ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಮತ್ತೊಂದು ಸಾಕ್ಷಿ ಈ ಬೆಟ್ಟದ ಮೇಲಿನ ಕೆಸರು ಗದ್ದೆ
ಚಿಕ್ಕಮಗಳೂರು, ಜುಲೈ 29: ನಾವು ನೀವೆಲ್ಲಾ ವಿದೇಶದ ಯಾವುದೋ ಒಂದು ಪ್ರದೇಶವನ್ನು ನೋಡಿ ರೋಮಾಂಚನಗೊಳ್ಳುತ್ತೇವೆ. ಆದರೆ ಅಂತಹ ಪ್ರದೇಶವೊಂದು ನಮ್ಮ ಮಲೆನಾಡಿನಲ್ಲಿಯೇ ಮೈನೆರೆದುಕೊಂಡಿದೆ. ಆ ಜಾಗವನ್ನು ನೋಡಿದರೆ ಅಯ್ಯೋ,! ಇದು ನಮ್ಮ ರಾಜ್ಯದಲ್ಲಿದೆಯಾ ಅಂತಾ ಆಶ್ಚರ್ಯ ಪಡಬಹುದು.
Recommended Video
ನಮ್ಮ ಮಲೆನಾಡ ಪ್ರಕೃತಿಯ ಸೊಬಗು ಯಾವುದಕ್ಕೂ ಕಡಿಮೆ ಇಲ್ಲಾ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸ ಬಳಿಯ ಸಂಸೆ ಸಮೀಪದ ಬಾಮಿಕೊಂಡ ಎಂಬ ಚಿಕ್ಕಹಳ್ಳಿಯ ಅತ್ಯದ್ಬುತ ಪ್ರಕೃತಿ ಸೊಬಗೊಂದು ಎಲ್ಲರ ಕಣ್ಮನ ಸೆಳೆಯುತ್ತಿದೆ. ಎತ್ತರವಾದ ಬೆಟ್ಟದ ಮೇಲಿನ ಕೆಸರಿನ ಮಧ್ಯೆ ಹಚ್ಚ ಹಸಿರಿನ ಹೃದಯಾಕಾರದ ಹಸಿರು ರಾಶಿ ಎಲ್ಲರನ್ನು ಆಕರ್ಷಿಸುತ್ತಿದೆ.
ಚಿಕ್ಕಮಗಳೂರಿನಲ್ಲಿ ಭಾರೀ ಮಳೆ; ಮುಳುಗುತ್ತಿದೆ ಹೆಬ್ಬಾಳೆ ಸೇತುವೆ
ಅನೇಕ ವರ್ಷಗಳಿಂದ ಇಲ್ಲಿನ ಕೃಷ್ಣ ಎಂಬ ರೈತ ಕುಟುಂಬ ಈ ಬೆಟ್ಟದ ಸುತ್ತ ಕೃಷಿಯನ್ನು ಮಾಡುತ್ತಾ ಬಂದಿದ್ದಾರೆ. ಯಾವುದೇ ಯಂತ್ರೋಪಕರಣಗಳಿಲ್ಲದೆ ಗದ್ದೆಗಳನ್ನು ಸಿದ್ದ ಮಾಡಿ ಸೌಂದರ್ಯವನ್ನು ತುಂಬಿರುವುದು ಅದ್ಬುತವೇ ಸರಿ.
