ಬಂದೇಬಿಡ್ತು ವರ್ಷಕ್ಕೊಮ್ಮೆ ದರ್ಶನ ನೀಡೋ ಬಿಂಡಿಗ ದೇವಿರಮ್ಮನ ಜಾತ್ರೆ
ಚಿಕ್ಕಮಗಳೂರು, ಅಕ್ಟೋಬರ್ 25: ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ಬಿಂಡಿಗ ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಸುಮಾರು 3000 ಅಡಿಗಳಷ್ಟು ಎತ್ತರದ ಗುಡ್ಡದಲ್ಲಿ ಪೂಜಿಸಲ್ಪಡುವ ದೇವಿರಮ್ಮನ ದರ್ಶನಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು ಭಾನುವಾರ ಬೆಳಿಗ್ಗೆ 3000 ಅಡಿ ಎತ್ತರದ ಹಸಿರು ಸಿರಿಯಲ್ಲಿ ದೇವಿರಮ್ಮ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಲಿದ್ದಾಳೆ.
ಚಿತ್ರದುರ್ಗದಲ್ಲಿ ದೇವರಿಗೆ ಹಾವು, ಚೇಳು, ಕಪ್ಪೆ ಹರಕೆ ಸಲ್ಲಿಸುತ್ತಾರೆ ಜನ!
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿದೆ ಬಿಂಡಿಗ ದೇವಿರಮ್ಮ ದೇವಾಲಯ. ದೀಪಾವಳಿ ಅಂಗವಾಗಿ ಮೂರು ದಿನಗಳ ಕಾಲ ಈ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ವರ್ಷಕ್ಕೊಮ್ಮೆ ಮಾತ್ರ ದೇವಿ ದರ್ಶನ
3000 ಅಡಿಗಳಷ್ಟು ಎತ್ತರ ಗುಡ್ಡದಲ್ಲಿರುವ ದೇವಿರಮ್ಮ ವರ್ಷಕ್ಕೊಮ್ಮೆ ಮಾತ್ರ ಜನರಿಗೆ ದರ್ಶನ ನೀಡುವುದು. ಜೊತೆಗೆ ಈ ಬೆಟ್ಟವನ್ನು ಭಕ್ತಾದಿಗಳು ಬರಿಗಾಲಲ್ಲೇ ಹತ್ತುತ್ತಾರೆ. ಮೂರು ದಿನಗಳ ಕಾಲ ನಡೆಯುವ ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಸಾಗುತ್ತಿವೆ. ದೇವರಮ್ಮನ ಬೆಟ್ಟಕ್ಕೆ ಹೋಗಲು ಮೂರು ದಾರಿಗಳಿದ್ದು ದೇವಸ್ಥಾನ ಸಮೀಪದಿಂದ ಮತ್ತು ಅರಳುಗುಪ್ಪೆಯ ಕಾಫೀ ಎಸ್ವೇಟ್ ಮತ್ತು ಮಾಣಿಕ್ಯಧಾರ ಮಾರ್ಗವಾಗಿ ಬೆಟ್ಟ ಹತ್ತಬಹುದು. ದೇವರ ದರ್ಶನವನ್ನು ಪಡೆಯಲು ಬೆಟ್ಟದಲ್ಲಿ ನಡೆಯುವಾಗ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ದೇವಸ್ಥಾನದ ಆಡಳಿತ ಮಂಡಳಿ ಕಾಲು ರಸ್ತೆ ನಿರ್ಮಿಸಿದ್ದು, ಸ್ವಚ್ಛಗೊಳಿಸಿದೆ. ಶನಿವಾರ ರಾತ್ರಿಯಿಂದ ಭಕ್ತಾಧಿಗಳು ಬೆಟ್ಟ ಹತ್ತುವ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೂ ಬೆಟ್ಟದಲ್ಲಿ ದೇವಿರಮ್ಮ ಭಕ್ತರಿಗೆ ದರ್ಶನವನ್ನು ನೀಡಲಿದ್ದಾಳೆ.
