ರಾಜೀನಾಮೆಯ ಹಿಂದಿನ ಸತ್ಯವನ್ನು ಬಾಯ್ಬಿಟ್ಟ ಸಿಂಗಂ ಅಣ್ಣಾಮಲೈ
ಚಿಕ್ಕಮಗಳೂರು, ಜನೆವರಿ 1: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಶುಕ್ರವಾರ ತಾವು ಈ ಹಿಂದೆ ಕೆಲಸ ಮಾಡಿದ್ದ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಈ ವೇಳೆ ತಮ್ಮ ರಾಜೀನಾಮೆಯ ಹಿಂದಿನ ಸತ್ಯವನ್ನು ಬಾಯ್ಬಿಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ನಡೆದ ದಿ.ಸಿದ್ದಾರ್ಥ ಹೆಗಡೆ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಸಿದ್ದಾರ್ಥ್ ಅಣ್ಣ ಹೇಳಿದ್ದಕ್ಕೆ ರಾಜೀನಾಮೆ ನೀಡಿದೆ ಎಂದು ತಿಳಿಸಿದರು.
ಡಿಐಜಿ ಆಗಿ, ಐಜಿ ಆಗಿ ಎಸಿ ರೂಮಲ್ಲಿ ಕೂತ್ಕೊಂಡು ಕೆಲಸ ಮಾಡಲು ಆಸಕ್ತಿಯಿರಲಿಲ್ಲ. ಸಾಧಾರಣ ವ್ಯಕ್ತಿಗಳ ಬದುಕಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿದ್ದೆ. ಕೆಲಸಕ್ಕೆ ರಾಜೀನಾಮೆ ಕೊಡುವುದಾ? ಬೇಡ್ವಾ ಅನ್ನೋ ಗೊಂದಲದಲ್ಲಿದ್ದೆ, ಈ ವೇಳೆ ಸಿದ್ದಾರ್ಥ್ ಅಣ್ಣ ಒಬ್ಬರೇ ನನಗೆ ರಾಜೀನಾಮೆ ಕೊಡಲು ಸಲಹೆ ನೀಡಿದ್ದರು ಎಂದು ಹೇಳಿದರು.
ಧೈರ್ಯವಾಗಿ ರಿಸೈನ್ ಮಾಡಿ ನಾನಿದ್ದೇನೆ ಎಂದರು, ರಿಸೈನ್ ಮಾಡುವ ಡೇಟನ್ನು ಇಬ್ಬರು ಕುಳಿತುಕೊಂಡು ತೀರ್ಮಾನ ಮಾಡಿದ್ವಿ. ರಾಜೀನಾಮೆ ನೀಡಿದ್ಮೇಲೆ ಜನ ನಿಮ್ಮನ್ನು ಮೂರ್ಖರು ಅನ್ನಬಹುದು, ಆದರೆ ನಿಮ್ಮ ಉದ್ದೇಶ ನನಗೆ ಗೊತ್ತಿದೆ ಮುಂದುವರೆಯಿರಿ ಎಂದು ಸಿದ್ದಾರ್ಥ್ ಅಣ್ಣ ಹೇಳಿದ್ದರು ಎಂದು ಚಿಕ್ಕಮಗಳೂರು ಜಿಲ್ಲೆಯ ಮಾಜಿ ಎಸ್ಪಿ ಅಣ್ಣಾಮಲೈ ತಮ್ಮ ರಾಜೀನಾಮೆ ಹಿಂದಿನ ಇತಿಹಾಸವನ್ನು ತಿಳಿಸಿದರು.
ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಜೊತೆ ಸೆಲ್ಫಿಗೆ ಮುಗಿಬಿದ್ದ ಜನರು
— oneindiakannada (@OneindiaKannada) January 1, 2021
ದಿ.ಸಿದ್ದಾರ್ಥ ಹೆಗಡೆ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಣ್ಣಾಮಲೈ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ನಡೆದ ಕಾರ್ಯಕ್ರಮ #Annamalai #Chikkamagaluru pic.twitter.com/UXJArSzaOP
ಮಾಜಿ ಐಪಿಎಸ್ ಅಧಿಕಾರಿಯಾದರೂ ರಿಯಲ್ ಸಿಂಗಂ ಹವಾ ಇನ್ನೂ ಕುಂದಿಲ್ಲ ಎನ್ನುವುದಕ್ಕೆ ಶುಕ್ರವಾರದ ಘಟನೆಯೇ ಸಾಕ್ಷಿ ಎನ್ನಬಹುದು. ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಅಣ್ಣಾಮಲೈ ಜೊತೆ ಸೆಲ್ಫಿಗೆ ಪೊಲೀಸರೇ ಮುಗಿಬಿದ್ದರು.
ಜನರು ಕೂಡಾ ಪ್ಲೀಸ್ ಸರ್, ಒಂದು ಸೆಲ್ಫಿ ಅಂತ ಫೋಟೋ ಕ್ಲಿಕ್ಕಿಸಿಕೊಂಡರು. ಯುವಕ-ಯುವತಿಯರಂತೂ ಕಾಡಿ-ಬೇಡಿ, ಫೋಟೋ ತೆಗೆಸಿಕೊಂಡರು. ಈ ಸಂದರ್ಭದಲ್ಲಿ ಸೆಲ್ಫಿಗೆ ಫೋಸ್ ಕೊಟ್ಟು ಅಣ್ಣಾಮಲೈ ಅವರು ಸುಸ್ತಾದರು.