ಮೂಡಿಗೆರೆ ಪಟ್ಟಣ ಪಂಚಾಯತಿಯಲ್ಲಿ ಅಧಿಕಾರದ ಗದ್ದುಗೆ ಏರಿದ ಬಿಜೆಪಿ
ಚಿಕ್ಕಮಗಳೂರು, ನವೆಂಬರ್ 4: ಮೂಡಿಗೆರೆ ಪಟ್ಟಣ ಪಂಚಾಯತಿಯ ಅಧ್ಯಕ್ಷರಾಗಿ 2ನೇ ವಾರ್ಡ್ ನ ಸದಸ್ಯ ಅನುಕುಮಾರ್, ಉಪಾಧ್ಯಕ್ಷರಾಗಿ 4ನೇ ವಾರ್ಡ್ ನ ಸದಸ್ಯ ಸುಧೀರ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ 3ನೇ ಬಾರಿ ಬಿಜೆಪಿ ಪ.ಪಂ ನಲ್ಲಿ ಅಧಿಕಾರಕ್ಕೇರಿದಂತಾಗಿದೆ.
ಒಂದೂವರೆ ವರ್ಷ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯದೇ ನೆನಗುದಿಗೆ ಬಿದ್ದಿದ ಪ.ಪಂ ಚುನಾವಣೆ ಬುಧವಾರ ನಡೆಯಿತು. 2019 ಮೇ.27 ರಂದು ಚುನಾವಣೆ ನಡೆದಿದ್ದು, 31 ರಂದು ಫಲಿತಾಂಶ ಪ್ರಕಟವಾದಾಗ ಬಿಜೆಪಿ 6, ಕಾಂಗ್ರೆಸ್ 4, ಜೆಡಿಎಸ್ 1 ಸ್ಥಾನ ಗಳಿಸಿ ಬಿಜೆಪಿ ಸರಳ ಬಹುಮತ ಪಡೆದಿತ್ತು.
ಬುಧವಾರ ಬೆಳಿಗ್ಗೆ 10.30ಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದರು. 11.30ಕ್ಕೆ ನಾಮಪತ್ರ ಪರಿಶೀಲನೆ ನಡೆದು, ಇತರೆ ಸದಸ್ಯರು ನಾಮಪತ್ರ ಸಲ್ಲಿಸದಿರುವುದರಿಂದ 12.30ಕ್ಕೆ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ, ತಹಸೀಲ್ದಾರ ಎಚ್.ಎಂ ರಮೇಶ್ ಘೋಷಿಸಿದರು.
1995 ರಲ್ಲಿ ಕಾಂಗ್ರೆಸ್ ನಿಂದ ಜಯಗಳಿಸಿದ್ದ ಅಂದಿನ ಸದಸ್ಯ ಜಿ.ಎಚ್.ಹಾಲಪ್ಪಗೌಡ ಅವರು ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಪ.ಪಂ ಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಡಿದ್ದರು.
2009 ರಲ್ಲಿ ಬಿಜೆಪಿ 2ನೇ ಬಾರಿ ಬಹುಮತದೊಂದಿಗೆ ಅಧಿಕಾರ ಪಡೆದು ಸರೋಜ ಸುರೇಂದ್ರ, ಜಾವೀದ್, ಲತಾ ಲಕ್ಷ್ಮಣ್ ಬಿಜೆಪಿಯಿಂದ ಅಧ್ಯಕ್ಷರಾಗಿದ್ದರು. ಈಗ 3ನೇ ಬಾರಿಗೆ ಬಿಜೆಪಿ ಸರಳ ಬಹುಮತ ಪಡೆದಾಗ 2 ಬಾರಿ ಮೀಸಲಾತಿ ಬದಲಾಯಿಸಿ 3ನೇ ಬಾರಿ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಾದಾಗ ಅನುಕುಮಾರ್ ಅಧ್ಯಕ್ಷರಾಗಿ, ಬಿಸಿಎಂ (ಎ) ವರ್ಗದಲ್ಲಿ ಸುಧೀರ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
ಕಾಫಿ ಡೇ ಮಾಲೀಕ ದಿ.ಸಿದ್ಧಾರ್ಥ್ ಪತ್ನಿ ಸೇರಿ 8 ಜನರ ವಿರುದ್ಧ ಬಂಧನದ ವಾರೆಂಟ್
ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, 2 ವರ್ಷದ ನಂತರ ಇಲ್ಲಿನ ಪ.ಪಂ ಯ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಸ್ಥಾನ ಆಯ್ಕೆಯಾಗಿದೆ. ಈ ರೀತಿ ದೀರ್ಘಾವಧಿ ಎಂದೂ ಆಗಿರಲಿಲ್ಲ ಎಂದರು.
ಇಂತಹ ಪ್ರಕ್ರಿಯೆಯಲ್ಲಿ ಕುದುರೆ ವ್ಯಾಪಾರವಾಗದೇ, ವಿರೋಧ ಪಕ್ಷದ ಸದಸ್ಯರು ನಾಮಪತ್ರ ಸಲ್ಲಿಸದೇ ಅವಿರೋಧ ಆಯ್ಕೆಗಾಗಿ ಸಹಕರಿಸಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಪಟ್ಟಣದ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಇನ್ನೂ ಹೆಚ್ಚಿನ ಅನುದಾನ ತರಲು ಶ್ರಮಿಸಲಾಗುವುದು ಎಂದು ಹೇಳಿದರು.
ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಮಾತನಾಡಿ, ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಮ್ಮ ಅವಧಿಯಲ್ಲಿ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ಪ.ಪಂ ಒಂದು ಲಂಚದ ಕೂಪದ ಕಚೇರಿ ಎಂದು ಸಾರ್ವಜನಿಕರು ಭಾವಿಸಿದ್ದಾರೆ. ಜನರಲ್ಲಿ ಉತ್ತಮ ಹೆಸರು ಗಳಿಸಲು ಕುಡಿಯುವ ನೀರು, ರಸ್ತೆ, ಚರಂಡಿ, ರಸ್ತೆ ಅಗಲೀಕರಣ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ಮೂಲಕ ಭ್ರಷ್ಟಾಚಾರ ರಹಿತ ಆಡಳಿತ ನಡೆಸಬೇಕೆಂದು ತಿಳಿಸಿದರು.
Recommended Video
ಬಳಿಕ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತೆರೆದ ವಾಹನದಲ್ಲಿ ಕೆಲ ಹೊತ್ತು ಮೂಡಿಗೆರೆ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.