ಚಿಕ್ಕಮಗಳೂರು; ಕೃಷಿ ಯಾಂತ್ರೀಕರಣ ಯೋಜನೆ ವಿಷಯಕ್ಕೆ ಕಾಂಗ್ರೆಸ್- ಬಿಜೆಪಿ ಸದಸ್ಯರ ಜಗಳ
ಚಿಕ್ಕಮಗಳೂರು, ಜೂನ್ 22: ಕೃಷಿ ಯಾಂತ್ರೀಕರಣ ಯೋಜನೆಯ ಗೋಲ್ ಮಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸರ್ವ ಸದಸ್ಯರ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದಿದ್ದಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ಉಂಟಾಯಿತು.
Recommended Video
ಕಳೆದ ಮೂರು ವರ್ಷಗಳಿಂದಲೂ ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ಖಾಸಗಿ ಕಂಪನಿಗಳ ಜೊತೆ ಕೃಷಿ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ, ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಹೀಗಾಗಿ ಜಿಲ್ಲಾಪಂಚಾಯತ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಕಡೂರು ತಾಲೂಕಿನ ಯಗಟಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಶರತ್ ಕೃಷ್ಣಮೂರ್ತಿ ಪ್ರಸ್ತಾಪ ಮಾಡಿದರು.
ಮನೆಯ ಸೌಂದರ್ಯಕ್ಕೆ ಅಡ್ಡಿ: ಬಸ್ ನಿಲ್ದಾಣ ಧ್ವಂಸಗೊಳಿಸಿದ ಗ್ರಾ.ಪಂ ಅಧ್ಯಕ್ಷೆ
ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚರ್ಚೆಗೆ ಅವಕಾಶ ನೀಡದ ಹಿನ್ನಲೆ ಜಿಲ್ಲಾ ಪಂಚಾಯತಿ ಸಭೆಯಲ್ಲಿ ಕಡೂರು ಕ್ಷೇತ್ರದ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಹಾಗೂ ಶರತ್ ಕೃಷ್ಣಮೂರ್ತಿ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಕಾಂಗ್ರೆಸ್ ಸದಸ್ಯರು ಜಿಲ್ಲಾ ಪಂಚಾಯತ್ ಸಭೆ ಬಹಿಷ್ಕರಿಸಿ ಹೊರನಡೆದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಶರತ್ ಕೃಷ್ಣಮೂರ್ತಿ, ಕೃಷಿ ಯಾಂತ್ರೀಕೃತ ಯೋಜನೆಯಲ್ಲಿ ಕಡೂರು, ತರೀಕೆರೆ ತಾಲೂಕಿನಲ್ಲಿಯೇ ಕಳೆದ ಮೂರು ವರ್ಷದಲ್ಲಿ 10 ಕೋಟಿಗೂ ಹೆಚ್ಚು ಅವ್ಯವಹಾರ ಆಗಿದೆ. ಇದರಲ್ಲಿ ಅಧಿಕಾರಿಗಳು ಕೆಲ ಬೋಗಸ್ ರೈತರ ಹೆಸರಲ್ಲಿ ಸಬ್ಸಿಡಿ ಪಡೆದು ಗುಳುಂ ಮಾಡಿದ್ದಾರೆ. ಕೆಲವೆಡೆ ರೈತರ ಜೊತೆ ಶಾಮೀಲಾಗಿ ಅವರಿಗೆ ಉಪಕರಣ ಕೊಡದೇ ಲಂಚ ಪಡೆದಿದ್ದಾರೆ. ಈ ಬಗ್ಗೆ ತನಿಖೆಗೆ ಕಮಿಟಿ ರಚಿಸಿದ್ದು, ಆ ಕಮಿಟಿಯಲ್ಲಿ ಈ ಅಕ್ರಮದ ಆರೋಪಿಗಳೇ ಇದ್ದಾರೆ ಎಂದು ದೂರಿದ್ದಾರೆ.
ಈ ಬಗ್ಗೆ ಗಮನ ಹರಿಸಿ ಇದನ್ನು ಸರ್ಕಾರದ ಗಮನಕ್ಕೆ ತರಬೇಕಿದ್ದ ಜಿಲ್ಲಾ ಪಂಚಾಯತ್ ಈ ಬಗ್ಗೆ ಚರ್ಚೆಗೇ ಅವಕಾಶ ಕೊಡದಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಬೆಳ್ಳಿ ಪ್ರಕಾಶ್, ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ವಿಶ್ಯುವಲೆನ್ಸಿ ಕಮಿಟಿ ರಚಿಸಿದ್ದಾರೆ. ತನಿಖೆಯ ನಂತರ ಎಲ್ಲವೂ ಸ್ಪಷ್ಟವಾಗಲಿದೆ. ತನಿಖೆಯಲ್ಲಿ ಅಧಿಕಾರಿಗಳು ಗೋಲ್ ಮಾಡಿರುವುದು ಸಾಬೀತಾದರೆ ಅವರಿಗೆ ಸೂಕ್ತ ಶಿಕ್ಷೆ ನೀಡುವುದರಲ್ಲಿ ಶರತ್ ಕೃಷ್ಣಮೂರ್ತಿ ಜೊತೆ ನಾನು ಇರುತ್ತೇನೆ ಎಂದರು.