ಚಿಕ್ಕಮಗಳೂರಲ್ಲಿ ಜನರನ್ನು ಸಾಗಿಸಲು ಅಂಬ್ಯುಲೆನ್ಸ್ ದುರ್ಬಳಕೆ
ಚಿಕ್ಕಮಗಳೂರು, ಏಪ್ರಿಲ್ 13: ಕೊರೊನಾ ವೈರಸ್ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸುತ್ತಿದೆ. ಕೊರೊನಾ ವೈರಸ್ ತಡೆಗಟ್ಟಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹರಸಾಹಸ ಪಡುತ್ತಿವೆ.
ಇಂತಹ ಸಂದರ್ಭದಲ್ಲಿಯೇ ಅಂಬ್ಯುಲೆನ್ಸ್ ಮಾಲೀಕರು ದುಬಾರಿ ಹಣ ಪಡೆದು ಸಾರ್ವಜನಿಕರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದುಕೊಂಡು ಹೋಗುವ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಇಂದು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಐದು ಜನರನ್ನು ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಬರುತ್ತಿದ್ದ ಅಂಬುಲೆನ್ಸ್ ಅನ್ನು ಲಿಂಗದಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ವೇಳೆ ಈ ಅಕ್ರಮ ಹೊರಗಡೆ ಬಿದ್ದಿದೆ.
ಬೆಂಗಳೂರಿನಿಂದ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹೊಸ ಗಂಗೂರು ಗ್ರಾಮಕ್ಕೆ ಕೆಎ 53, 3894 ನೋಂದಣಿಯ ಅಂಬುಲೆನ್ಸ್ ನಲ್ಲಿ ಐವರನ್ನು ಕರೆದುಕೊಂಡು ಬರುವ ವೇಳೆ ಲಿಂಗದಹಳ್ಳಿ ಚೆಕ್ ಪೋಸ್ಟ್ ನಲ್ಲಿ ತಡೆದು ವಿಚಾರಣೆ ನಡೆಸಿದಾಗ ಅಂಬುಲೆನ್ಸ್ ನಲ್ಲಿ ಪ್ರಯಾಣ ಮಾಡುತ್ತಿದ್ದವರು ಸಿಕ್ಕಿಬಿದ್ದಿದ್ದಾರೆ.
ಈತ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ 28 ಸಾವಿರ ಪಡೆದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಂಬುಲೆನ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.