ಯಾವುದೋ ದೇಶದ ಎತ್ತರವಾದ ಬೆಟ್ಟಗಳ ಮೇಲಿನ ಕೆಸರು ಗದ್ದೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿ ವ್ಹಾವ್! ಎಂತಹ ಸೌಂದರ್ಯ ಅಂತಾ ಕಣ್ತುಂಬಿಕೊಂಡಿರುತ್ತೇವೆ. ಆದರೆ ಮಲೆನಾಡಿನ ಈ ಸಂಸೆ ಎಂಬ ಅದ್ಬುತ ಫಾರಿನ್, ಈವೆರಗೂ ಯಾರ ಕಣ್ಣಿಗೂ ಬಿದ್ದಿಲ್ಲ. ರೈತನು ಎತ್ತರವಾದ ಬೆಟ್ಟದ ಸುತ್ತಾ ಮೆಟ್ಟಿಲುಗಳ ರೀತಿ ಭತ್ತದ ಗದ್ದೆಗಳನ್ನು ಮಾಡಿ, ಸೌಂದರ್ಯವನ್ನು ಅದಕ್ಕೆ ತುಂಬಿದ್ದಾನೆ. ಸುತ್ತಲಿನ ಎತ್ತರದ ಬೆಟ್ಟಗುಡ್ಡಗಳು ತಂಪಾದ ಗಾಳಿ ಮತ್ತಷ್ಟು ಜೀವಕಳೆ ತುಂಬಿದೆ.
ಮಲೆನಾಡು ಪ್ರದೇಶದಲ್ಲಿ ಮುಂದುವರೆದ ಮಳೆಯ ಅಬ್ಬರ
ಸುಮಾರು ನಾಲ್ಕು ಎಕರೆ ಜಾಗದಲ್ಲಿ ಈ ಗದ್ದೆಯನ್ನು ಉಳುಮೆ ಮಾಡಲಾಗುತ್ತಿದೆ. ಬೆಟ್ಟದ ಸುತ್ತಲೂ ಉಳುಮೆಯನ್ನು ಮಾಡಿ ಭತ್ತ ನಾಟಿ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಸುತ್ತಲು ಉಳುಮೆ ಮಾಡಿ ಬೆಟ್ಟದ ಮೇಲ್ಭಾಗವನ್ನು ಹೃದಯಾಕಾರದಲ್ಲಿ ಹಸಿರು ಹುಲ್ಲನ್ನು ಹಾಗೆಯೇ ಬಿಡಲಾಗಿದೆ. ಇದು ಗದ್ದೆಯ ಕೆಸರಿನ ನಡುವೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಇನ್ನು ಒಂದು ಹಾಳಿಯಿಂದ ಮತ್ತೊಂದು ಹಾಳಿಗೆ ಬದುವಿನ ಮೇಲಿಂದ ನೀರು ಸುರಿಯುವ ದೃಶ್ಯ ಸಣ್ಣ ಸಣ್ಣ ಜಲಪಾತಗಳಂತೆ ಗೋಚರಿಸುತ್ತವೆ.
ಮೂಡಿಗೆರೆ ತಾಲ್ಲೂಕು ಕಳಸಾದಿಂದ ಕುದುರೆಮುಖ ಮಾರ್ಗವಾಗಿ ಸಾಗಿದರೆ ಈ ಗ್ರಾಮ ಸಿಗುತ್ತದೆ. ಆದರೆ ಈ ಭತ್ತದ ಗದ್ದೆಯ ಸೌಂದರ್ಯ ಸವಿಯಲು ಸುಮಾರು 4 ಕಿ.ಮೀ ಬೆಟ್ಟದ ಹಾದಿಯಲ್ಲಿ ನಡೆದುಕೊಂಡು ಹೋಗಬೇಕು. ಇದುವರೆಗೂ ಈ ಗ್ರಾಮದಲ್ಲಿ ಐದಾರು ಕುಟುಂಬಗಳು ವಾಸ ಮಾಡುತ್ತಿದ್ದು, ನಗರ ಸಂಪರ್ಕ ಮಾಡಲು ಅವರಿಗೆ ಕಾಲು ನಡಿಗೆಯೇ ಆಧಾರವಾಗಿದೆ. ಆದರೆ ಇಲ್ಲಿನ ಪ್ರಕೃತಿಯ ಸೊಬಗು ನೋಡಿದರೆ ಎಂತಹ ಸುಸ್ತು ಸಹ ಮಾಯವಾಗುತ್ತೆ ಅಂತಾರೆ ಸ್ಥಳಕ್ಕೆ ಭೇಟಿ ನೀಡಿದ ಪರೀಕ್ಷಿತ್ ಜಾವಳಿ.