ಚಿಕ್ಕಮಗಳೂರು: ರಾತ್ರೋರಾತ್ರಿ ಪ್ರತ್ಯಕ್ಷವಾದ ಅಂಬೇಡ್ಕರ್ ಪ್ರತಿಮೆ ತೆರವು
ಚಿಕ್ಕಮಗಳೂರು, ಡಿಸೆಂಬರ್ 5: ಗೋಮಾಳ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿ ಜಿಲ್ಲೆಯ ಅರಿಶಿನಗುಪ್ಪೆ ಗ್ರಾಮದ ಅರಣ್ಯ ಜಾಗದಲ್ಲಿ ರಾತ್ರೋರಾತ್ರಿ ಪ್ರತಿಷ್ಠಾಪನೆ ಮಾಡಲಾಗಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಪೊಲೀಸರು ಗುರುವಾರ ಸಂಜೆ ತೆರವುಗೊಳಿಸಿದರು.
ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಪೊಲೀಸರು ಪ್ರತಿಮೆಯನ್ನು ತೆರವುಗೊಳಿಸಲು ಮುಂದಾದಾಗ ಮಹಿಳೆಯರು ಪ್ರತಿಮೆಯನ್ನು ತಬ್ಬಿಗೊಂಡು, ಅದನ್ನು ಅಲ್ಲಿಂದ ಕದಲಿಸಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಡಿನಿಂದ ಕದಲುತ್ತಿಲ್ಲ ಅಂಬೇಡ್ಕರ್ ಪ್ರತಿಮೆ; ಉಪ ಚುನಾವಣೆ ಎಫೆಕ್ಟ್?
ಕಳೆದ ನಾಲ್ಕು ದಿನಗಳನ ಹಿಂದೆ ರಾತ್ರಿ ಬೆಳಗಾಗುವುದರಲ್ಲಿ ಅರಣ್ಯದಲ್ಲಿ ಅಂಬೇಡ್ಕರ್ ಪ್ರತಿಮೆ ಅರಣ್ಯದಲ್ಲಿ ಪ್ರತಿಷ್ಠಾಪನೆ ಮಾಡಿ ಗ್ರಾಮಸ್ಥರು ಜಮೀನಿಗಾಗಿ ಹೋರಾಟ ಆರಂಭಿಸಿದ್ದರು. ಅದನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ಸೂಚಿಸಿದ್ದರೂ, ಉಪ ಚುನಾವಣೆ ಇದ್ದಿದ್ದರಿಂದ ಅದನ್ನು ಅಲ್ಲಿಂದ ತೆಗೆಯುವ ಸಾಹಸಕ್ಕೆ ಪೊಲೀಸರು ಮುಂದಾಗಿರಲಿಲ್ಲ. ಗುರುವಾರ ಉಪ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಅಧಿಕಾರಿಗಳು ಅಂಬೇಡ್ಕರ್ ಪ್ರತಿಮೆ ತೆರವುಗೊಳಿಸಿದರು.
ಚಿಕ್ಕಮಗಳೂರಿನ ಅರಿಶಿನಗುಪ್ಪೆ ಗ್ರಾಮದಲ್ಲಿ ಗೋಮಾಳದ ಜಾಗಕ್ಕಾಗಿ ರಾತ್ರೋರಾತ್ರಿ ಗುಡಿಸಲು ನಿರ್ಮಿಸಿ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಗ್ರಾಮದ ಸರ್ವೆ ನಂ 52ರಲ್ಲಿ ಗುಡಿಸಲು ನಿರ್ಮಿಸಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗಿದ್ದು, ಅದನ್ನು ತೆರವುಗೊಳಿಸಲು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಂಬೇಡ್ಕರ್ ಪ್ರತಿಮೆ ನೋಡಿ ವಾಪಸ್ಸಾಗಿದ್ದರು. ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದು, ತಮಗೂ ಗೋಮಾಳ ನೀಡಬೇಕು ಎಂದು ಗ್ರಾಮಸ್ಥರು ಅಂಬೇಡ್ಕರ್ ಪ್ರತಿಮೆ ಮುಂದಿಟ್ಟುಕೊಂಡು ಪ್ರತಿಭಟನೆಗೆ ಇಳಿದಿದ್ದರು.
ರಾತ್ರೋರಾತ್ರಿ ಕಾಣಿಸಿಕೊಂಡಿತು ಅಂಬೇಡ್ಕರ್ ಪ್ರತಿಮೆ; ಸಿ.ಟಿ.ರವಿ ಕುಮ್ಮಕ್ಕು?
ಚಿಕ್ಕಮಗಳೂರು ತಹಶಿಲ್ದಾರ್ ನಂದ್ ಕುಮಾರ್ ನೇತೃತ್ವದಲ್ಲಿ ಕಾಡಿನಿಂದ ತೆರವುಗೊಳಿಸಿದ ಪ್ರತಿಮೆಯನ್ನು ಚಿಕ್ಕಮಗಳೂರು ನಗರದ ಅಲ್ಪ ಸಂಖ್ಯಾತರ ಮಹಿಳಾ ವಸತಿನಿಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಅಂಬೇಡ್ಕರ್ ಪ್ರತಿಮೆ ದುರುಪಯೋಗ ಪಡಿಸಿಕೊಂಡ ಕಾರಣ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂತೋಷ್ ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ.