ವರ್ಷವಾದರೂ ಇಲ್ಲ ಸೇತುವೆ: ಸಂಸದೆ, ಶಾಸಕರನ್ನು ತರಾಟೆಗೆ ತೆಗೆದುಕೊಂಡ ಜನ
ಚಿಕ್ಕಮಗಳೂರು, ಆಗಸ್ಟ್ 08: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಇಡೀ ಜಿಲ್ಲೆಯನ್ನೇ ಅಸ್ತವ್ಯಸ್ತ ಮಾಡಿದೆ. ಪ್ರವಾಹ, ಮಳೆ, ಭೂ ಕುಸಿತ, ಗುಡ್ಡ ಕುಸಿತ ಸಂಭವಿಸುತ್ತಿದ್ದು, ಆತಂಕದ ನಡುವೆಯೇ ಜನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವಂತೆ ಆಗಿದೆ. ಜೊತೆಗೆ ಸೇತುವೆಗಳೂ ಮುಳುಗಿ ರಸ್ತೆಗಳ ಸಂಪರ್ಕವೇ ಕಡಿತಗೊಂಡಿದೆ.
Recommended Video
ಬಂಕೇನಹಳ್ಳಿಯಲ್ಲೂ ಕಳೆದ ವರ್ಷದ ಮಳೆಯಲ್ಲಿ ಸೇತುವೆಯೊಂದು ಮುಳುಗಿತ್ತು. ಆದರೆ ಅದರ ನಿರ್ಮಾಣ ಕಾರ್ಯವನ್ನು ಮಾತ್ರ ಇನ್ನೂ ಕೈಗೊಂಡಿಲ್ಲ. ಇದೇ ಕಾರಣಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಇಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಸ್ವಿಮ್ಮಿಂಗ್ ಪೂಲ್ ಆದ ರಸ್ತೆ: ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಾರು ತಡೆದು ಜನರಿಂದ ಕ್ಲಾಸ್!
ಜಿಲ್ಲೆಯ ಬಂಕೇನಹಳ್ಳಿಗೆ ಇಂದು ಪರಿಸ್ಥಿತಿ ಅವಲೋಕಿಸಲು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಎಂ.ಪಿ ಕುಮಾರಸ್ವಾಮಿ ಭೇಟಿ ನೀಡಿದ್ದರು. ಈ ಸಂದರ್ಭ, ವರ್ಷ ಕಳೆದರೂ ಸೇತುವೆ ನಿರ್ಮಿಸಿಲ್ಲ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಸಂಸದೆ ಹಾಗೂ ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ವರ್ಷದ ಹಿಂದೆಯೇ ಗ್ರಾಮದ ಸೇತುವೆ ಕೊಚ್ಚಿ ಹೋಗಿದೆ. ಸೇತುವೆ ಇಲ್ಲದೇ ಜನರು ಪರದಾಡುವಂತಾಗಿದೆ. ಇದೀಗ ಗ್ರಾಮಕ್ಕೆ ಬಂದಿದ್ದೀರಾ ಎಂದು ಪ್ರಶ್ನಿಸಿದರು.
ಮಹಾಮಳೆಗೆ ತೇಲಿ ಬಂದ ಭಾರಿ ಗಾತ್ರದ ಹೆಬ್ಬಾವು: ಚಿಕ್ಕಮಗಳೂರಿನಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಆ ನದಿ ನೀರಿನೊಂದಿಗೆ ಹೆಬ್ಬಾವು ಕೂಡ ತೇಲಿ ಬಂದಿದೆ. ಎನ್ಆರ್ ಪುರ ತಾಲೂಕಿನ ಅಂಡುವಾನೆ ಗ್ರಾಮದ ಬಳಿ ಹೆಬ್ಬಾವು ಕಾಣಿಸಿಕೊಂಡಿದ್ದು, ನೀರಿನ ಸೆಳೆತದಿಂದ ಹೆಬ್ಬಾವು ನಿತ್ರಾಣಗೊಂಡಿದೆ. ಹೆಬ್ಬಾವನ್ನು ನೀರಿನಿಂದ ತೆಗೆದು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಮಳೆಗೆ ಕಾಫಿನಾಡಿನಲ್ಲಿ ಮೂರನೇ ಬಲಿ: ದೇವಸ್ಥಾನಕ್ಕೆ ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ಹೇಮಾವತಿ ನದಿ ಪ್ರವಾಹದಲ್ಲಿ ವೃದ್ಧೆಯೊಬ್ಬರು ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ರುದ್ರಮ್ಮ (87) ಪ್ರವಾಹದಲ್ಲಿ ಕೊಚ್ಚಿ ಹೋದವರು. ಮೂಡಿಗೆರೆ ತಾಲೂಕಿನ ಜನ್ನಾಪುರದ ಅಗ್ರಹಾರ ದೇವಸ್ಥಾನದ ಸಮೀಪ ಘಟನೆ ನಡೆದಿದೆ.
ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿ: ಶೃಂಗೇರಿ ಸಮೀಪದ ನೆಮ್ಮಾರ್ ಗ್ರಾ. ಪಂ ವ್ಯಾಪ್ತಿಯ ಹೊರೂರು ಬಳಿ ವಾಸುದೇವ ಭಟ್ಟ (54) ಎಂಬುವರು ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಹಳ್ಳದಲ್ಲಿಯೇ ಸಿಲುಕಿದ್ದ ಮೃತ ದೇಹ ಪತ್ತೆಯಾಗಿದೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.