೂಜಿ ಸುತ್ತ ಹಲ್ಚಲ್ ಒಂದು ನಡೆಯುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿವೆ. ಈ ಕುರಿತು ಸೂಕ್ತ ಪೊಲೀಸ್ ತನಿಖೆ ಮಾತ್ರವೇ ಉತ್ತರ ನೀಡಬೇಕಿದೆ.