ಚಿಕ್ಕಮಗಳೂರು: ಪ್ರವಾಸೋದ್ಯಮ ತಾಣವಾಗಿ ಅಯ್ಯನಕೆರೆ ಅಭಿವೃದ್ಧಿ
ಚಿಕ್ಕಮಗಳೂರು, ಜೂನ್ 21: ಕಡೂರು ತಾಲ್ಲೂಕಿನ ಐಯ್ಯನಕೆರೆಯನ್ನು ಪ್ರವಾಸೋದ್ಯಮ ತಾಣ ಹಾಗೂ ಜಲ ಸಾಹಸ ಕ್ರೀಡಾ ತರಬೇತಿ ಕೇಂದ್ರವನ್ನಾಗಿ ರೂಪಿಸುವ ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ತಿಳಿಸಿದರು.
Recommended Video
ಶನಿವಾರ ಕಡೂರು ತಾಲ್ಲೂಕು ಸಖರಾಯಪಟ್ಟಣ ಸಮೀಪದಲ್ಲಿರುವ ಐಯ್ಯನಕೆರೆಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಅಯ್ಯನಕೆರೆ ಪ್ರದೇಶದಲ್ಲಿ ಜಲಸಹಾಸ ಕ್ರೀಡೆ ತರಬೇತಿ ಕೇಂದ್ರ, ಕೆರೆಯ ಮಧ್ಯಭಾಗದಲ್ಲಿರುವ ಐಲ್ಯಾಂಡ್ ಹಾಗೂ ಕೆರೆ ದಂಡೆಗೆ ಜಿಪ್ಲೈನ್, ಶಕುನಗಿರಿ ಪ್ರದೇಶಕ್ಕೆ ಟ್ರಕ್ಕಿಂಗ್, ಸೈಕ್ಲಿಂಗ್ ಟ್ರ್ಯಾಕ್ ನಿರ್ಮಾಣ ಮಾಡಿ, ಪ್ರವಾಸಿಗರ ಆಕರ್ಷಕ ತಾಣವಾಗಿ ರೂಪಿಸುವ ಯೋಜನೆ ರೂಪಿಸಿದ್ದು, ಸಾಧಕ-ಭಾದಕಗಳ ಬಗ್ಗೆ ಚಿಂತನೆ ಮಾಡಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಚಾರ್ಮಾಡಿ ಘಾಟ್ ರಸ್ತೆ ತಿರುವಿನಲ್ಲಿ ಪಾತಾಳಕ್ಕೆ ಉರುಳಿದ ವಾಹನ
ಕೆರೆಯ ಸೌಂದರ್ಯಕ್ಕೆ ಹಾಗೂ ನಿಸರ್ಗಕ್ಕೆ ಧಕ್ಕೆಯಾಗದಂತೆ ಬಹು ಚಟುವಟಿಕೆಯ ಯೋಜನೆ ರೂಪಿಸುವಂತೆ ಸಲಹೆ ಬಂದಿದೆ. ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿತಿ ಕೇಂದ್ರಕ್ಕೆ ನೀಡಿರುವ ಎರಡೂವರೆ ಕೋಟಿ ರೂ. ಹಣ ಲಭ್ಯವಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಲಸಾಹಸ ಕ್ರೀಡಾ ಚಟುವಟಿಕೆ ಮತ್ತು ತರಬೇತಿ ಕೇಂದ್ರ ತೆರೆಯಲು ಎಷ್ಟು ಹಣದ ಅವಶ್ಯಕತೆಯಿದೆ ಎಂಬುದರ ಯೋಜನೆ ರೂಪಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಐಯ್ಯನಕೆರೆ ಪ್ರದೇಶ ಆಕರ್ಷಿತ ಪ್ರವಾಸೋದ್ಯಮ ಹಾಗೂ ಜಲಸಾಹಸ ಕ್ರೀಡಾ ತರಬೇತಿ ಕೇಂದ್ರವಾಗಿ ರೂಪಿಸಿದಲ್ಲಿ ದೇಶ-ವಿದೇಶದ ಸಾಹಸ ಕ್ರೀಡಾ ತರಬೇತಿದಾರರು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗಲಿದೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಇನಷ್ಟು ಮೆರಗು ಬರಲಿದೆ ಎಂದು ಅಭಿಪ್ರಾಯಪಟ್ಟರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಹಳಷ್ಟು ನಿಸರ್ಗ ಸೌಂದರ್ಯವಿದೆ. ಐಯ್ಯನಕೆರೆ ಪ್ರದೇಶ ಅಭಿವೃದ್ಧಿಪಡಿಸಿ ಜನಾಕರ್ಷಕ ಕೇಂದ್ರವಾಗಿ ಮಾಡಿದಲ್ಲಿ ಖಾಸಗಿ ಹಾಗೂ ಸರ್ಕಾರಿ ವಾಹನ ಸಂಪರ್ಕ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಬಗ್ಗೆಯೂ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುವುದು. ಕೆರೆ ಪ್ರದೇಶವನ್ನು ಆಕರ್ಷಣೀಯ ಕೇಂದ್ರ ಹಾಗೂ ಚಟುವಟಿಕೆ ಕೇಂದ್ರವಾಗಿ ಮಾಡುವುದು ನಮ್ಮ ಉದ್ದೇಶ ಎಂದರು.
ಕೆರೆಯನ್ನು ಅಭಿವೃದ್ಧಿ ಪಡಿಸಿದರೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ. ಇದರೊಂದಿಗೆ ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಯುವ ತಂಡ ಐಯ್ಯನಕೆರೆ ಸುತ್ತಮುತ್ತಲ ಪ್ರದೇಶ ಸರ್ವೇ ಕಾರ್ಯ ನಡೆಸಿ ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಈ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಗೌತಮ್ ಬಗಾದಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಶ್ರೀನಿವಾಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಳ್ಳಿ, ಜನರಲ್ ತಿಮ್ಮಯ್ಯ ಅಡ್ವೇಂಚರ್ ಅಕಾಡೆಮಿ ಸಲಹೆಗಾರ ಮಂಜುನಾಥ್, ತರಬೇತಿದಾರ ಉಮಾಶಂಕರ್, ಬಾಲಾಜಿ, ಚಿತ್ರನಟಿ ರೇಖಾ, ಸೌಮ್ಯ ಉಪಸ್ಥಿತರಿದ್ದರು.