30ಕ್ಕೂ ಹೆಚ್ಚು ಬಸ್ ಗಳ ವ್ಯವಸ್ಥೆ
ದೇವಿರಮ್ಮನ ಬೆಟ್ಟ ಹತ್ತಲು ರಾಜ್ಯದ ವಿವಿಧ ಮೂಲೆಯಿಂದ ಲಕ್ಷಾಂತರ ಭಕ್ತರು ಮಲ್ಲೇನಹಳ್ಳಿಗೆ ಆಗಮಿಸುವ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ಹೋಗಲು ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಜಿಲ್ಲಾಡಳಿತ ಸಿದ್ಧತೆ ಮಾಡಿದೆ. ಒಟ್ಟು 30ಕ್ಕೂ ಹೆಚ್ಚು ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಚಿಕ್ಕಮಗಳೂರು, ಕಡೂರು ಮತ್ತು ಮೂಡಿಗೆರೆಯಿಂದ ನೇರವಾಗಿ ಮಲ್ಲೇನಹಳ್ಳಿಗೆ ಬಸ್ ವ್ಯವಸ್ಥೆ ಕಲ್ವಿಸಲಾಗಿದ್ದು ಖಾಸಗಿ ವಾಹನದಲ್ಲಿ ಬರುವ ಭಕ್ತರಿಗೆ ಸುಮಾರು 10 ಎಕರೆಗೂ ಅಧಿಕ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಚಿಕ್ಕಮಗಳೂರಿನಿಂದ ಮಲ್ಲೇನಹಳ್ಳಿವರೆಗೂ ಅಲ್ಲಲ್ಲಿ ಭಕ್ತಾದಿಗಳಿಗೆ ತಾತ್ಕಾಲಿಕ ಬಸ್ ಸ್ಟಾಪ್ ಕೂಡ ಮಾಡಲಾಗಿದೆ. ಪ್ರತಿ ವರ್ಷ ದೇವಿರಮ್ಮ ಬೆಟ್ಟ ಹತ್ತಲು 50 ಸಾವಿರಕ್ಕೂ ಅಧಿಕ ಭಕ್ತಾದಿಗಳು ಬರುತ್ತಿದ್ದರು.
ಕೋಳಿ ಮರಿ ಎಸೆದು ಹರಕೆ ತೀರಿಸುವ ವಡಗಾವಿ ಜಾತ್ರೆ...
ಭಕ್ತರು ಜಾಗ್ರತೆಯಿಂದ ಬೆಟ್ಟ ಹತ್ತುವಂತೆ ಎಚ್ಚರಿಕೆ
ಪ್ರತಿ ವರ್ಷ ದೇವಿರಮ್ಮನ ದರ್ಶನ ಪಡೆದು ಪ್ರಕೃತಿ ಸೊಬಗನ್ನು ಸವಿಯಲು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು. ಆದರೆ ಈ ಬಾರಿ ಸಾಕಷ್ಟು ಮಳೆಯಾಗಿದ್ದು ಭಕ್ತರ ಸಂಖ್ಯೆಯಲ್ಲಿ ಕಡಿಮೆಯಾಗಬಹುದು ಎನ್ನಲಾಗಿದೆ. ಆದರೆ ದೇವಸ್ಥಾನ ಆಡಳಿತ ಮಂಡಳಿ ಬೆಟ್ಟದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಿದೆ. ಕಡಿದಾದ ಭಾಗದಲ್ಲಿ ಬೆಟ್ಟವನ್ನು ಹತ್ತಲು ಅನುಕೂಲವಾಗುವಂತೆ ರಸ್ತೆ ರಿಪೇರಿ ಮಾಡಲಾಗಿದೆ. ಆದರೆ ಮಳೆ ಇರುವ ಕಾರಣ ಜಾರುವ ಸಂಭವ ಇದ್ದು ಭಕ್ತರು ಜಾಗ್ರತೆಯಿಂದ ಬೆಟ್ಟ ಹತ್ತಬೇಕು ಎಂದು ಜಿಲ್ಲಾಡಳಿತ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸೂಚಿಸಿದೆ.
ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ
ಒಟ್ಟಾರೆ ದೀಪಾವಳಿ ದಿನದಂದು ಆರಂಭಗೊಳ್ಳುವ ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮನ ದರ್ಶನಕ್ಕೆ ಜನರು ಕಾತುರದಿಂದ ಕಾದು ಕೂತಿದ್ದಾರೆ. ದೇವಸ್ಥಾನದ ಸುತ್ತ ಮುತ್ತ ದೇವಸ್ಥಾನ ಆಡಳಿತ ಮಂಡಳಿ ಸಕಲ ಸೌಲಭ್ಯಗಳನ್ನು ಮಾಡಿದೆ. ದೇವಿರಮ್ಮನ ಬೆಟ್ಟದಲ್ಲಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ವಿಸಲಾಗಿದೆ.